Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್‌!

Published : Mar 24, 2023, 03:12 PM ISTUpdated : Mar 24, 2023, 04:29 PM IST
Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್‌!

ಸಾರಾಂಶ

ವಯನಾಡ್‌ನ ಮಾಜಿ ಸಂಸದ ರಾಹುಲ್‌ ಗಾಂಧಿ ಪಾಲಿಗೆ ಇದು ಆರಂಭ ಮಾತ್ರ. ಇನ್ನೂ ನಾಲ್ಕು ಮಾನಹಾನಿ ಕೇಸ್‌ಗಳು ಅವರ ಮೇಲಿದ್ದು, ಕೆಲವೊಂದು ವಿಚಾರಣೆಯ ಹಂತದಲ್ಲಿದ್ದರೆ, ಇನ್ನೂ ಕೆಲವು ತೀರ್ಪಿನ ಸನಿಹದಲ್ಲಿದೆ.  

ನವದೆಹಲಿ (ಮಾ.24): ಕೊನೆಗೂ ಕಾಂಗ್ರೆಸ್‌ ಪಾಲಿಗೆ ಇದ್ದ ಆತಂಕ ನಿಜವಾಗಿದೆ. ವಯನಾಡ್‌ ಸಂಸದ ರಾಹುಲ್‌ ಗಾಂಧಿ ಈಗ ಮಾಜಿ ಸಂಸದರಾಗಿದ್ದಾರೆ. ಮೋದಿ ಸರ್‌ನೇಮ್‌ ಕೇಸ್‌ನಲ್ಲಿ ರಾಹುಲ್‌ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಬಳಿಕ ಅವರಿಗೆ ಅನರ್ಹತೆ ಭೀತಿ ಎದುರಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ವತಃ ರಾಹುಲ್‌ ಗಾಂಧಿಗೆ ನೀಡಿರುವ ನೋಟಿಸ್‌ನಲ್ಲಿ ಅವರ ಸದಸ್ಯತ್ವವನ್ನು ಅನರ್ಹ ಮಾಡಿದ್ದಾಗಿ ಲೋಕಸಭಾ ಕಾರ್ಯಾಲಯ ತಿಳಿಸಿದೆ. 1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್‌ 8ರ ಅನ್ವಯ ರಾಹುಲ್‌ ಗಾಂಧಿಯನ್ನು ಅನರ್ಹ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ 2013ರಲ್ಲಿ ನೀಡಿದ್ದ ತೀರ್ಪಿನಲ್ಲಿ ಯಾವುದೇ ಜನಪ್ರತಿನಿಧಿಯನ್ನು ಕೋರ್ಟ್‌ ಅಪರಾಧಿ ಎಂದು ಘೋಷಿಸಿ 2 ವರ್ಷ ಶಿಕ್ಷೆ ನೀಡಿದರೆ, ಅವರ ಸಂಸದ ಸ್ಥಾನ ಅನರ್ಹಗೊಳ್ಳಲಿದೆ ಎಂದು ತೀರ್ಪು ನೀಡಿತ್ತು. ಆದರೆ, ಅಂದಿನ ಯುಪಿಎ ಸರ್ಕಾರ ಕೋರ್ಟ್‌ ತೀರ್ಪಿನ ವಿರುದ್ಧ ಸುಗ್ರಿವಾಜ್ಞೆ ತರಲು ಮುಂದಾಗಿತ್ತು. ಕೋರ್ಟ್‌ ತಪ್ಪಿತಸ್ಥ ಎಂದು ಘೋಷಿಸಿದ್ದರೂ ಅವರಿಗೆ ಅನರ್ಹರಾಗಲು ಮುನ್ನ ಅವರಿಗೆ 3 ತಿಂಗಳ ಕಾಲಾವಾಕಾಶ ನೀಡುವ ಸುಗ್ರೀವಾಜ್ಞೆ ಇದಾಗಿತ್ತು. ಆದರೆ, ಸರ್ಕಾರದ ಈ ಸುಗ್ರೀವಾಜ್ಞೆಯನ್ನು ರಾಹುಲ್‌ ಗಾಂಧಿ ಸಾರ್ವಜನಿಕ ವೇದಿಕೆಯಲ್ಲಿಯೇ ಹರಿದು ಹಾಕಿದ್ದರು. ಈ ನಡುವೆ ರಾಹುಲ್‌ ಗಾಂಧಿ ಪಾಲಿಗೆ ಇದು ಆರಂಭ ಮಾತ್ರ, ಇನ್ನೂ ನಾಲ್ಕು ಮಾನಹಾನಿ ಕೇಸ್‌ಗಳು ಅವರ ಮೇಲಿದೆ. ಕೆಲವೊಂದು ವಿಚಾರಣೆಯ ಹಂತದಲ್ಲಿದ್ದರೆ, ಇನ್ನೂ ಕೆಲವು ತೀರ್ಪಿನ ಸನಿಹದಲ್ಲಿದೆ.

- ರಾಹುಲ್‌ ಗಾಂಧಿ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್‌

1. ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು ಆರೆಸ್ಸೆಸ್‌ನವರು ಎಂದು 2014ರಲ್ಲಿ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು. ಅವರ ಈ ಹೇಳಿಕೆಯ ವಿರುದ್ಧ ಆರೆಸ್ಸೆಸ್‌ ಕಾರ್ಯಕರ್ತರೊಬ್ಬರು ರಾಹುಲ್‌ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದೆ.

2. 2016 ರಲ್ಲಿ, ರಾಹುಲ್ ಗಾಂಧಿ ವಿರುದ್ಧ ಅಸ್ಸಾಂನ ಗುವಾಹಟಿಯಲ್ಲಿ 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ದೂರುದಾರರ ಪ್ರಕಾರ, ರಾಹುಲ್ ಗಾಂಧಿ ಅವರು 16 ನೇ ಶತಮಾನದ ವೈಷ್ಣವ ಮಠವಾದ ಬಾರ್ಪೇಟಾ ಸತ್ರವನ್ನು ಪ್ರವೇಶಿಸಲು ಆರೆಸ್ಸೆಸ್‌ನವರು ನನಗೆ ಅನುಮತಿ ನೀಡುತ್ತಿದ್ದ ಎಂದು ಸುಳ್ಳು ಆರೋಪ ಮಾಡಿದ್ದರು. ಇದರಿಂದ ಸಂಘದ  ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಕೇಸ್‌ ದಾಖಲು ಮಾಡಲಾಗಿತ್ತು. ಈ ವಿಚಾರವೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ಕೋಲಾರದಲ್ಲಿ ಆಡಿದ ಮಾತು, ರಾಹುಲ್‌ಗೆ ಬಂತು ಕುತ್ತು, ಇವೆಲ್ಲದರ ಸೂತ್ರಧಾರಿ ರಘುನಾಥ್‌!

3. 2018ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ರಾಂಚಿಯ ಉಪವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ರಾಹುಲ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ 20 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಮೋದಿ ಕಳ್ಳ ಎಂದು ರಾಹುಲ್‌ ನೀಡಿದ್ದ ಹೇಳಿಕೆಯ ವಿರುದ್ಧ ಕೇಸ್‌ ದಾಖಲು ಮಾಡಲಾಗಿತ್ತು.

ಜೈಲು ಭೀತಿ ತಪ್ಪಿಸುವ ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್‌ ಗಾಂಧಿ!

4. 2018ರಲ್ಲಿ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದಲ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣ ಮಜಗಾಂವ್‌ನಲ್ಲಿರುವ ಶಿವಡಿ ಕೋರ್ಟ್‌ನಲ್ಲಿ ನಡೆಯುತ್ತಿದೆ. ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಬಿಜೆಪಿ ಹಾಗೂ ಸಂಘದ ಐಡಿಯಾಲಜಿ ಹೊಂದಿರುವವರೇ ಗೌರಿ ಲಂಕೇಶ್‌ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು. ಈ ಕುರಿತಾಗಿಯೂ ಆರೆಸ್ಸೆಸ್‌ ಕಾರ್ಯಕರ್ತರು ಕೇಸ್‌ ದಾಖಲು ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ