ಚಿನ್ನ ಅಡ ಇಟ್ಟು ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುತ್ತಾರೆ ಕರ್ನಾಟಕದ ರೈತರು!

By Kannadaprabha NewsFirst Published Oct 16, 2019, 12:08 PM IST
Highlights

ಚಿನ್ನ ಅಡವಿಟ್ಟು ಅಗತ್ಯಕ್ಕಿಂತ ಹೆಚ್ಚಿನ ಸಾಲ ಪಡೆವ ರೈತರು | ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ರೈತರ ಸಾಲ ಸಮಸ್ಯೆಗೆ ಕಾರಣ |  ಆರ್‌ಬಿಐ ವರದಿಯಲ್ಲಿ ಕಳವಳ |  ಚಿನ್ನ ಅಡವಿಟ್ಟು ಪೂರಕ ಕೃಷಿ ಸಾಲ ನೀಡದಂತೆ ಬ್ಯಾಂಕ್‌ಗಳಿಗೆ ಕೋರಿಕೆ

ನವದೆಹಲಿ (ಅ. 16): ‘ರೈತರು ತಮಗೆ ಬೇಕಾದ ಅಗತ್ಯ ಕೃಷಿ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇದು ರೈತರ ಸಾಲ ಸಮಸ್ಯೆಯನ್ನು ಇನ್ನಷ್ಟುತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಸಿದೆ.

ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ‘ಕೃಷಿ ಸಾಲ ಪರಿಶೀಲನೆ’ ಎಂಬ ವರದಿ ಸಿದ್ಧಪಡಿಸಿದ್ದು, ‘ಕೃಷಿ ಸಾಲಕ್ಕೆ ಪೂರಕವಾಗಿ ಚಿನ್ನ ಅಡವಿಟ್ಟು ಹೆಚ್ಚು ಸಾಲ ಪಡೆಯುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿ ಇದು ದೃಢಪಟ್ಟಿದೆ’ ಎಂದು ಹೇಳಿದೆ.

2 ಸಾವಿರ ನೋಟು ಮುದ್ರಣವೇ ಸ್ಥಗಿತ; ಚಲಾವಣೆ ನಿಲ್ಲುತ್ತಾ?

‘ಬ್ಯಾಂಕ್‌ಗಳು ಇತರ ಸಾಲಗಳಿಗೆ ಶೇ.12ರಿಂದ ಶೇ.14ರಷ್ಟುಬಡ್ಡಿ ವಿಧಿಸುತ್ತವೆ. ಆದರೆ ಕೃಷಿ ಸಾಲವು ಶೇ.7 ಅಥವಾ ಶೇ.4ರಷ್ಟುಅಗ್ಗದ ಬಡ್ಡಿದರದಲ್ಲಿ ಲಭಿಸುತ್ತದೆ. ಬ್ಯಾಂಕ್‌ಗಳು ಕೃಷಿ ಸಾಲ ನೀಡುವ ಜತೆಗೆ, ಸುರಕ್ಷತೆ ದೃಷ್ಟಿಯಿಂದ ಚಿನ್ನ ಅಡವಿಟ್ಟುಕೊಂಡು ಜಾಸ್ತಿ ಕೃಷಿ ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್‌ ನಿಧಿ ಬೇರೆಡೆ ಹರಿದು ಹೋದಂತಾಗುತ್ತದೆ ಹಾಗೂ ರೈತರ ಸಾಲದ ಸಮಸ್ಯೆಯನ್ನು ಹೆಚ್ಚಾಗುತ್ತದೆ’ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

‘ಹೀಗಾಗಿ ಬ್ಯಾಂಕ್‌ಗಳು ಕೃಷಿ ಸಾಲವನ್ನು ಚಿನ್ನದ ಸಾಲದ ಜತೆ ಪೂರಕವಾಗಿ ನೀಡಬಾರದು’ ಎಂದು ಆರ್‌ಬಿಐ ವರದಿಯಲ್ಲಿ ಮನೆ ಮಾಡಲಾಗಿದೆ. 2018 ರಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ ಸಮೀಕ್ಷೆ ನಡೆಸಿ, ‘ದೇಶದಲ್ಲಿನ ಪ್ರತಿ 2 ಕೃಷಿ ಕುಟುಂಬಗಳಲ್ಲಿ 1 ಕುಟುಂಬವು ಸಾಲಪೀಡಿತವಾಗಿದೆ. ಸಾಲವು ಅವರ ವಾರ್ಷಿಕ ಆದಾಯಕ್ಕೆ ಹೆಚ್ಚೂಕಡಿಮೆ ಸಮನಾಗಿದೆ’ ಎಂದಿತ್ತು.

click me!