
ಮುಂಬೈ: 15 ವರ್ಷದ ಬಾಲೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಈ ಹಿನ್ನೆಲೆ ಈಕೆಯನ್ನು ಮದುವೆಯಾದ 27 ವರ್ಷದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಇವರಿಗೆ ಮದುವೆ ಮಾಡಿದ ಬಾಲಕಿಯ ತಾಯಿ ಹಾಗೂ ಯುವಕನ ಪೋಷಕರು ಹಾಗೂ ಕದ್ದು ಬಾಲ್ಯ ವಿವಾಹ ಮಾಡಿದ ಧರ್ಮಗುರುಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಶುಕ್ರವಾರ(ಡಿ.17) ದಂದು ಈ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನ ಜೆಜೆ ಆಸ್ಪತ್ರೆ (JJ Hospital) ಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕಳೆದ ಜನವರಿ ತಿಂಗಳಲ್ಲಿ ಈ ಬಾಲ್ಯ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿತ್ತು ಎಂದು ತಿಳಿದು ಬಂದಿದೆ. ಮಗುವಿನ ಜನನಕ್ಕೂ ಮೊದಲು ಆಸ್ಪತ್ರೆ ಸಿಬ್ಬಂದಿ ತಾಯಿಯ ವಯಸ್ಸನ್ನು ಕೇಳಿದಾಗ ಆಕೆಯ ಪತಿ ಹಾಗೂ ಪತಿಯ ಮನೆಯವರು ಆಕೆಗೆ 20 ವರ್ಷ ಎಂದು ಹೇಳಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Sexual Harassment : ಸೆಕೆಂಡ್ ಪಿಯು ಬಾಲಕಿ ಗರ್ಭಿಣಿ, ಸ್ನೇಹ ಸಂಪಾದಿಸಿ ಮಿನಿ ಬಸ್ ಚಾಲಕ ಮಾಡಿದ ಹೀನ ಕೆಲಸ!
ಅದಾಗ್ಯೂ ನವಜಾತ ಶಿಶುವಿನ ತಾಯಿಯ ನಿಜವಾದ ವಯಸ್ಸು ವೈದ್ಯರಿಗೆ ನಂತರ ಆಧಾರ್ ಕಾರ್ಡ್ (Aadhaar card) ನೋಡಿದಾಗ ತಿಳಿದಿದೆ. ಆಧಾರ್ ಕಾರ್ಡ್ ಪ್ರಕಾರ ಆಕೆ 2006 ರ ಜೂನ್ ತಿಂಗಳಿನಲ್ಲಿ ಜನಿಸಿದ್ದಳು. ಕೂಡಲೇ ವೈದ್ಯರು ಇಲ್ಲಿನ ಅಗ್ರಿಪದ( Agripada) ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಈ ಬಾಲ್ಯ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಭಾನುವಾರ ಪ್ರಕರಣ ದಾಖಲಾಗಿದೆ.
ಕಳೆದ ವರ್ಷದ ಕೊನೆಯಲ್ಲಿ 15 ವರ್ಷದ ಬಾಲಕಿಯ ತಾಯಿಯ ಆರ್ಥಿಕ ಸ್ಥಿತಿ ಮಗಳನ್ನು ಸಲುಹುವಷ್ಟು ಚೆನ್ನಾಗಿಲ್ಲದ ಕಾರಣ ಆಕೆಯ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಅವಳಿಗೆ ಮದುವೆ ಮಾಡಿಸಿದ್ದಳು. ಬಾಲಕಿ ಕೇವಲ 5ನೇ ತರಗತಿ ಓದಿದ್ದಾಳೆ ಎಂದು ಅಧಿಕಾರಿ ಹೇಳಿದರು. ಅದಾಗ್ಯೂ ಈಕೆಯನ್ನು ಮದುವೆಯಾದ ಯುವಕ ಹಾಗೂ ಆತನ ಪೋಷಕರಿಗೆ ಆಕೆ ಅಪ್ರಾಪ್ತಳಾಗಿದ್ದಾಳೆಂದು ತಿಳಿದಿದ್ದರೂ ಮದುವೆಗೆ ಮುಂದಾದ ಕಾರಣ ಪ್ರಕರಣದಲ್ಲಿ ಅವರನ್ನು ಆರೋಪಿಗಳಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್
ಜನವರಿಯಲ್ಲಿ ನಡೆದ ಮದುವೆಯ ನಂತರ ಬಾಲಕಿಯು ಸೇವ್ರಿ (Sewri)ಯಲ್ಲಿರುವ ಗಂಡನ ಮನೆಯಲ್ಲಿ ಉಳಿಯಲು ಪ್ರಾರಂಭಿಸಿದ ನಂತರ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದಳು. ಹುಡುಗಿಯ ತಾಯಿ, ಹುಡುಗನ ಪೋಷಕರು ಮತ್ತು ಧರ್ಮಗುರುಗಳ ಸಮ್ಮುಖದಲ್ಲಿ ಈ ವಿವಾಹವನ್ನು ನೆರವೇರಿಸಲಾಗಿತ್ತು. ಅವಳು ಗರ್ಭಧರಿಸಿದ ನಂತರ, ಅವಳನ್ನು ಜೆಜೆ ಆಸ್ಪತ್ರೆಗೆ ತಪಾಸಣೆಗಾಗಿ ಹಲವು ಬಾರಿ ಕರೆದೊಯ್ಯಲಾಗಿತ್ತು. ಆದರೆ ಆ ಸಂದರ್ಭದಲ್ಲೆಲ್ಲಾ ಅವರು ಯಾವಾಗಲೂ ಅವಳು ವಯಸ್ಕಳು ಎಂದು ಸುಳ್ಳು ಹೇಳುತ್ತಿದ್ದರು ಎಂದು ಅಧಿಕಾರಿ ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಅಗ್ರಿಪಾದ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ (Inspector) ಶ್ರೀರಾಮ್ ಕೋರೆಗಾಂವ್ಕರ್ (Shriram Koregaonkar) ಯುವಕನ ಬಂಧನವನ್ನು ದೃಢಪಡಿಸಿದರೂ, ಪ್ರಕರಣದ ಬಗ್ಗೆ ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದರು. ವ್ಯಕ್ತಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 24 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೀಗ ವಿವಾಹವನ್ನು ನೆರವೇರಿಸಿದ ಧರ್ಮಗುರುಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ