
ನವದೆಹಲಿ(ಡಿ.13) ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಮಗಳು ನೆನಪಿಸಿಕೊಳ್ಳುವಂತೆ ತಂದೆಯಾಗಿ ಪ್ರಣಬ್’ ಎಂಬ ಪುಸ್ತಕ ಲೋಕಾರ್ಪಣೆಯಾಗಿದೆ. ಕಾಂಗ್ರೆಸ್ ಕಟ್ಟಾಳು, ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಬರೆದಿರುವ ಡೈರಿ, ಆಪ್ತರಲ್ಲಿ ನಡೆಸಿದ ಚರ್ಚೆ, ಕುಟುಂಬದ ಜೊತೆಗಿನ ಮಾತುಕತೆಗಳನ್ನು ಕ್ರೋಢೀಕರಿಸಿರುವ ಈ ಪುಸ್ತಕ ಬಿಡುಗಡೆಗೂ ಮೊದಲೇ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಹಲವು ಅಧ್ಯಾಯಗಳಿರುವ ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಹುತೇಕ ಕಾಂಗ್ರೆಸ್ ನಾಯಕರು ಗೈರಾಗಿದ್ದಾರೆ. ಆದರೆ ಮಾಜಿ ಹಣಕಾಸು ಸಚಿವ ಪಿ.ಚಿದಂಬಂರಂ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪುಸ್ತಕ ಬಿಡುಗಡೆ ಬಳಿಕ ಪ್ರಣಬ್ ಮುಖರ್ಜಿ ಪುತ್ರಿ ಜೊತೆ ಭೋಜನ ಸವಿದ ಚಿದಂಬಂರಂ ಶುಭಹಾರೈಸಿದ್ದಾರೆ.
ರಾಹುಲ್ ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ, ನರೇಂದ್ರ ಮೋದಿ ಜನರ ನಾಡಿ ಮಿಡಿತ ಅರಿತ ಪ್ರಧಾನಿ, ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡುವುದಿಲ್ಲ, ರಾಹುಲ್ ಕಚೇರಿಗೆ ಬೆಳಿಗ್ಗೆ, ರಾತ್ರಿ ವ್ಯತ್ಯಾಸ ಗೊತ್ತಿಲ್ಲ ಸೇರಿದಂತೆ ಹಲವು ಅಧ್ಯಾಯಗಳು ಈ ಪುಸ್ತಕದಲ್ಲಿದೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧವಾಗಿರುವ ಈ ಪುಸ್ತಕದ ಹಲವು ವಿಚಾರಗಳು ಬಿಡುಗಡೆಗೂ ಮೊದಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಇಷ್ಟೇ ಅಲ್ಲ ಕಾಂಗ್ರೆಸ್ಗೆ ತೀವ್ರ ಮುಖಭಂಗ ತಂದಿತ್ತು. ಸಹಜವಾಗಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕಾಂಗ್ರೆಸ್ನ ಬಹುತೇಕ ಪ್ರಮುಖ ನಾಯಕರು ಗೈರಾಗಿದ್ದರು.
ನರೇಂದ್ರ ಮೋದಿ ಜನರ ನಾಡಿ ಮಿಡಿತ ಅರಿತ ಪ್ರಧಾನಿ, ದಿ.ಪ್ರಣಬ್ ಮುಖರ್ಜಿ ಅಭಿಪ್ರಾಯ ಹಂಚಿಕೊಂಡ ಪುತ್ರಿ!
ದೆಹಲಿಯ ಅಂತಾರಾಷ್ಟ್ರೀಯ ಭಾರತ ಸೆಂಟರ್ ಹಾಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಬಳಿಕ ಮಾತನಾಡಿದ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ, ಪಿ ಚಿದಂಬರಂ ಆಗಮನದಿಂದ ಸಂತಸಗೊಂಡಿದ್ದಾರೆ. ನೀವು ಕಾರ್ಯಕ್ರಮಕ್ಕೆ ಆಗಮಿಸುತ್ತೀರಿ ಅನ್ನೋ ನಂಬಿಕೆ ಇರಲಿಲ್ಲ. ಆದರೆ ಕಾರ್ಯಕ್ರಮಕ್ಕೆ ಆಗಮಿಸಿರುವ ನಿಮಗೆ ಧನ್ಯವಾದ. ನಿಮ್ಮ ಆಗಮನ ಅತೀವ ಸಂತಸ ತಂದಿದೆ ಎಂದಿದ್ದಾರೆ.
ಕಾಂಗ್ರೆಸ್ನ ಬಹುತೇಕ ನಾಯಕರನ್ನು ಆಹ್ವಾನಿಸಲಾಗಿದೆ.ಆದರೆ ಪಿ ಚಿದಂಬಂರಂ ಹೊರತುಪಡಿಸಿ ಇತರ ನಾಯಕರು ಆಗಮಿಸಿಲಿಲ್ಲ. ಪ್ರಣಬ್ ಮುಖರ್ಜಿ ಕಾಂಗ್ರೆಸ್ ನಾಯಕರ ಕುರಿತು ಕೆಲ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಅಭಿಪ್ರಾಯ ಅತ್ಯಂತ ಕಠಿಣವಾಗಿತ್ತು. ಇದನ್ನು ಕಾಂಗ್ರೆಸ್ ಎಂದಿಗೂ ಅರಗಿಸಿಕೊಳ್ಳುವುದಿಲ್ಲ ಅನ್ನೋ ಸತ್ಯ ಪ್ರಣಬ್ಗೆ ತಿಳಿದಿತ್ತು. ಹೀಗಾಗಿ ಈ ವಿಚಾರಗಳನ್ನು ನನ್ನ ಬಳಿ ಬಿಟ್ಟು ಹೋದರು. ನಾನು ಈ ವಿಚಾರ, ಅಭಿಪ್ರಾಯ, ಮಾತುಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದೇನೆ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.
ರಾಷ್ಟ್ರಪತಿಗೂ ಮುನ್ನ ಪ್ರಣಬ್ ಮುಖರ್ಜಿ ಯುಪಿಎ 1 ಹಾಗೂ ಯುಪಿಎ2ರಲ್ಲಿ ಸಚವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿಗೂ ಆಪ್ತರಾಗಿದ್ದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಈ ಪುಸ್ತಕದಲ್ಲಿ ಪ್ರಣಬ್ ಯಾಕೆ ಪ್ರಧಾನಿಯಾಗಲಿಲ್ಲ ಅನ್ನೋ ವಿಚಾರವನ್ನೂ ಹೇಳಲಾಗಿದೆ. ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡುವುದಿಲ್ಲ. ಅವರ ಅಧಿಕಾರ ವ್ಯಾಪ್ತಿ ಕುಂಠಿತವಾಗದಂತೆ ಹಾಗೂ ಅಧಿಕಾರ ಚಲಾಯಿಸಲು ಅಡ್ಡಬರದ ವ್ಯಕ್ತಿಗಳೇ ಪ್ರಧಾನಿಯಾಗುತ್ತಾರೆ ಎಂದು ಪುತ್ರಿಗೆ ಹೇಳಿರುವ ಮಾತುಗಳನ್ನು ಶರ್ಮಿಷ್ಠಾ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಣಬ್ರನ್ನು ಪ್ರಧಾನಿ ಮಾಡುವುದು ಸೋನಿಯಾಗೆ ಇಷ್ಟವಿರಲಿಲ್ಲ, ಆತ್ಮಕಥೆಯಲ್ಲಿ ಸತ್ಯ ಬಯಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ