ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕೆ ಮತ್ತೊಮ್ಮೆ ಲಾಕ್ಡೌನ್ ಹೇರಿಕೆ ಪರಿಹಾರವಾಗಲಾರದು| ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಇಲ್ಲ: ಆರೋಗ್ಯ ಸಚಿವ
ಮುಂಬೈ(ಮಾ.16): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕೆ ಮತ್ತೊಮ್ಮೆ ಲಾಕ್ಡೌನ್ ಹೇರಿಕೆ ಪರಿಹಾರವಾಗಲಾರದು. ಆದರೆ ಕಠಿಣ ನಿರ್ಬಂಧಗಳ ಮೂಲಕ ಕೊರೋನಾ ಅಲೆಯನ್ನು ತಗ್ಗಿಸಲಾಗುತ್ತದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಪ್ರತಿಪಾದಿಸಿದ್ದಾರೆ.
ಸೋಮವಾರ ಮಾತನಾಡಿದ ಟೋಪೆ ಅವರು, ‘ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಆದರೆ ಲಾಕ್ಡೌನ್ ಇದಕ್ಕೆ ಪರಿಹಾರವಲ್ಲ. ಬದಲಿಗೆ ಕೊರೋನಾ ಪರೀಕ್ಷೆಯ ಹೆಚ್ಚಳ, ಸೋಂಕಿತರ ಪತ್ತೆ ಮತ್ತು ಕಠಿಣ ನಿರ್ಬಂಧಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ’ ಎಂದರು.
ಏತನ್ಮಧ್ಯೆ, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಕಠಿಣ ಕ್ರಮಗಳ ಘೋಷಣೆ ಆಗುವ ಸಾಧ್ಯತೆ ಇದೆ.
ಈ ನಡುವೆ, ಸೋಮವಾರ ಮಹಾರಾಷ್ಟ್ರದಲ್ಲಿ 15,051 ಪ್ರಕರಣ ದಾಖಲಾಗಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ.