ಮುಲಾಯಂಗೆ ಭಾರತ ರತ್ನ ನೀಡ್ಬೇಕಿತ್ತು, ಪದ್ಮವಿಭೂಷಣ ನೀಡಿ ಅವಮಾನ ಮಾಡಿದ್ದೀರಿ ಎಂದ ಎಸ್‌ಪಿ ನಾಯಕ!

By Santosh NaikFirst Published Jan 26, 2023, 10:36 PM IST
Highlights

ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್‌ಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿದ್ದಕ್ಕೆ ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮುಲಾಯಂ ಸಿಂಗ್ ಯಾದವ್ ಅವರ ಘನತೆಯನ್ನು ಲೇವಡಿ ಮಾಡಿದೆ ಎಂದು ಹೇಳಿದ್ದಾರೆ. ಅವರಿಗೆ ಭಾರತ ರತ್ನ ನೀಡಬೇಕಿತ್ತು ಎಂದು  ಹೇಳಿದ್ದಾರೆ.
 

ನವದೆಹಲಿ (ಜ.26):ದೇಶದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಕೂಡ ಈ ಪ್ರಶಸ್ತಿಗಳಿಗೆ ಭಾಜನರಾದವರಲ್ಲಿ ಸೇರಿದ್ದಾರೆ. ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಿ ಗೌರವಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ ಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ಘೋಷಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮೌರ್ಯ, ಮುಲಾಯಂ ಸಿಂಗ್ ಯಾದವ್ ಅವರ ಘನತೆಯನ್ನು ಸರ್ಕಾರ ಲೇವಡಿ ಮಾಡಿದೆ ಎಂದು ಹೇಳಿದ್ದಾರೆ. ಅವರಿಗೆ ಭಾರತ ರತ್ನ ನೀಡಬೇಕಿತ್ತು ಎಂದು ಟ್ವೀಟ್‌ ಮಾಡಿದ್ದಾರೆ.

भारत सरकार ने नेताजी श्री मुलायम सिंह यादव को मरणोपरांत पद्म विभूषण पुरस्कार देकर, नेताजी के व्यक्तित्व, कृतित्व एवं राष्ट्र के प्रति किये गये योगदान का उपहास उड़ाया है। यदि नेताजी को सम्मान देना ही था तो भारत रत्न के सम्मान से सम्मानित करना चाहिए था।

— Swami Prasad Maurya (@SwamiPMaurya)


ನೇತಾಜಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡುವ ಮೂಲಕ ಭಾರತ ಸರ್ಕಾರವು ನೇತಾಜಿಯವರ ವ್ಯಕ್ತಿತ್ವ, ಕೆಲಸ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಲೇವಡಿ ಮಾಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನೇತಾಜಿ ಅವರನ್ನು ಗೌರವಿಸಬೇಕಾದರೆ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

ನೇತಾಜಿಗೆ ಪದ್ಮವಿಭೂಷಣ ಘೋಷಣೆ ಮಾಡಿದ್ದಕ್ಕೆ ಎಸ್ಪಿ ಈಗ ಬಹಿರಂಗವಾಗಿಯೇ ಪ್ರತಿಭಟನೆಗೆ ಮುಂದಾಗಿದೆ. ಅವರಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಹೆಚ್ಚಾಗತೊಡಗಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಮತ್ತು ಮುಲಾಯಂ ಅವರ ಹಿರಿಯ ಸೊಸೆ ಡಿಂಪಲ್ ಯಾದವ್ ಕೂಡ ಭಾರತ ರತ್ನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅದೇ ರೀತಿ ಸಮಾಜವಾದಿ ಪಕ್ಷದ ವಕ್ತಾರ ಐಪಿ ಸಿಂಗ್ ಕೂಡ ಈ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದು, ಭೂಮಿಯ ಪುತ್ರ ದಿವಂಗತ ಪೂಜ್ಯ ಮುಲಾಯಂ ಸಿಂಗ್ ಯಾದವ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಹೊರತುಪಡಿಸಿ ಬೇರೆ ಯಾವುದೇ ಗೌರವವನ್ನೂ ಅವರಿಗೆ ನೀಡಬಾರದು. ತಡಮಾಡದೆ ನಮ್ಮ ಗೌರವಾನ್ವಿತ ನೇತಾಜಿಯವರಿಗೆ ಭಾರತರತ್ನ ನೀಡುವ ಘೋಷಣೆ ಮಾಡಬೇಕು ಎಂದಿದ್ದಾರೆ.

ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿ.ಟಿ.ರವಿ

ಗಣರಾಜ್ಯೋತ್ಸವದ ಮುನ್ನಾ ದಿನ ಪದ್ಮ ಪ್ರಶಸ್ತಿ ಘೋಷಣೆಯಾದಾಗ ಒಂದು ಹೆಸರು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದು ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಹೆಸರು. ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ, ದೇಶದ ರಕ್ಷಣಾ ಸಚಿವ, ಖ್ಯಾತ ಸಮಾಜವಾದಿ ಮತ್ತು ಮಣ್ಣಿನ ಮಗ ಎಂದು ಕರೆಯಲ್ಪಡುವ ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಇದರ ನಂತರ ಸಮಾಜವಾದಿ ಪಕ್ಷ (ಎಸ್‌ಪಿ) ನೇತಾಜಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದೆ.

Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!

ಮೈನ್‌ಪುರಿಯ ಎಸ್‌ಪಿ ಸಂಸದೆ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಹಿರಿಯ ಸೊಸೆ ಡಿಂಪಲ್ ಯಾದವ್ ಅವರು 'ನೇತಾಜಿ'ಗೆ ಭಾರತ ರತ್ನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನೇತಾಜಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಅವರಿಗೆ ಈಗಾಗಲೇ ಭಾರತ ರತ್ನ ಸಿಗಬೇಕಿತ್ತು ಎಂದರು. ನೇತಾಜಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ನಾನು ಸರ್ಕಾರವನ್ನು ಕೋರುತ್ತೇನೆ. ಅದೇ ಸಮಯದಲ್ಲಿ, ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಮತ್ತು ಎಸ್‌ಪಿ ನಾಯಕ ಶಿವಪಾಲ್ ಯಾದವ್ ಕೂಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನೇತಾಜಿಗೆ ಭಾರತ ರತ್ನವನ್ನು ನೀಡಬೇಕೆಂದು ಬಯಸಿದ್ದಾರೆ ಎಂದಿದ್ದಾರೆ.

click me!