
ನವದೆಹಲಿ (ಏ.17): ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರದಲ್ಲಿ ಬಾಲಕ ರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ ಕಾರ್ಯಕ್ರಮವನ್ನು ವಿಮಾನದಲ್ಲಿಯೇ ವೀಕ್ಷಣೆ ಮಾಡಿದರು. ಸೂರ್ಯತಿಲಕ ರಾಮನ ಹಣೆಯ ಮೇಲೆ ಮೂಡುತ್ತಿದ್ದಂತೆ ಕೈಮುಗಿದು ನಮಸ್ಕರಿಸಿದ ಫೋಟೋವನ್ನು ಕೂಡ ಅವರು ಪ್ರಕಟಿಸಿದ್ದಾರೆ. 'ನನ್ನ ನಲ್ಬರಿ ಸಮಾವೇಶದ ನಂತರ ರಾಮ್ ಲಲ್ಲಾ ಮೇಲೆ ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕ್ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ' ಎಂದು ಮೋದಿ ಎರಡು ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ನಲ್ಬರಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಬಂದಿರುವ ವ್ಯಕ್ತಿಗಳು ತಮ್ಮ ಮೊಬೈಲ್ ಫೋನ್ನಲ್ಲಿನ ಫ್ಲ್ಯಾಶ್ ಲೈಟ್ಅನ್ನು ಸ್ವಿಚ್ ಆನ್ ಮಾಡುವ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಸೂರ್ಯತಿಲಕ ಸಂಭ್ರಮವನ್ನು ಆಚರಿಸುವಂತೆ ಮನವಿ ಮಾಡಿದ್ದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, "...ಇಡೀ ದೇಶದಲ್ಲಿ ಹೊಸ ವಾತಾವರಣವಿದೆ ಮತ್ತು 500 ವರ್ಷಗಳ ನಂತರ ಭಗವಾನ್ ರಾಮನ ಜನ್ಮದಿನವು ಬಂದಿದ್ದು, ಅವರು ತಮ್ಮ ಸ್ವಂತ ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಸೌಭಾಗ್ಯವನ್ನು ಪಡೆದಿದ್ದಾರೆ" ಎಂದು ಹೇಳಿದರು.
Photos: ರಾಮನವಮಿಯಂದು ಕಣ್ತುಂಬಿಕೊಳ್ಳಿ ಪ್ರಭು ಶ್ರೀರಾಮನ ಭವ್ಯ ಅಲಂಕಾರ!
ಇದಕ್ಕೂ ಮುನ್ನ, ಬುಧವಾರ ರಾಮನವಮಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಉತ್ಸವವನ್ನು ಆಚರಿಸಲಾಗಿರುವುದರಿಂದ ಅಯೋಧ್ಯೆಯು ಅಪಾರ ಆನಂದ ತುಂಬಿದೆ ಎಂದು ಹೇಳಿದರು. "ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ನಂತರದ ಮೊದಲ ರಾಮನವಮಿ ಒಂದು ಪೀಳಿಗೆಯ ಮೈಲಿಗಲ್ಲು, ಭರವಸೆ ಮತ್ತು ಪ್ರಗತಿಯ ಹೊಸ ಯುಗದೊಂದಿಗೆ ಶತಮಾನಗಳ ಭಕ್ತಿಯನ್ನು ಒಟ್ಟುಗೂಡಿಸುತ್ತದೆ. ಇದು ಕೋಟಿಗಟ್ಟಲೆ ಭಾರತೀಯರು ಕಾಯುತ್ತಿರುವ ದಿನ" ಎಂದು ಎಕ್ಸ್ನಲ್ಲಿ ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
Breaking: ಬಾಲಕರಾಮನ ಹಣೆಯ ಮೇಲೆ ಮೂಡಿತು ಸೂರ್ಯತಿಲಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ