
ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆ ಓದಿ ಮನಪರಿವರ್ತನೆಗೊಂಡವರು, ಜೀವನಲ್ಲಿ ಜಿಗುಪ್ಸೆಯಿಂದ ಹತಾಶೆಗೆ ಹೋದ ಮನಸ್ಸನ್ನು ಪುನಃ ಪ್ರಫುಲ್ಲಗೊಳಿಸಿಕೊಂಡವರು, ಜೀವನ ಎಂದರೇನು ಎಂಬುದನ್ನು ಅರಿತವರು, ಯಾವುದೋ ಮೋಹಕ್ಕೆ ಒಳಗಾಗಿ ತನ್ನತನವನ್ನೇ ಕಳೆದುಕೊಂಡು ಕೊನೆಗೆ ಸರಿದಾರಿಗೆ ಬಂದವರು ಅದೆಷ್ಟೋ ಮಂದಿ. ಅಂಥ ಒಂದು ಪವಿತ್ರ ಗ್ರಂಥ ಭಗವದ್ಗೀತೆ. ಈಗ ಕಳ್ಳನೊಬ್ಬ ಇದನ್ನೇ ಓದಿ ತನ್ನ ಬದುಕನ್ನೇ ಬದಲಿಸಿಕೊಂಡದ್ದೂ ಅಲ್ಲದೇ ಶ್ರೀಕೃಷ್ಣನ ದೇವಾಲಯದಿಂದ ಕಳುವು ಮಾಡಿದ್ದ ಲಕ್ಷಾಂತರ ಮೌಲ್ಯದ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿರುವ ಕುತೂಹಲದ ಘಟನೆ ನಡೆದಿದೆ.
ಇದು ನಡೆದಿರುವುದು ಒಡಿಶಾದಲ್ಲಿ. ಜಗತ್ಸಿಂಗ್ಪುರ ಜಿಲ್ಲೆಯ ತಿರಿಯಾ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಿಂದ 2015ರಲ್ಲಿ ಅನೇಕ ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದವು. ಎಷ್ಟು ಹುಡುಕಿದರೂ ಇದು ಸಿಕ್ಕಿರಲಿಲ್ಲ. 2015 ರ ಸಮಯದಲ್ಲಿ, ಯಜ್ಞಶಾಲೆಯಲ್ಲಿ ನಡೆದ ಯಜ್ಞದ ಸಮಯದಲ್ಲಿ ಈ ಒಡವೆಗಳನ್ನು ಕೃಷ್ಣನಿಗೆ ಹಾಕಲಾಗಿತ್ತು. ಆಗ ಅವನು ಇದನ್ನು ಕದ್ದಿದ್ದ. ಆದರೆ ಅಲ್ಲಿಂದ ಇಲ್ಲಿಯವರ ಇಲ್ಲಿಯವರೆಗೂ ಆತನಿಗೆ ನೆಮ್ಮದಿಯೇ ಇರಲಿಲ್ಲವಂತೆ. ಆದರೂ ಹಣಕ್ಕಾಗಿ ಅದನ್ನು ಕದ್ದಾಗಿತ್ತು. ಆದರೆ, ಆ ಆಭರಣಗಳನ್ನು ಅವನು ಮಾರಾಟ ಮಾಡಿರಲಿಲ್ಲ. ಹಾಗೆಯೇ ಇಟ್ಟುಕೊಂಡಿದ್ದ. ಅದಕ್ಕೆ ಕಾರಣ, ಪದೇ ಪದೇ ಆತನಿಗೆ ದುಃಸ್ವಪ್ನ ಬರುತ್ತಿದ್ದುದು. ಮಾತ್ರವಲ್ಲದೇ ಆಭರಣ ಕದ್ದಾಗಿನಿಂದಲೂ ಅವನ ಜೀವನದಲ್ಲಿ ಬರೀ ನೋವುಗಳೇ ತುಂಬಿಹೋಯಿತಂತೆ. ಸಮಸ್ಯೆಗಳ ಸರಮಾಲೆಯೇ ಆತನನ್ನು ಆವರಿಸಿದೆ.
ಅದೊಮ್ಮೆ ಭಗವದ್ಗೀತೆ ಆತನ ಕನಸಿನಲ್ಲಿ ಬಂದಿತಂತೆ. ಇದು ಮರುಕಳಿಸಿದಾಗ, ಆತನಿಗೆ ಇದನ್ನು ಓದುವ ಹಂಬಲ ಉಂಟಾಗಿ ಪುಸ್ತಕ ಕೊಂಡು ಓದಿದ್ದಾನೆ. ಆಗ ಜೀವನದ ಬಗ್ಗೆ ಆತನಿಗೆ ಅರ್ಥವಾಗಿದೆ. ತಾನು ಮಾಡಿದ್ದು ತಪ್ಪು ಎನ್ನುವುದು ಸ್ಪಷ್ಟವಾಗಿದೆ. ತುರ್ತು ಪರಿಸ್ಥಿತಿಗಾಗಿ ಹಣದ ಅವಶ್ಯಕತೆ ಇದ್ದರೂ ಕಳ್ಳತನ ಮಾಡಿದ್ದರೂ ಆತನ ಒಳಮನಸ್ಸು ಅವನಿಗೆ ಅರಿವಿಲ್ಲದೇ ಅದು ತಪ್ಪು ಎಂದು ಹೇಳುತ್ತಿರುವ ಕಾರಣದಿಂದಲೇ ಆತನಿಗೆ ಸಮಸ್ಯೆ ಉಂಟಾಗಿರುವುದು ತಿಳಿದಿದೆ. ತಾನು ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಇದು ಎಂದು ಆ ಪುಸ್ತಕದ ತಾತ್ಪರ್ಯದಿಂದ ಆತನಿಗೆ ತಿಳಿದಿದೆ. ಆದ್ದರಿಂದ ಆ ವ್ಯಕ್ತಿ ಆಭರಣಗಳನ್ನು ಹಿಂದಿರುಗಿಸುವ ಯೋಚನೆ ಮಾಡಿದ್ದಾನೆ.
ಕೊನೆಗೆ ತನ್ನ ಸಂಪೂರ್ಣ ಕಥೆಯನ್ನು ಒಂದು ಪತ್ರದಲ್ಲಿ ಬರೆದಿಟ್ಟು ಎಲ್ಲಾ ಆಭರಣಗಳನ್ನು ದೇವಾಲಯದ ಬಾಗಿಲಿನಲ್ಲಿ ಇಟ್ಟುಬಂದಿದ್ದಾನೆ. ಆತ್ಮಚಿಂತನೆಯಿಂದ ಪಶ್ಚಾತ್ತಾಪ ಪಟ್ಟು, ದೇವಸ್ಥಾನದ ಬಳಿಯೇ ಆ ಆಭರಣಗಳನ್ನು ಪುನಃ ಬಿಟ್ಟುಹೋಗುತ್ತಿರುವುದಾಗಿ ಹೇಳಿದ್ದಾನೆ. ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣವನ್ನು ಮರುತೆರೆದಿದ್ದಾರೆ. ಕೃಷ್ಣನ ತಲೆಯ ಕವಚ, ಕಿವಿಯೋಲೆಗಳು, ಬಳೆಗಳು ಮತ್ತು ಕೊಳಲು ಇದ್ದ ಚೀಲದ ಆಭರಣಗಳನ್ನು ದೇವಾಲಯದ ಮುಂಭಾಗದ ಬಾಗಿಲಲ್ಲಿ ಬಿಟ್ಟು, ಪ್ರಾಯಶ್ಚಿತ್ತವಾಗಿ ಹೆಚ್ಚುವರಿಯಾಗಿ 300 ರೂ.ಗಳನ್ನು ಸಹ ಬಿಟ್ಟು ಹೋಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಕಳ್ಳತನವಾದ ಬೆಳ್ಳಿ ಆಭರಣಗಳು ಸೇರಿದಂತೆ ದೇವಾಲಯದ ಮೌಲ್ಯವಂತಿಕೆಯನ್ನು ಮರಳಿ ಪಡೆಯಲಾಗಿದೆ ಎಂಬುದು ಸ್ಥಳೀಯ ಭಕ್ತರಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಿದ್ದು, ಈ ಘಟನೆ ದೇವರ ಲೀಲೆಯೆಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ