
ಚೆನ್ನೈ: ಎಐಎಡಿಎಂಕೆ ಪಕ್ಷವನ್ನು ಒಡೆಯಲು ಯತ್ನಿಸುತ್ತಿರುವವರ ವಿರುದ್ಧ 'ಧರ್ಮಯುದ್ಧ' ಆರಂಭಿಸಿದ್ದ ಒ.ಪನ್ನೀರ್ಸೆಲ್ವಂ (ಒಪಿಎಸ್), ಕೊನೆಗೂ ತಮ್ಮ ಬದ್ಧವೈರಿ ಪಾಳಯ ಸೇರಿಕೊಂಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ 'ಎಐಎಡಿಎಂಕೆ ಕೇಡರ್ ರೈಟ್ಸ್ ರಿಟ್ರೀವಲ್ ಕಳಗಂ' ನಾಯಕರಾದ ಒಪಿಎಸ್, ಇದೀಗ ಡಿಎಂಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಒಪಿಎಸ್ ಜೊತೆಗೆ ಅವರ ಮಗ ಹಾಗೂ ಮಾಜಿ ಸಂಸದ ರವೀಂದ್ರನಾಥ್ ಮತ್ತು ಉಸಿಲಾಂಪಟ್ಟಿ ಶಾಸಕ ಅಯ್ಯಪ್ಪನ್ ಕೂಡ ಡಿಎಂಕೆ ಸೇರಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಮೂವರನ್ನೂ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಎಡಪ್ಪಾಡಿ ಕೆ. ಪಳನಿಸಾಮಿ ವಿರುದ್ಧದ ತನ್ನ ರಾಜಕೀಯ ಸಮರಕ್ಕೆ ಡಿಎಂಕೆಯೇ ಸರಿಯಾದ ವೇದಿಕೆ ಎಂಬುದು ಒಪಿಎಸ್ ಅವರ ಹೊಸ ನಿಲುವು.
ಅಚ್ಚರಿ ಎಂದರೆ, ಜಯಲಲಿತಾ ಅವರ ಫೋಟೋ ಹಾಕಿದ್ದ ಕಾರಿನಲ್ಲೇ ಒಪಿಎಸ್, ಸ್ಟಾಲಿನ್ ಅವರನ್ನು ಭೇಟಿಯಾಗಿ ಪಕ್ಷದ ಸದಸ್ಯತ್ವ ಪಡೆಯಲು ಬಂದಿದ್ದರು. ಬಹಳ ಸಮಯದಿಂದ ಒಪಿಎಸ್, ಎಐಎಡಿಎಂಕೆ ಪಕ್ಷದಿಂದ ಹೊರಗುಳಿದಿದ್ದರು. ಮಧ್ಯದಲ್ಲಿ ಎನ್ಡಿಎ ಮೈತ್ರಿಕೂಟ ಸೇರಿದ್ದರೂ, ನಂತರ ಅದರಿಂದಲೂ ಹೊರಬಂದಿದ್ದರು. ತಮಿಳುನಾಡಿನಲ್ಲಿ ಎಐಎಡಿಎಂಕೆ, ಬಿಜೆಪಿಯ ಕೈಗೊಂಬೆಯಾಗಿದೆ ಎಂಬ ಆರೋಪಗಳಿದ್ದವು. ಕೊನೆಗೆ ಬಿಜೆಪಿ ಕೂಡ ಕೈಬಿಟ್ಟ ನಂತರ, ಒಪಿಎಸ್ ಈಗ ಡಿಎಂಕೆ ಬಾಗಿಲು ತಟ್ಟಿದ್ದಾರೆ.
ಆದರೆ, ರಾಜಕೀಯ ವಲಯದಲ್ಲಿ ಥೇಣಿ ಜಿಲ್ಲೆಯನ್ನು ಹೊರತುಪಡಿಸಿ ಒಪಿಎಸ್ಗೆ ಬೇರೆಲ್ಲೂ ಪ್ರಭಾವವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದಿಂದ ಉಚ್ಚಾಟನೆಯಾದ ನಂತರ, ಎಐಎಡಿಎಂಕೆ ಪಕ್ಷಕ್ಕೆ ಮರಳಲು ಒಪಿಎಸ್ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅವರ ಎಲ್ಲಾ ಪ್ರಯತ್ನಗಳಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ತಡೆಯೊಡ್ಡಿದ್ದರು.
ಒ.ಪನ್ನೀರ್ಸೆಲ್ವಂ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂಬುದು ಪಳನಿಸಾಮಿ ಅವರ ಖಡಕ್ ನಿಲುವಾಗಿತ್ತು. "ಪಕ್ಷದ ಪ್ರಧಾನ ಕಚೇರಿ ಮೇಲೆ ದಾಳಿ ಮಾಡಿಸಿದ್ದು, ಪಕ್ಷವನ್ನು ಶತ್ರುಗಳ ಮುಂದೆ ಅಡವಿಟ್ಟಿದ್ದೇ ಪನ್ನೀರ್ಸೆಲ್ವಂ. ಅವರನ್ನು ಉಚ್ಚಾಟಿಸಿದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಎಡಪ್ಪಾಡಿ ಸ್ಪಷ್ಟಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ