ಆಡೋದು ಒಂದು, ಮಾಡೋದು ಒಂದು; ದ್ವಂದ್ವ ನೀತಿ ಜನತೆ ನೋಡುತ್ತಿದೆ; ರಾಹುಲ್‌ ಗಾಂಧಿ

Published : Aug 17, 2022, 12:51 PM IST
ಆಡೋದು ಒಂದು, ಮಾಡೋದು ಒಂದು; ದ್ವಂದ್ವ ನೀತಿ ಜನತೆ ನೋಡುತ್ತಿದೆ; ರಾಹುಲ್‌ ಗಾಂಧಿ

ಸಾರಾಂಶ

Bilkis Bano Convicts Release: ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ್‌ ಸರ್ಕಾರದ ನಿಲುವನ್ನು ರಾಹುಲ್‌ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ನರೇಂದ್ರ ಮೋದಿಯವರೇ ನೀವು ಆಡೋದು ಒಂದು ಮಾಡೋದು ಒಂದು, ಇದನ್ನು ದೇಶದ ಜನತೆ ನೋಡುತ್ತಿದೆ ಎಂದು ರಾಹುಲ್‌ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಬಿಲ್ಕಿಸ್‌ ಬಾನೊ ಪ್ರಕರಣದ ಅತ್ಯಾಚಾರಿಗಳನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದ್ದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಅವರು, ಆಡುವುದೊಂದು - ಮಾಡುವುದೊಂದು ನಿಮ್ಮ ದ್ವಂದ್ವ ನೀತಿಯನ್ನು ಇಡೀ ದೇಶದ ಜನತೆ ನೋಡುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಲ್ಕಿಸ್‌ ಬಾನೊ ಪ್ರಕರಣದ ಎಲ್ಲಾ 11 ಆರೋಪಿಗಳನ್ನು ಶಿಕ್ಷೆಯಿಂದ ಮುಕ್ತಿಗೊಳಿಸಿ ಗುಜರಾತ್‌ ಸರ್ಕಾರ ಸ್ವತಂತ್ರೋತ್ಸವದ ಪ್ರಯುಕ್ತ ಬಿಡುಗಡೆ ಗೊಳಿಸಿದೆ. ಇದು ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸ್ವತಂತ್ರೋತ್ಸವದಂದು ಮಾತನಾಡಿದ್ದ ಮೋದಿ, ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬದಲಾಗಬೇಕು. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಆಗ್ರಹಿಸಿದ್ದರು. ಆದರೆ ಮರುದಿನವೇ ಅತ್ಯಾಚಾರಿಗಳಿಗೆ ಪ್ರಧಾನಿ ಮೋದಿಯವರ ರಾಜ್ಯ ಗುಜರಾತ್‌ನಲ್ಲೇ ಬಿಡುಗಡೆ ಭಾಗ್ಯ ದೊರೆತಿರುವುದನ್ನು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. 

ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, "ಐದು ತಿಂಗಳ ಗರ್ಭಿಣಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಮೂರು ವರ್ಷದ ಹೆಣ್ಣುಮಗುವನ್ನು ಕೊಲೆ ಮಾಡಿದ ಅಪರಾಧಿಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಬಿಡುಗಡೆಯಾಗಿದ್ದಾರೆ. ಇದರಿಂದ ದೇಶದ ಮಹಿಳೆಯರಿಗೆ ಯಾವ ಸಂದೇಶವನ್ನು ಸರ್ಕಾರ ನೀಡುತ್ತಿದೆ. ಪ್ರಧಾನಿಯವರೇ ಇಡೀ ದೇಶ ನೀವು ಹೇಳಿದ್ದನ್ನು ಮತ್ತು ಮಾಡುತ್ತಿರುವುದನ್ನು ನೋಡುತ್ತಿದೆ," ಎಂದು ಹೇಳಿದ್ದಾರೆ. 

ಕೇಂದ್ರ ಮತ್ತು ಗುಜರಾತ್‌ ಎರಡರಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ, ಅತ್ಯಾಚಾರಿಗಳ ಮೇಲೆ ಎರಡೂ ಸರ್ಕಾರಗಳ ನಿಲುವು ದ್ವಂದ್ವದಿಂದ ಕೂಡಿರುವಂತೆ ಭಾಸವಾಗುತ್ತಿದೆ. ಈ ದ್ವಂದ್ವಕ್ಕೆ ಕಾರಣವಾಗಿರುವುದು, ಗುಜರಾತಿನ ಬಿಲ್ಕಿಸ್‌ ಬಾನೊ ಅತ್ಯಾಚಾರ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು. 2002ರ ಗುಜರಾತ್‌ ನರಮೇಧದ ಸಂದರ್ಭದಲ್ಲಿ ಮುಸಲ್ಮಾನ ಮಹಿಳೆಯೊಬ್ಬಳನ್ನು ಐದು ತಿಂಗಳ ಗರ್ಭಿಣಿ ಎಂಬ ಕರುಣೆಯನ್ನೂ ತೋರದೇ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಆಕೆಯ ಪುಟ್ಟ ಹೆಣ್ಣುಮಗುವನ್ನು ಕೊಲೆ ಮಾಡಲಾಗಿತ್ತು. ಜತೆಗೆ ಒಂದೇ ಕುಟುಂಬದ ಐವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದ ಬಳಿಕ, ಹನ್ನೊಂದು ಜನ ಅತ್ಯಾಚಾರ ಮಾಡಿದ್ದರು. 75ನೇ ಸ್ವತಂತ್ರೋತ್ಸವದ ಅಂಗವಾಗಿ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ನಡಾವಳಿಗಳನ್ನು ಜಾರಗೆ ತಂದಿತ್ತು. ಅದರಲ್ಲಿ ಮುಖ್ಯವಾಗಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬಾರದು ಎಂದು ಸೂಚಿಸಲಾಗಿತ್ತು. ಇಷ್ಟಾದರೂ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಬಿಲ್ಕಿಸ್ ಬಾನೋಗೆ 50 ಲಕ್ಷ ರೂ. ಪರಿಹಾರ, ಸರ್ಕಾರಿ ಉದ್ಯೋಗ: ಸುಪ್ರೀಂ ಸೂಚನೆ!

ತಾಂತ್ರಿಕವಾಗಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಯ ವಿರುದ್ಧ ಗುಜರಾತ್‌ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದೇ ವರ್ಷ ಮೇ ತಿಂಗಳಲ್ಲಿ ಬಿಲ್ಕಿಸ್‌ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬ ಶಿಕ್ಷೆ ಪ್ರಮಾಣವನ್ನು ಮರು ಪರಿಶೀಲಿಸಿ ಪರಿಗಣಿಸಬೇಕು. ಯಾಕೆಂದರೆ 15 ವರ್ಷಗಳ ಕಾಲ ಈಗಾಗಲೇ ಜೈಲುಶಿಕ್ಷೆ ಅನುಭವಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಶುಶ್ರೂಷಾ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ ಈ ಸಂಬಂಧ ಗುಜರಾತ್‌ ಸರ್ಕಾರ ಕ್ರಮ ಕೈಗೊಳ್ಳಬಹುದೇ ಹೊರತು, ಸುಪ್ರೀಂ ಕೋರ್ಟ್‌ ಯಾವುದೇ ಆದೇಶ ನೀಡುವುದಿಲ್ಲ ಎಂದು ಹೇಳಿತ್ತು. ಅಪರಾಧಿಯ ಅರ್ಜಿಯನ್ನು ಪರಿಗಣಿಸಿದ ಗುಜರಾತ್‌ ಸರ್ಕಾರ ಪ್ರಕರಣದ ಎಲ್ಲಾ ಹನ್ನೊಂದು ಅಪರಾಧಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. 

ಇದನ್ನೂ ಓದಿ: Bilkis Bano Case: 11 ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ, ಗುಜರಾತ್‌ ಸರ್ಕಾರದ ವಿರುದ್ಧ ಆಕ್ರೋಶ

ಆದರೆ ಕೇಂದ್ರ ಸರ್ಕಾರದ ನೀತಿಗೂ ಗುಜರಾತ್‌ ಸರ್ಕಾರದ ನೀತಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಗಳ ಪ್ರಕಾರ ಅತ್ಯಾಚಾರಿಗಳನ್ನು ಮತ್ತು ಜೀವಿತಾವಧಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳನ್ನು ಬಿಡುಗಡೆ ಮಾಡಬಾರದು. ಆದರೆ ಗುಜರಾತ್‌ ಸರ್ಕಾರ ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್