ಅತೃಪ್ತರ ಸಂಧಾನ ದಿನವೇ ರಾಹುಲ್ ಆಪ್ತೆ ರಾಜೀನಾಮೆ| ಎನ್ಎಸ್ಯುಐ ಅಧ್ಯಕ್ಷ ಸ್ಥಾನಕ್ಕೆ ರುಚಿ ಗುಡ್ಬೈ
ನವದೆಹಲಿ(ಡಿ.20): ನಾಯಕತ್ವದ ವಿರುದ್ಧ ದನಿ ಎತ್ತಿದ್ದ ಮುಖಂಡರ ಜತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾತುಕತೆ ನಡೆಸಿದ ದಿನವೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತೆಯಾಗಿರುವ ರುಚಿ ಗುಪ್ತಾ ಅವರು ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್ಎಸ್ಯುಐಗೆ ಶನಿವಾರ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಂಘಟನಾತ್ಮಕ ಬದಲಾವಣೆ ತರಲು ನಿರಂತರವಾಗಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಪಕ್ಷದ ಜಂಟಿ ಕಾರ್ಯದರ್ಶಿ ಕೂಡ ಆಗಿರುವ ರುಚಿ ಗುಪ್ತಾ ಅವರು ಹೇಳಿದ್ದಾರೆ.
ರಾಜೀನಾಮೆ ನೀಡಿದ್ದೇನೆ ಎಂದು ವಿಷಾದದಿಂದ ಪ್ರಕಟಿಸುತ್ತೇನೆ. ಅವಕಾಶ ನೀಡಿದ ರಾಹುಲ್ ಹಾಗೂ ಸೋನಿಯಾ ಅವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.