
ಕೋಯಿಕ್ಕೋಡ್ (ಏ.11): ಟಿಪ್ಪು ಸುಲ್ತಾನನ ಹೆಸರಿನೊಂದಿಗೆ ಸಂಬಂಧ ಹೊಂದಿರುವ ವಯನಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸುಲ್ತಾನ್ ಬತ್ತೇರಿ ಪಟ್ಟಣದ ಹೆಸರನ್ನು ಬದಲಾವಣೆ ಮಾಡುವಂತೆ ಬಿಜೆಪಿ ಆಗ್ರಹಿಸಿದೆ. ಈ ಪಟ್ಟಣದ ಮೂಲ ಹೆಸರು ಗಣಪತಿ ವಟ್ಟಂ ಆಗಿತ್ತು. ಆದರೆ, ಎರಡು ಶತಮಾನಗಳ ಹಿಂದೆ ಕೇರಳದ ಮಲಬಾರ್ ವಲಯದ ಮೇಲೆ ಅತಿಕ್ರಮ ಮಾಡಿದ್ದ ಟಿಪ್ಪು ಸುಲ್ತಾನ ಇದರ ಹೆಸರನ್ನು ಬದಲಾವಣೆ ಮಾಡಿದ್ದ ಎನ್ನಲಾಗಿದೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಪಿಐ ನಾಯಕಿ ಮತ್ತು ಅಡಳಿತಾರೂಢ ಎಲ್ಡಿಎಫ್ ಅಭ್ಯರ್ಥಿ ಆನಿ ರಾಜಾ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸುಲ್ತಾನ್ ಬತ್ತೇರಿ ನಿಜವಾದ ಹೆಸರು ಗಣಪತಿ ವಟ್ಟಂ. ಇದರ ಹೆಸರು ಬದಲಾವಣೆ ಮಾಡುವುದು ಅಗತ್ಯವಾಗಿದೆ ಎಂದು ಥಮಸ್ಸೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಸುರೇಂದ್ರನ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಟಿಪ್ಪು ಸುಲ್ತಾನನ ಮಲಬಾರ್ ಆಕ್ರಮಣದ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕ, ಕಾಂಗ್ರೆಸ್ ಮತ್ತು ಎಲ್ಡಿಎಫ್ ಇದನ್ನು ಸುಲ್ತಾನ್ ಬತ್ತೇರಿ ಎಂದು ಉಲ್ಲೇಖಿಸಲು ಬಯಸುತ್ತವೆ ಎಂದು ಆರೋಪಿಸಿದರು. ಕೇರಳದಲ್ಲಿರುವ ಇಂಥ ಸ್ಥಳಕ್ಕೆ ಯಾರೋ ದಾಳಿಕೋರನ ಹೆಸರನ್ನು ಏಕೆ ಇಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ಪಟ್ಟಣದ ಮೂಲ ಹೆಸರು ಗಣಪತಿವಟ್ಟಂ. ಎಷ್ಟು ವರ್ಷಗಳ ಹಿಂದೆ ಸುಲ್ತಾನನ ಆಕ್ರಮಣ ಸಂಭವಿಸಿತು? ಸುಲ್ತಾನ್ ಯಾರು? ವಯನಾಡ್ ಮತ್ತು ಇಲ್ಲಿನ ಜನರಿಗೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನನ ನೀಡಿರುವ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಗಣಪತಿ ವಟ್ಟಂ ಎನ್ನುವ ಹೆಸರಿನಿಂದಲೇ ಗುರುತಿಸಲ್ಪಟ್ಟತ್ತು. ಇಲ್ಲಿನ ಜನರಿಗೂ ಇದರ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ ಹಾಗೂ ಎಲ್ಡಿಎಫ್ ಮೊದಲಿನಿಂದಲೂ ಟಿಪ್ಪುವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಆತ ಕೇರಳದಲ್ಲಿ ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿದ. ಅದರಲ್ಲೂ ವಯನಾಡ್ ಹಾಗೂ ಮಲಬಾರ್ ಪ್ರದೇಶದಲ್ಲಿ ವ್ಯಾಪಕವಾಗಿತ್ತು ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
1984ರಲ್ಲಿ ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಮಹಾಜನ್ ಈ ವಿಚಾರವನ್ನು ಮೊಟ್ಟಮೊದಲ ಬಾರಿಗೆಎ ಪ್ರಸ್ತಾಪ ಮಾಡಿದ್ದರು ಎಂದೂ ಸುರೇಂದ್ರ ಹೇಳಿದ್ದಾರೆ. ಕೇರಳ ಟೂರಿಸಂ ಪ್ರಕಾರ ಕೂಡ ಸುಲ್ತಾನ್ ಬತ್ತೇರಿಯು ಮೊದಲು ಗಣಪತಿ ವಟ್ಟಂ ಎನ್ನುವ ಹೆಸರಿನಿಂದಲೇ ಗುರುತಿಸಿಕೊಂಡಿತ್ತು ಎಂದು ತಿಳಿಸಿದೆ.
ಈ ಪ್ರದೇಶಕ್ಕೆ ಮೈಸೂರಿನ ಹಿಂದಿನ ದೊರೆಯಾಗಿದ್ದ ಟಿಪ್ಪು ಸುಲ್ತಾನ್ ಹೊಸ ಹೆಸರು ನೀಟಿದ್ದ. ಮಲಬಾರ್ ಪ್ರದೇಶದ ಆಕ್ರಮಣದ ಸಮಯದಲ್ಲಿ ತನ್ನ ಯುದ್ಧಸಾಮಗ್ರಿಗಳನ್ನು ಆತ ಇಲ್ಲಿ ಎಸೆದಿದ್ದ. ಇಲ್ಲಿನ ಕೋಯಿಕ್ಕೋಡ್ನ ಹಳೇ ಜೈನ ದೇವಾಲಯದಲ್ಲಿ ತನ್ನ ಫಿರಂಗಿಗಳನ್ನು ನಿಲ್ಲಿಸಿದ್ದ ಎಂದಿದ್ದಾರೆ. ಸುಲ್ತಾನನ ಬ್ಯಾಟರಿ ಎನ್ನುವ ಹೆಸರು ದಿನಗಳು ಕಳೆದಂತೆ ಸುಲ್ತಾನ್ ಬತ್ತೇರಿ ಎಂದು ಬದಲಾಯಿಸುತ. ಟಿಪ್ಪು ಸುಲ್ತಾನ್ ಇಲ್ಲಿ ಕೋಟೆ ಕೂಡ ನಿರ್ಮಿಸಿದ್ದ. ಅದೀಗ ಪಾಳು ಬಿದ್ದಿದೆ. ಇದೇ ಕೋಟೆಯ ದಿಬ್ಬಗಳ ಮೇಲೆ ಪೊಲೀಸ್ ಠಾಣೆ ಇದೆ ಎಂದು ಕೇರಳ ಪ್ರವಾಸೋದ್ಯಮ ವೆಬ್ಸೈಟ್ನಲ್ಲಿ ವಿವರಿಸಲಾಗಿದೆ.
ವಯನಾಡು ಲೋಕಸಭಾ ರೇಸಲ್ಲಿ ರಾಹುಲ್ ಗಾಂಧಿ ಮುಂಚೂಣಿ
ಇನ್ನೊಂದೆಡೆ ಸುಲ್ತಾನ್ ಬತ್ತೇರಿಯ ಹೆಸರನ್ನು ಬದಲಾಯಿಸಬೇಕು ಎನ್ನುವ ಸುರೇಂದ್ರನ್ ಬೇಡಿಕೆಯನ್ನು ಕಾಂಗ್ರೆಸ್ ಲೇವಡಿ ಮಾಡಿದೆ. ಸುರೇಂದ್ರನ್ ಏನು ಬೇಕಾದರೂ ಹೇಳಬಹುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಟಿ ಸಿದ್ದಿಕ್ ಹೇಳಿದ್ದಾರೆ. "ಅವರು ಗೆಲ್ಲಲು ಹೋಗುವುದಿಲ್ಲ; ಇದು ಕೇವಲ ಸಾರ್ವಜನಿಕ ಗಮನವನ್ನು ಸೆಳೆಯುವ ಪ್ರಯತ್ನವಷ್ಟೇ. ಇದು ಆಗುವುದಿಲ್ಲ ಮತ್ತು ಅವರ ಹೇಳಿಕೆಗೆ ಯಾವುದೇ ಮೌಲ್ಯವಿಲ್ಲ" ಎಂದು ಹೇಳಿದ್ದಾರೆ.
ಮುಸ್ಲಿಂ ಲೀಗ್ ವೋಟ್ ಬೇಕು, ಧ್ವಜ ಬೇಡ್ವಾ? ಕಾಂಗ್ರೆಸ್ಗೆ ಪ್ರಶ್ನೆ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ