
ನವದೆಹಲಿ(ಆ.30): 'ಶಾಶ್ವತ ಮಿತ್ರ ಅಥವಾ ಶತ್ರು ಯಾರೂ ಇಲ್ಲ, ಕೇವಲ ರಾಷ್ಟ್ರೀಯ ಹಿತಾಸಕ್ತಿಗಳು ಮಾತ್ರ ಶಾಶ್ವತ'ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿರುವ ಬೆನ್ನಲ್ಲೇ ದಿಟ್ಟ ಹೇಳಿಕೆ ನೀಡಿದ್ದಾರೆ.
ಎನ್ಡಿಟಿವಿ ರಕ್ಷಣಾ ಶೃಂಗಸಭೆ 2025 ರಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅತ್ಯಂತ ಪ್ರಮುಖವಾಗಿರಿಸಿಕೊಳ್ಳಬೇಕಾಗುತ್ತದೆ. ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಪ್ರತಿದಿನ ಹೊಸ ಸವಾಲುಗಳು ಹೊರಹೊಮ್ಮುತ್ತಿವೆ. ಸಾಂಕ್ರಾಮಿಕ ರೋಗ, ಭಯೋತ್ಪಾದನೆ, ಮತ್ತು ಪ್ರಾದೇಶಿಕ ಸಂಘರ್ಷಗಳಂತಹ ಸವಾಲುಗಳು ಈ ಶತಮಾನವನ್ನು ಅತ್ಯಂತ ಅಸ್ಥಿರಗೊಳಿಸಿವೆ. ಈ ಸವಾಲುಗಳ ನಡುವೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿರಿಸಿಕೊಂಡಿದೆ. ಯಾರನ್ನೂ ಶತ್ರು ಎಂದು ಪರಿಗಣಿಸದಿದ್ದರೂ, ನಮ್ಮ ರೈತರು, ಉದ್ಯಮಿಗಳು ಮತ್ತು ದೇಶದ ಆರ್ಥಿಕತೆಯ ಹಿತಾಸಕ್ತಿಗಳೇ ಮೊದಲ ಆದ್ಯತೆ ಎಂದು ರಾಜನಾಥ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
ಸ್ವಾವಲಂಬನೆ ಆಯ್ಕೆಯಲ್ಲ, ಅವಶ್ಯಕತೆ:
ಸ್ವಾವಲಂಬನೆಯನ್ನು ಭಾರತದ ಉಳಿವು ಮತ್ತು ಪ್ರಗತಿಗೆ ಅತ್ಯಗತ್ಯವೆಂದ ರಾಜನಾಥ್ ಸಿಂಗ್ ಅವರು, ಮೊದಲು ಸ್ವಾವಲಂಬನೆಯನ್ನು ಸವಲತ್ತು ಎಂದು ಭಾವಿಸಲಾಗಿತ್ತು, ಆದರೆ ಇಂದು ಅದು ಅವಶ್ಯಕತೆಯಾಗಿದೆ. ಬಾಹ್ಯ ಅವಲಂಬನೆ ಇನ್ನು ಒಂದು ಆಯ್ಕೆಯಲ್ಲ ಎಂದ ರಕ್ಷಣಾ ಸಚಿವರು,. 2014 ರಲ್ಲಿ ಭಾರತದ ರಕ್ಷಣಾ ರಫ್ತು ಕೇವಲ ₹700 ಕೋಟಿಯಷ್ಟಿದ್ದರೆ, ಇಂದು ಅದು ₹24,000 ಕೋಟಿಗೆ ಏರಿದೆ ಎಂದು ಉದಾಹರಿಸಿದರು, ಇದು ಭಾರತವು ರಕ್ಷಣಾ ಉತ್ಪಾದಕ ಮತ್ತು ರಫ್ತುದಾರನಾಗಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ.
ಆಪರೇಷನ್ ಸಿಂದೂರ್ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು?
ಭಾರತೀಯ ಸೇನೆಯ ಸಾಮರ್ಥ್ಯವನ್ನು ಕೊಂಡಾಡಿದ ರಕ್ಷಣಾ ಸಚಿವರು, ನಮ್ಮ ಪಡೆಗಳು ಸ್ಥಳೀಯ ಉಪಕರಣಗಳೊಂದಿಗೆ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿವೆ. ಇದಕ್ಕೆ ದೂರದೃಷ್ಟಿ, ದೀರ್ಘ ಸಿದ್ಧತೆ, ಮತ್ತು ಸಮನ್ವಯ ಅಗತ್ಯ. ಆಪರೇಷನ್ ಸಿಂದೂರ್ ಇದು ಕೆಲವೇ ದಿನಗಳ ಯುದ್ಧವಲ್ಲ, ವರ್ಷಗಳ ಕಾರ್ಯತಂತ್ರದ ಸಿದ್ಧತೆ ಮತ್ತು ಸ್ವದೇಶಿ ಉಪಕರಣಗಳ ಶಕ್ತಿಯ ಫಲಿತಾಂಶ. ಒಬ್ಬ ಓಟಗಾರ ಒಂದು ಕ್ಷಣದಲ್ಲಿ ಗೆದ್ದಂತೆ ಕಾಣಬಹುದು, ಆದರೆ ಅದರ ಹಿಂದೆ ವರ್ಷಗಳ ಕಠಿಣ ಪರಿಶ್ರಮವಿರುತ್ತದೆ. ಅದೇ ರೀತಿ, ನಮ್ಮ ಸೇನೆಯ ಯಶಸ್ಸಿನ ಹಿಂದೆ ದೀರ್ಘಕಾಲದ ಸಿದ್ಧತೆಯಿದೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.
ಟ್ರಂಪ್ನ ಸುಂಕಕ್ಕೆ ಭಾರತದ ಪ್ರತಿಕ್ರಿಯೆ:
ಟ್ರಂಪ್ ಸುಂಕ ಬೆದರಿಕೆಯು ಭಾರತದ ಆರ್ಥಿಕತೆಗೆ ಸವಾಲು ಒಡ್ಡಿದರೂ, ರಾಜನಾಥ್ ಸಿಂಗ್ರ ಈ ಹೇಳಿಕೆ ಭಾರತದ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನಾವು ಯಾರೊಂದಿಗೂ ಶತ್ರುತ್ವ ಬಯಸುವುದಿಲ್ಲ, ಆದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಯಾವುದೇ ರಾಜಿ ಇಲ್ಲ ಎಂದು ಅವರು ದೃಢವಾಗಿ ಹೇಳಿದ್ದಾರೆ. ಭಾರತವು ಸ್ವಾವಲಂಬನೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂಬ ಸಂದೇಶವನ್ನು ರಾಜನಾಥ್ ಸಿಂಗ್ ಸ್ಪಷ್ಟವಾಗಿ ನೀಡಿದ್ದಾರೆ.
ರಾಜನಾಥ್ ಸಿಂಗ್ ಅವರ ಈ ಹೇಳಿಕೆಯು ಟ್ರಂಪ್ನ ಸುಂಕ ನೀತಿಗೆ ಭಾರತದ ದಿಟ್ಟ ಉತ್ತರವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಬಲವಾದ ನಿಲುವನ್ನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ