ಬ್ಯಾಂಕುಗಳಿಗೆ 9000 ಕೋಟಿ ರು.ಗೂ ಅಧಿಕ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿ| ಮಲ್ಯ ಗಡೀಪಾರಿಗೆ ಕೇಂದ್ರ ಎಲ್ಲಾ ಪ್ರಯತ್ನ ಮಾಡಿದೆ| ಸುಪ್ರೀಂಗೆ ಕೇಂದ್ರ ಮಾಹಿತಿ
ನವದೆಹಲಿ(ಜ.19): ಬ್ಯಾಂಕುಗಳಿಗೆ 9000 ಕೋಟಿ ರು.ಗೂ ಅಧಿಕ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿ ಆಗಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಈ ವಿಷಯದಲ್ಲಿ ಹಲವು ಕಾನೂನು ತೊಡಕುಗಳು ಎದುರಾದ ಕಾರಣ ಗಡೀಪಾರು ಪ್ರಕ್ರಿಯೆ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಸೋಮವಾರ ತಿಳಿಸಿದೆ.
ಈ ಕುರಿತು ಕೋರ್ಟ್ನಲ್ಲಿ ಹೇಳಿಕೆ ನೀಡಿದ ಸಾಲಿಸಿಟರ್ ಜನರಲ್, ವಿದೇಶಾಂಗ ಇಲಾಖೆ ಬ್ರಿಟನ್ ಸರ್ಕಾರದ ಜೊತೆ ಮಲ್ಯ ಗಡೀಪಾರು ವಿಷಯವನ್ನು ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ಎಲ್ಲಾ ಗಂಭೀರ ಪ್ರಯತ್ನಗಳನ್ನು ಮಾಡಿದೆ. ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ನೀಡಲು ಇನ್ನಷ್ಟು ಸಮಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿದೆ.