
ನವದೆಹಲಿ(ಮಾ.13): ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಭದ್ರತಾ ಮಂಡಳಿಯ ಸಭೆ ನಡೆಸಿದರು. ಇದರಲ್ಲಿ ಉಕ್ರೇನ್ ಸಮಸ್ಯೆಗೆ ಸಂಬಂಧಿಸಿದಂತೆ ಭಾರತದ ಭದ್ರತಾ ಸಿದ್ಧತೆ ಮತ್ತು ಪ್ರಸ್ತುತ ಜಾಗತಿಕ ಸನ್ನಿವೇಶವನ್ನು ಚರ್ಚಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಗಡಿ ಪ್ರದೇಶಗಳಲ್ಲಿ ಹಾಗೂ ಕಡಲ ಮತ್ತು ವಾಯುಪ್ರದೇಶದಲ್ಲಿ ಭಾರತದ ಭದ್ರತೆ ಮತ್ತು ಸನ್ನದ್ಧತೆಯ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಸೇರಿದಂತೆ ಉಕ್ರೇನ್ನಲ್ಲಿ ಇತ್ತೀಚಿನ ಘಟನೆಗಳ ಬಗ್ಗೆಯೂ ಪ್ರಧಾನ ಮಂತ್ರಿಗೆ ವಿವರಿಸಲಾಯಿತು. ಈ ಕಾರ್ಯಾಚರಣೆಯ ಅಡಿಯಲ್ಲಿ, ಭಾರತವು ಭಾರತೀಯರಿಗೆ ಮತ್ತು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದ ಜನರಿಗೆ ಸಹಾಯ ಮಾಡಿದೆ ಎಂದು ಮೋದಿಗೆ ತಿಳಿಸಲಾಯಿತು.
ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರ ತರಲು ಎಲ್ಲ ಪ್ರಯತ್ನ
ಸಭೆಯಲ್ಲಿ ಖಾರ್ಕಿವ್ ನಲ್ಲಿ ಹತ್ಯೆಗೀಡಾದ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಅವರ ಮೃತದೇಹವನ್ನು ತರುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದರು. ನವೀನ್ನ ತಂದೆಯೊಂದಿಗೆ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದರು, ನಂತರ ಅವರ ತಂದೆ ಮಗನ ಶವವನ್ನು ತರುವಂತೆ ಮನವಿ ಮಾಡಿದರು. ನವೀನ್ ಮಾರ್ಚ್ 1 ರಂದು ಖಾರ್ಕಿವ್ನಲ್ಲಿದ್ದರು. ಅಲ್ಲಿಂದ ಹೊರಡುವಂತೆ ಸಲಹೆ ನೀಡಿದ ಬಳಿಕ ದಿನಸಿ ಸಾಮಾನು ಪಡೆಯಲು ಅಂಗಡಿಗೆ ತೆರಳಿದ್ದರು. ಈ ನಡುವೆ ರಷ್ಯಾದ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಎಂಬಿಬಿಎಸ್ ವ್ಯಾಸಂಗ ಮಾಡಲು ಉಕ್ರೇನ್ಗೆ ತೆರಳಿದ್ದ ಅವರು ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು.
ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಗಳನ್ನು ವೇಗಗೊಳಿಸಿ
ಮೂಲಗಳ ಪ್ರಕಾರ, ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ತಂತ್ರಜ್ಞಾನ ಬಳಕೆ ಮತ್ತು ಅದರಲ್ಲಿ ಭಾರತದ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ಈ ಬಾರಿಯ ಬಜೆಟ್ ನಲ್ಲಿ ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕುರಿತು ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಪ್ರಧಾನಿ ಸೂಚನೆ ನೀಡಿದರು. ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಸಂಯೋಜಿಸಲು ಪ್ರಧಾನಮಂತ್ರಿಯವರು ಒತ್ತು ನೀಡಿದರು. ರಕ್ಷಣಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು, ಇದರಿಂದ ನಮ್ಮ ಭದ್ರತೆಯನ್ನು ಬಲಪಡಿಸುವುದು ಮಾತ್ರವಲ್ಲದೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ