NAVIKOTSAVA-22: ಕೀನ್ಯಾದಲ್ಲಿ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿ

By Kannadaprabha NewsFirst Published Sep 12, 2022, 9:58 AM IST
Highlights
  • ಕೀನ್ಯಾದಲ್ಲಿ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿ
  • -ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದಲ್ಲಿ ನಾವಿಕೋತ್ಸವ ಆಯೋಜನೆ
  • ನೈರೋಬಿಯಲ್ಲಿ ಪಸರಿಸಿದ ಕನ್ನಡದ ಕಂಪು

ಬೆಂಕಿ ಬಸಣ್ಣ ನ್ಯೂಯಾರ್ಕ್

ನೈರೋಬಿ (ಕೀನ್ಯಾ) (ಸೆ.12) : ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಒಕ್ಕೂಟವಾದ ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಹಾಗೂ ಕೀನ್ಯಾ ದೇಶದ ಕನ್ನಡ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸಿದ್ದ 6ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿಯಾದ ನೈರೋಬಿಯ ಜೈನ್‌ ಭವನದಲ್ಲಿ 2 ದಿನ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಅಮೆರಿಕದಲ್ಲಿ ಕನ್ನಡ ಕಲರವ..! ಮಕ್ಳನ್ನು ಕೂರಿಸಿ ಕನ್ನಡ ಕಲಿಸ್ತಾರೆ ಈ ದಂಪತಿ

ಈವರೆಗೂ ಅಮೆರಿಕದಲ್ಲಿ ಮಾತ್ರ ನಡೆಯುತ್ತಿದ್ದ ನಾವಿಕ ಸಮ್ಮೇಳನ ಇದೇ ಮೊದಲ ಬಾರಿಗೆ ಬೇರೆ ದೇಶದಲ್ಲಿ ಅದರಲ್ಲೂ ಆಫ್ರಿಕಾ ಖಂಡದಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ಕೋವಿಡ್‌ ಕಾರಣದಿಂದ ಕಳೆದ ಎರಡು ನಾವಿಕ ಸಮ್ಮೇಳನಗಳನ್ನು ವರ್ಚುಯಲ್‌ ಆಗಿ ಮಾಡಲಾಗಿತ್ತು. ಮೂರು ವರ್ಷಗಳ ನಂತರ ಕನ್ನಡಾಭಿಮಾನಿಗಳೆಲ್ಲ ಒಂದೇ ಸೂರಿನಡಿ ಸೇರಿ ಬೃಹತ್‌ ಸಮಾವೇಶವನ್ನು ಮಾಡಿದ್ದು ರೋಮಾಂಚನ ತರಿಸಿತು. ವಿನೋದ- ವಿಹಾರ- ವಿನಿಮಯ ಎಂಬ ಘೋಷಣೆಯೊಂದಿಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ, ನೃತ್ಯ, ನಾಟಕ, ಕನ್ನಡ ಕಲಿ, ಯಕ್ಷಗಾನ ಹೀಗೆ ಅನೇಕ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಾಯಿತು.

ಹೊರದೇಶಗಳಿಂದ ಬಂದಿದ್ದ ಅತಿಥಿಗಳಿಗಾಗಿ ಸಪ್ಟೆಂಬರ್‌ 5ರಿಂದ 9ನೇ ತಾರೀಖಿನವರೆಗೆ ಆಫ್ರಿಕನ್‌ ಸಫಾರಿ ಟೂರ್‌ ಪ್ಯಾಕೇಜ್‌ ವ್ಯವಸ್ಥೆ ಮಾಡಲಾಗಿತ್ತು. ಈ ಆಫ್ರಿಕನ್‌ ಸಫಾರಿಯಲ್ಲಿ ಮಾಸಾಯಿಮಾರ, ಒಲ್ಪಜೇಟ, ನೈವಾಷ ಸರೋವರ ಪ್ರದೇಶಗಳಲ್ಲಿರುವ ಸಾವಿರಾರು ಕಾಡು ಪ್ರಾಣಿಗಳನ್ನು ಅತಿ ಸಮೀಪದಿಂದ ನೋಡುವ ಸುವರ್ಣ ಅವಕಾಶವನ್ನು ಒದಗಿಸಿ ಕೊಟ್ಟಿತು. ವಿವಿಧ ದೇಶಗಳಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ವಸತಿ, ಊಟ, ವಿಹಾರ, ಮನೋರಂಜನೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿತ್ತು.

ಸೆಪ್ಟೆಂಬರ್‌ 9ರ ಶುಕ್ರವಾರ ಸಂಜೆ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಕೀನ್ಯಾದ ಭಾರತದ ರಾಯಭಾರಿ ರೋಹಿತ್‌ ವದ್ವನ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ನಾವಿಕಾ ಮತ್ತು ಕೀನ್ಯಾದ ಕನ್ನಡ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಈ ವೇಳೆ ನಾವಿಕಾ ಅಧ್ಯಕ್ಷ ಮಂಜುನಾಥ್‌ ಮತ್ತು ಕೀನ್ಯಾ ಕನ್ನಡ ಸಂಘದ ಚೇರ್‌ಮನ್‌ ರವಿ ಕಿರಣ್‌ ಅವರು ರೋಹಿತ್‌ ಅವರನ್ನು ಅಭಿನಂದಿಸಿದರು.

ಮೊದಲ ದಿನ ಸಂಜೆ ಖ್ಯಾತ ಕನ್ನಡ ಚಲನ ಚಿತ್ರ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಸಾರಥ್ಯದಲ್ಲಿ ನಡೆದ ಮ್ಯೂಸಿಕಲ್‌ ನೈಟ್‌ನಲ್ಲಿ ಪ್ರಖ್ಯಾತ ಗಾಯಕರಾದ ಹೇಮಂತ್‌ ಕುಮಾರ್‌, ಚಿನ್ಮಯ್‌ ಅತ್ರೆಯಸ್‌, ಮಾನಸಾ ಹೊಳ್ಳ, ಅನುರಾಧಾ ಭಟ್‌ ಮತ್ತು ಚೇತನ್‌ ಸೊಸ್ಕಾ ಪ್ರೇಕ್ಷಕರನ್ನು ರಂಜಿಸಿದರು.

ಅಮೆರಿಕದಲ್ಲಿ ಕನ್ನಡಾಭಿಮಾನ ಮೆರೆದ ಕಿಚ್ಚ ಸುದೀಪ್ ಅಭಿಮಾನಿ

ನಾವಿಕೋತ್ಸವ ಸಮ್ಮೇಳನದ 2ನೇ ದಿನವಾದ ಸೆ.10ರಂದು ಕರ್ನಾಟಕದ ಚರಿತ್ರೆ, ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಮೋಘ ಮೆರವಣಿಗೆಯು ಶನಿವಾರ ಬೆಳಗ್ಗೆ ನೈರೋಬಿಯಲ್ಲಿ ಅದ್ಧೂರಿಯಿಂದ ನಡೆಯಿತು. ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬಂದಿದ್ದ ಅಡುಗೆಭಟ್ಟರಿಂದ ಬೊಂಬಾಟ್‌ ಭೋಜನ ಅದ್ಭುತವಾಗಿ ಯಶಸ್ವಿಯಾಯಿತು. ಈ ನಾವಿಕೋತ್ಸವದಲ್ಲಿ ನಡೆದಾಡುವ ವಯೋಲಿನಿಸ್ವ್‌ ಅನೀಶ್‌, ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್‌ ಶೋ, ರಂಗಧ್ವನಿ ತಂಡದಿಂದ ನಾಟಕ ಜೊತೆಗೆ ಕೀನ್ಯಾ ಮತ್ತು ಅಮೆರಿಕ ಕನ್ನಡಿಗರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಇನ್ನು ವುಮೆ®್ಸ… ಫೋರಂ, ಎಜುಕೇಷನ್‌ ಫೋರಂ, ಯೂಥ್‌ ಫೋರಂ, ಮೆಡಿಕಲ್‌ ಫೋರಂ ಮುಂತಾದವುಗಳನ್ನು ಆಯೋಜಿಸಲಾಗಿತ್ತು. ಇನ್ನು ಇದೇ ವೇದಿಕೆಯಲ್ಲಿ ಸ್ಮರಣ ಸಂಚಿಕೆಯನ್ನು ಹೊರ ತರಲಾಯಿತು. ಕನ್ನಡ ಅಭಿಮಾನಿಗಳಿಂದ ಲೇಖನ, ಸಣ್ಣ ಕಥೆ, ಕವನ, ಪ್ರಬಂಧ, ನಗೆಹನಿ, ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಲಾಗಿದೆ. ಇನ್ನು ಬಿಸಿನೆಸ್‌ ಫೋರಂನಲ್ಲಿ ಕನ್ನಡಿಗ ಉದ್ಯಮಿಗಳಿಗೆ ಆಫ್ರಿಕಾ ದೇಶದಲ್ಲಿ ಇರುವ ಉದ್ಯಮ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯತು. ಹಣ ಹೂಡಿಕೆ, ಔದ್ಯೋಗಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ಕೇಂದ್ರವಾಗಿಸಿಕೊಂಡು ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಯಿತು.

click me!