
ನವದೆಹಲಿ (ಮಾರ್ಚ್ 27, 2023): ‘ಅನರ್ಹರಾಗಿರುವ ಸಂಸದ ರಾಹುಲ್ ಗಾಂಧಿ ವಿದೇಶಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದುಕೊಂಡಿದ್ದಾರೆ ಎಂದು ಅವರ ಸೋದರಿ ಪ್ರಿಯಾಂಕಾ ಗಾಂಧಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಭಾನುವಾರ ಹೇಳಿದ್ದಾರೆ. ‘ರಾಹುಲ್ ಗಾಂಧಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಕುರಿತಾಗಿ ಅವರು ಸಲ್ಲಿಸಿರುವ ಯಾವುದೇ ಚುನಾವಣಾ ಅಫಿಡವಿಟ್ಗಳಲ್ಲಿ ನಮೂದಿಸಿಲ್ಲ. ಪ್ರಿಯಾಂಕ ವಾದ್ರಾ ಅವರು ಅನರ್ಹ ಸೋದರನಂತೆ ಸುಳ್ಳು ಹೇಳುತ್ತಿದ್ದಾರೆ. ಅವರ ಕುಟುಂಬದ ಕುರಿತಾಗಿ ನಕಲಿ ಇಲ್ಲದಿರುವುದು ಏನಾದರೂ ಇದೆಯೇ?’ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆಯನ್ನು ಖಂಡಿಸಿ ಭಾನುವಾರ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಿಯಾಂಕಾ, ‘ರಾಹುಲ್ ಗಾಂಧಿ ವಿಶ್ವದ 2 ಪ್ರಮುಖ ವಿಶ್ವವಿದ್ಯಾಲಯಗಳಾದ ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ನಿಂದ ಪದವಿ ಪಡೆದುಕೊಂಡಿದ್ದಾರೆ. ಆದರೂ ಅವರನ್ನು ನೀವು ಪಪ್ಪು ಅಂತೀರಿ’ ಎಂದು ಕಿಡಿಕಾರಿದ್ದರು.
ಇದನ್ನು ಓದಿ: ಅನರ್ಹ ಸಂಸದ ಎಂದು ಟ್ವಿಟ್ಟರ್ ಪ್ರೊಫೈಲ್ನಲ್ಲಿ ಬರೆದುಕೊಂಡ 'ಕೈ' ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ಸತ್ಯಾಗ್ರಹ ಗಾಂಧೀಜಿಗೆ ಅವಮಾನ: ಬಿಜೆಪಿ
ಕಾಂಗ್ರೆಸ್ ಪಕ್ಷ ನಡೆಸಿದ ‘ಸಂಕಲ್ಪ ಸತ್ಯಾಗ್ರಹ’ ದೇಶದ ಸಂವಿಧಾನದ ವಿರುದ್ಧ ನಡೆಸಿದ ಪ್ರತಿಭಟನೆ ಎಂದು ಬಿಜೆಪಿ ಟೀಕಿಸಿದೆ. ‘ದೇಶದ ಹಿಂದುಳಿದ ವರ್ಗದವರ ವಿರುದ್ಧ ಮಾತನಾಡಿದ್ದಕ್ಕಾಗಿ ಕೋರ್ಟ್ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ್ದು, ಈಗ ಕೋರ್ಟ್ ತೀರ್ಪಿನ ವಿರುದ್ಧವೇ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುವ ಮೂಲಕ ಹಿಂದುಳಿದ ವರ್ಗದವರ ವಿರುದ್ಧದ ಟೀಕೆಯನ್ನು ಸಮರ್ಥಿಸಿಕೊಂಡಿದೆ’ ಎಂದೂ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಕಾಂಗ್ರೆಸ್ನ ಪ್ರತಿಭಟನೆ ಮಹಾತ್ಮ ಗಾಂಧೀಜಿಗೆ ಮಾಡಿದ ಅವಮಾನ. ಏಕೆಂದರೆ ಮಹಾತ್ಮ ಗಾಂಧೀಜಿ ದೇಶದ ಸಾಮಾಜಿಕ ಉನ್ನತಿಗಾಗಿ ಸತ್ಯಾಗ್ರಹಗಳನ್ನು ನಡೆಸುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷ ವೈಯಕ್ತಿಕ ಕಾರಣಗಳಿಗಾಗಿ ಸತ್ಯಾಗ್ರಹ ನಡೆಸುತ್ತಿದೆ. ಇದು ಕೋರ್ಟ್ ತೀರ್ಪಿನ ವಿರುದ್ಧ ಆ ಪಕ್ಷ ಪ್ರದರ್ಶಿಸುತ್ತಿರುವ ದುರಹಂಕಾರ. ಈ ಸತ್ಯಾಗ್ರಹಕ್ಕೂ ಸತ್ಯಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಭಾರತದ ಪ್ರಧಾನಿ ಹೇಡಿ; ನನ್ನ ವಿರುದ್ಧವೂ ಕೇಸು ದಾಖಲಿಸಿ, ನನ್ನನ್ನೂ ಜೈಲಿಗೆ ಹಾಕಿ: ಪ್ರಿಯಾಂಕಾ ಗಾಂಧಿ ಆಕ್ರೋಶ
ಡಿಸ್‘ಕ್ವಾಲಿಫೈಡ್’ ಎಂಪಿ: ಟ್ವಿಟ್ಟರ್ ಪ್ರೊಫೈಲ್ ಬದಲಿಸಿದ ರಾಹುಲ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವೀಟರ್ ಖಾತೆಯಲ್ಲಿನ ಸ್ವ ವಿವರಣೆಯನ್ನು ಡಿಸ್‘ಕ್ವಾಲಿಫೈಡ್ ಎಂಪಿ’ (ಅನರ್ಹ ಸಂಸದ) ಎಂದು ಭಾನುವಾರ ಬದಲಿಸಿಕೊಂಡಿದ್ದಾರೆ.
‘ಮೋದಿ ಅಡ್ಡ ಹೆಸರಿನವರೆಲ್ಲ ಕಳ್ಳರು’ ಎಂಬ ಹೇಳಿಕೆಗಾಗಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಸದ್ಯ ಜಾಮೀನು ಪಡೆದಿರುವ ರಾಹುಲ್ ಗಾಂಧಿಯನ್ನು ಶುಕ್ರವಾರ ಲೋಕಸಭೆಯಿಂದ ಅನರ್ಹಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಮ್ಮ ಅಧಿಕೃತ ಖಾತೆ ಹಾಗೂ ವಯನಾಡ್ ಟ್ವಿಟ್ಟರ್ ಖಾತೆಯ ಪ್ರೊಫೈಲ್ನ ಬಯೋದಲ್ಲಿ ಅವರು ತಮ್ಮ ಹುದ್ದೆಯ ಹೆಸರು ಬದಲಿಸಿಕೊಂಡು ಗಮನ ಸೆಳೆದಿದ್ದಾರೆ. ಅಲ್ಲದೇ ತಮ್ಮ ಶಿಕ್ಷೆಯ ವಿರುದ್ಧ ಹೋರಾಡುವುದಾಗಿಯೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೇಳಿವೆ.
ಇದನ್ನೂ ಓದಿ: Rahul Gandhi Disqualification: ಕೈ ಪ್ರತಿಭಟನೆಯಲ್ಲಿ ಜಗದೀಶ್ ಟೈಟ್ಲರ್ ಭಾಗಿ; ಗಾಂಧಿಗೆ ಅವಮಾನ ಎಂದು ನೆಟ್ಟಿಗರ ಟೀಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ