
ನವದೆಹಲಿ: ಭಾರತವನ್ನು ಕಟ್ಟಿಹಾಕಲು ಪಾಕಿಸ್ತಾನಕ್ಕೆ ತನ್ನ ಅತ್ಯಾಧುನಿಕ ಕ್ಷಿಪಣಿ, ವಿಮಾನಗಳನ್ನು ನೀಡಿದ್ದ ಕಮ್ಯುನಿಸ್ಟ್ ದೇಶ ಚೀನಾ ಇದೀಗ ಅದೇ ಕಾರಣದಿಂದಾಗಿ ಪೇಚಿಗೀಡಾಗಿದೆ. ಏಕೆಂದರೆ ಪಾಕಿಸ್ತಾನವು ಬಳಸಿದ ಚೀನಾ ನಿರ್ಮಿತ ಕ್ಷಿಪಣಿ ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತ ಹೊಡೆದುರುಳಿಸಿದೆ. ಹೀಗಾಗಿ ವಿಶ್ವದಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕುಸಿತದ ಭೀತಿ ಉಂಟಾಗಿದೆ. ತನ್ನ ಶಸ್ತ್ರಾಸ್ತ್ರ ಧ್ವಂಸ ಆಗಿದ್ದಷ್ಟೇ ಆದರೆ ಚೀನಾ ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಆದರೆ ಇದರಿಂದ ತನ್ನ ರಕ್ಷಣಾ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಬಹುದು ಎಂಬ ಆತಂಕ ಅದನ್ನು ಕಾಡುತ್ತಿದೆ. ಹೀಗಾಗಿ ಭಾರತದ ಮೇಲಿನ ದಾಳಿಗೆ ತನ್ನ ಶಸ್ತ್ರಾಸ್ತ್ರ ಬಳಸಬೇಡಿ ಎಂದು ಸೂಚಿಸಿದ್ದರೂ ಬಳಸಿದ್ದು ಏಕೆ ಎಂದು ಕಾರಣ ಕೇಳಿ ಪಾಕಿಸ್ತಾನದ ರಾಯಭಾರ ಸಿಬ್ಬಂದಿಗಳಿಗೆ ಚೀನಾ ಸಮನ್ಸ್ ಜಾರಿ ಮಾಡಿದೆ.
ಚೀನಾ ಮಾನ ಕಳೆದ ಪಾಕಿಸ್ತಾನ
ಭಾರತದ ಮೇಲಿನ ದಾಳಿಗೆ ಪಾಕ್ ಬಳಸಿದ್ದ ಚೀನಾ ನಿರ್ಮಿತ ಪಿಎಸ್ 15 ಕ್ಷಿಪಣಿ, ಜೆ17 ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ. ಇದರಿಂದ ಪಾಕ್ಗೆ ನಷ್ಟವಾಗಿದೆಯಾದರೂ, ಅಲ್ಲಿ ಮುಖಭಂಗವಾಗಿರುವುದು ಮಾತ್ರ ಚೀನಾಗೆ ಭಾರತದಿಂದ ಪೆಟ್ಟು ತಿಂದು, ಜಾಗತಿಕ ಮಟ್ಟದಲ್ಲಿ ಚೀನಾದ ಶಸ್ತ್ರಾಸ್ತ್ರಗಳ ಘನತೆಗೆ ಧಕ್ಕೆಯುಂಟಾಗಿದೆ. ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಮುಂಚೂಣಿ ದೇಶಗಳ ಪೈಕಿ ಗುರುತಿಸಿಕೊಳ್ಳುವ ಚೀನಾಗೆ, ತನ್ನೊಂದಿಗೆ ಈಗಾಗಲೇ ಈಗಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿರುವ ಆಫ್ರಿಕಾ ದೇಶಗಳು ಅದರಿಂದ ಹಿಂದೆ ಸರಿಯಬಹುದು ಎಂಬ ಆತಂಕ ಶುರುವಾಗಿದೆ. ಜತೆಗೆ ಭವಿಷ್ಯಲ್ಲಿ ತನ್ನ ರಕ್ಷಣಾ ಉತ್ಪನ್ನಗಳ ಬೇಡಿಕೆ ಕುಸಿಯಬಹುದು ಎಂಬ ಭೀತಿಯೂ ಆರಂಭವಾಗಿದೆ ಎನ್ನಲಾಗಿದೆ. ಚೀನಾದಿಂದ ಬಾಂಗ್ಲಾ ದೇಶ, ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಆಫ್ರಿಕಾದ ಹಲವು ದೇಶಗಳು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತವೆ. ಇನ್ನೊಂದು ಕಡೆ, ಭಾರತದ ಸ್ವದೇಶಿ ಅಸ್ತ್ರಗಳಿಂದ ಪ್ರಭಾವಿತವಾಗಿರುವ ಕೆಲ ದೇಶಗಳು ಅವುಗಳನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿವೆ.
1971ರ ಇಂಡೋ ಪಾಕ್ ವಾರ್ ನೆನಪಿಸಿಸಿಕೊಂಡ ಯೋಧ ಹಸನ್
ಮಂಗಳೂರು: 1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಪಾಕ್ ಮೇಲೆ ದಾಳಿ ನಡೆಸುವ ಏರ್ಕ್ರಾಫ್ಟ್ ಗಳನ್ನು ಸಜ್ಜುಗೊಳಿಸಿ ನೀಡುತ್ತಿದ್ದೆವು. ಒಂದು ಸಂದರ್ಭದಲ್ಲಂತೂ ನಮ್ಮ ವಾಯುನೆಲೆ ಮೇಲೆ ವೈಮಾನಿಕ ದಾಳಿ ನಡೆದಿತ್ತು. ಪಾರಾಗಿದ್ದೆವು. ಯುದ್ಧವೆಂದರೆ ಕಷ್ಟದ ನಡುವೆಯೂ ವೈರಿ ರಾಷ್ಟ್ರವನ್ನು ಸದೆಬಡಿಯುವ ಉತ್ಸಾಹ ಇರುತ್ತಿತ್ತು. ಭಾರತೀಯ ವಾಯುಪಡೆಯಲ್ಲಿ ಏರ್ ಕ್ರಾಫ್ಟ್ ಮೆಕ್ಯಾ ನಿಕ್ ಆಗಿ 1972ರ ಭಾರತ- ಪಾಕ್ ಯುದ್ಧದಲ್ಲಿ ಪಾಲ್ಗೊಂಡು ಪ್ರಸ್ತುತ ಉಡುಪಿಯ ಉಚ್ಚಿಲದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಹಸನ್ ಸಾಹೇಬ್ ಮಾತುಗಳಿವು.
20 ವರ್ಷವಿದ್ದಾಗ ವಾಯುಪಡೆಗೆ ಸೇರ್ಪಡೆಯಾದೆ. ಅಲ್ಲಿ ಏರ್ಕ್ರಾಫ್ಟ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಟ್ರೈನಿಂಗ್ ದೊರೆತು ದೇಶದ ವಿವಿಧ ವಾಯುನೆಲೆಗಳಲ್ಲಿ ಸೇವೆ ಸಲ್ಲಿಸಿದೆ. ಯುದ್ಧದ ಸಂದರ್ಭ ನಮ್ಮ ತಂಡವನ್ನು ಸಿರ್ಸಾಕ್ಕೆ ನಿಯೋಜಿಸಲಾಯಿತು. ನಾವು ಯುದ್ಧ ವಿಮಾನಗಳನ್ನು ಸನ್ನದ್ದ ಗೊಳಿಸಿ ನೀಡುತ್ತಿದ್ದೆವು. ಅವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಹಿಂತಿರುಗುತ್ತಿದ್ದವು. ನಮ್ಮ ವಾಯುನೆಲೆ ಕೇಂದ್ರೀಕರಿಸಿ ಕ್ರಾಫ್ಟ್ಗಳು ಬರುವಾಗ ಸೈರನ್ ಮೊಳಗುತ್ತಿತ್ತು. ತಕ್ಷಣ ಬಂಕರ್ನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೆವು. ಒಂದು ಸಲ ನಾವಿದ್ದ ವಾಯುನೆಲೆ ಮೇಲೆ ವೈಮಾನಿಕ ದಾಳಿಯಾಗಿತ್ತು. ಅದೃಷ್ಟವಶಾತ್ ಸಾವು ನೋವು ಸಂಭವಿಸಲಿಲ್ಲ. ನಮ್ಮ ಬಳಿ 303 ರೈಫಲ್ ಇತ್ತು ಎಂದು ಸ್ಮರಿಸಿದರು.
ಪ್ರಸ್ತುತ ಹಸನ್ ಸಾಹೇಬ್ಗೆ 80ರ ಇಳಿವಯಸ್ಸು. 17 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅವರು ಮಸ್ಕತ್ ಸೇರಿ ವಿವಿಧೆಡೆ ಕೆಲಸ ನಿರ್ವಹಿಸಿ ಉಚ್ಚಿಲದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. 1971ರ ಅವಧಿಯಲ್ಲಿ ಸೀಮಿತ ವ್ಯವಸ್ಥೆಗಳ ನಡುವೆಯೂ ಭಾರತ ವಿಜಯ ಸಾಧಿಸಿತ್ತು. ಈಗ ಭಾರತದ ಸೇನೆ ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಅತ್ಯಂತ ಬಲಿಷ್ಠವಾಗಿದೆ. ಶತ್ರು ರಾಷ್ಟ್ರವನ್ನು ಹಿಮ್ಮೆಟ್ಟಿಸುವ ಶಕ್ತಿ ಇದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ