ಪುಲ್ವಾಮಾ ದಾಳಿಗೆ ಒಂದು ವರ್ಷ: ಉಗ್ರರ ದಾಳಿಗೆ 40 ಯೋಧರು ಬಲಿಯಾಗಿದ್ದ ಪ್ರಕರಣ!

By Kannadaprabha NewsFirst Published Feb 14, 2020, 7:59 AM IST
Highlights

ಪುಲ್ವಾಮಾ ದಾಳಿಗೆ ಇಂದಿಗೆ ಒಂದು ವರ್ಷ| ಉಗ್ರರ ದಾಳಿಗೆ 40 ಯೋಧರು ಬಲಿಯಾಗಿದ್ದ ಪ್ರಕರಣ| ಸಿಆರ್‌ಪಿಎಫ್‌ನಿಂದ ಇಂದು ಹುತಾತ್ಮ ಯೋಧರ ಸ್ಮರಣೆ

ನವದೆಹಲಿ[ಫೆ.14]: 40 ಮಂದಿ ಯೋಧರನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಶುಕ್ರವಾರ ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ. ಶ್ರೀನಗರದಲ್ಲಿರುವ ಸ್ಮಾರಕದಲ್ಲಿ ಯೋಧರಿಗೆ ಸಿಆರ್‌ಪಿಎಫ್‌ ಶ್ರದ್ಧಾಂಜಲಿ ಸಲ್ಲಿಸಲಿದೆ. ಪುಲ್ವಾಮಾದ ಲೆತ್‌ ಪೋರಾದಲ್ಲಿರುವ ಸಿಆರ್‌ಪಿಎಫ್‌ ತರಬೇತಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ ಹುತಾತ್ಮಯೋಧರನ್ನು ಸ್ಮರಿಸಲಿದ್ದಾರೆ.

2019 ಫೆ.14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು- ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬರ್‌ ಇದ್ದ ವಾಹನವನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು. ಪಾಕಿಸ್ತಾನ ಮೂಲದ ಜೈಷ್‌ ಎ- ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು. 1989ರ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿತ್ತು. ಈ ದಾಳಿಗೆ ದೇಶದೆಲ್ಲೆಡೆ ವ್ಯಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ ಹುತಾತ್ಮರಾದವರ ಪೈಕಿ ಕರ್ನಾಟಕದ ಯೋಧ ಎಚ್‌. ಗುರು ಕೂಡ ಒಬ್ಬರಾಗಿದ್ದಾರೆ.

ಹುತಾತ್ಮ ಯೋಧರ ಸ್ಮಾರಕ ಉದ್ಘಾಟನೆ

ಶ್ರೀನಗರ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಸ್ಮರಣಾರ್ಥ ಲಾತ್‌ಪೋರ ಸೇನಾ ಶಿಬಿರದಲ್ಲಿ ನಿರ್ಮಿಸಿರುವ ಸ್ಮಾರಕವೊಂದು ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ಈ ಸ್ಮಾರಕಕ್ಕಾಗಿ ಹುತಾತ್ಮರಾದ ಯೋಧರ ಮನೆಯಿಂದ ಮಣ್ಣನ್ನು ಸಂಗ್ರಹಿಸಲಾಗಿದ್ದು, ಅದರಿಂದ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ದಾಳಿಯಲ್ಲಿ ಹುತಾತ್ಮರಾದ ಎಲ್ಲಾ 40 ಮಂದಿ ಯೋಧರ ಹೆಸರು ಮತ್ತು ಅವರ ಭಾವಚಿತ್ರವನ್ನು ಸ್ಮಾರಕ ಒಳಗೊಂಡಿದೆ. ಸ್ಮಾರಕದಲ್ಲಿ ಸಿಆರ್‌ಪಿಎಫ್‌ನ ಧ್ಯೇಯ ವಾಕ್ತ-‘ಸೇವೆ ಮತ್ತು ನಿಷ್ಠೆ’ವನ್ನು ಸ್ಮಾರಕದಲ್ಲಿ ಬರೆಯಲಾಗುತ್ತದೆ ಎಂದು ಸಿಆರ್‌ಪಿಎಫ್‌ ಹೆಚ್ಚುವರಿ ನಿರ್ದೇಶಕ ಜುಲ್ಫಿಕರ್‌ ಹಸನ್‌ ತಿಳಿಸಿದ್ದಾರೆ.

"

click me!