
ಪಣಜಿ (ಮಾರ್ಚ್ 17): ಭೂಮಿಯ ಮೇಲೆ ತಮ್ಮ ಅತ್ಯಂತ ಕಡೆಯ ದಿನದಲ್ಲೂ ದೇಶದ ಹಿತವನ್ನು ಯೋಚಿಸಿದ, ನಿಷ್ಕಳಂಕ ರಾಜಕಾರಣಿ, ಬಿಜೆಪಿಯ (BJP) ಟ್ರಬಲ್ ಶೂಟರ್ ಮನೋಹರ್ ಪರಿಕ್ಕರ್ (Manohar Parrikar ) ಅವರ ನಿಧನಕ್ಕೆ ಗುರುವಾರ ಮೂರು ವರ್ಷ. ಅವರ ಪುಣ್ಯತಿಥಿಯಂದು ಸಾಕಷ್ಟು ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸರಳ, ಸಜ್ಜನರಾಗಿ ಉಳಿದುಕೊಂಡ, ಭಾರತದ ಮಾಜಿ ರಕ್ಷಣಾ ಸಚಿವರಾಗಿಯೂ (defence minister) ಕಾರ್ಯನಿರ್ವಹಿಸಿದ್ದ ಪರಿಕ್ಕರ್ ಅವರನ್ನು ಸ್ಮರಿಸಿದರು.
ಮನೋಹರ್ ಪರಿಕ್ಕರ್ ಅವರ ಬಳಿಕ ಗೋವಾದ ಮುಖ್ಯಮಂತ್ರಿಯಾಗಿ (Goa CM) ಸೇವೆ ಸಲ್ಲಿಸಿರುವ ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿ ಪದವಿಗೇರುವ ಹಾದಿಯಲ್ಲಿರುವ ಪ್ರಮೋದ್ ಸಾವಂತ್ (Pramod Sawant) ಗುರುವಾರ ಪರಿಕ್ಕರ್ ಅವರ ಮೂರ್ತಿಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದು ಮಾತ್ರವಲ್ಲದೆ, ಪರಿಕ್ಕರ್ ಅವರೊಂದಿಗಿದ್ದ ಚಿತ್ರವನ್ನೂ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ನೆನಪು ಮಾಡಿಕೊಂಡಿದ್ದಾರೆ.
ಗೋವಾದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ ನಾಯಕ ಮನೋಹರ್ ಪರಿಕ್ಕರ್. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸ್ವತಃ ನರೇಂದ್ರ ಮೋದಿ (Narendra Modi), ಪರಿಕ್ಕರ್ ಅವರಂಥ ವ್ಯಕ್ತಿ ದೇಶದ ರಕ್ಷಣಾ ಸಚಿವರಾಗಿರಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವ ಸ್ಥಾನ ನೀಡಿದ್ದರು. ಬಳಿಕ ಗೋವಾ ರಾಜ್ಯಕ್ಕೆ ವಾಪಸ್ ಆಗಿದ್ದಲ್ಲದೆ, ರಾಜ್ಯದ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿದ್ದರು. ಗೋವಾದ 12ನೇ ವಿಧಾನಸಭೆಗೆ 2 ವರ್ಷ 3 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್, ಬಹುತೇಕ ಈ ಅವಧಿಯಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದರು. ಮೂಗಿನಲ್ಲಿ ನಳಿಕೆ ಇರಿಸಿಕೊಂಡೇ ವಿಧಾನಸಭೆಗೆ ಬಜೆಟ್ ಮಂಡಿಸಲು ಆಗಮಿಸಿದ್ದ ಅವರ ಚಿತ್ರ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪರಿಕ್ಕರ್ 2019ರ ಮಾರ್ಚ್ 17 ರಂದು ನಿಧನರಾಗಿದ್ದರು. "ಅಣ್ಣ ಸದಾ ಸ್ಫೂರ್ತಿಯ ಮೂಲವಾಗಿದ್ದರು. ಅವರು ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಕರೆತಂದಿಲ್ಲ. ಪ್ರಾಮಾಣಿಕತೆಯಿಂದ ಜನರ ಸೇವೆ ಸಲ್ಲಿಸಲು ಮಾರ್ಗದರ್ಶನ ನೀಡಿದ್ದರು. ಅವರ ಪುಣ್ಯತಿಥಿಯಂದು ಅವರ ಸ್ಮರಣೆ ಮಾಡಿಕೊಂಡು ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಮೋದ್ ಸಾವಂತ್ ಬರೆದುಕೊಂಡಿದ್ದಾರೆ.
ಬಳಿಕ ವಿರಾಮರ್ ಬೀಚ್ ನಲ್ಲಿರುವ ಮನೋಹರ್ ಪರಿಕ್ಕರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ್ ಸಾವಂತ್, ಅಲ್ಲಿರುವ ಪ್ರತಿಗೆ ಪುಷ್ಪನಮನ ಹಾಗೂ ಮಾಲಾರ್ಪಣೆ ಮಾಡಿದರು. ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕಲ್ ಹಾಗೂ ಇತರ ಬಿಜೆಪಿ ನಾಯಕರು ಕೂಡ ಪರಿಕ್ಕರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು.
IDSAಗೆ ಪರಿಕ್ಕರ್ ಹೆಸರು: ದೇಶದ ರಕ್ಷಣೆ ಮತ್ತು ಭದ್ರತೆಗೆ ಹೊಸ ದಿಕ್ಕನ್ನು ಕೊಡಲಿದೆ ಸಂಸ್ಥೆ!
ನನ್ನ ನೆಚ್ಚಿನ ರಾಜಕೀಯ ನಾಯಕನಾಗಿರುವ ಮನೋಹರ್ ಪರಿಕ್ಕರ್ ಅವರನ್ನು ಅವರ ಪುಣ್ಯತಿಥಿಯಂದು ನೆನಪು ಮಾಡಿಕೊಳ್ಳುತ್ತೇನೆ. ದೇಶದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಹಿರಿಯ ಅಧಿಕಾರಿಗಳು ಭಾರತದ ಅತ್ಯಂತ ಸಮರ್ಪಿತ ರಕ್ಷಾ ಮಂತ್ರಿಗಳಲ್ಲಿ ಒಬ್ಬರು ಎಂದು ಹೇಳಲಾಗುವ ಇವರನ್ನು ಗೌರವದಿಂದ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ' ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಟ್ವೀಟ್ ಮಾಡಿದ್ದಾರೆ.
Goa Elections: ತಂದೆಯನ್ನು ನೆನಪಿಸಿಕೊಳ್ಳಿ, ಬಿಜೆಪಿ ಬಿಡದಂತೆ ಪರಿಕ್ಕರ್ ಪುತ್ರನಿಗೆ ಸಿ. ಟಿ. ರವಿ ಮನವಿ!
ಒಂದು ರತ್ನವನ್ನು ನಾವು ತುಂಬಾ ಬೇಗ ಕಳೆದುಕೊಂಡೆವು. ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಬದ್ಧತೆ ಮತ್ತು ಸಮರ್ಪಣೆಯ ಮೂಲಕ ಅವರು ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆಗಳಿಗೆ ಕೊಡುಗೆ ನೀಡಿದರು. ಅತ್ಯಂತ ವಿನಮ್ರ ವ್ಯಕ್ತಿ, ಬುದ್ಧಿವಂತ ನಾಯಕ, ಕೊನೆಯವರೆಗೂ ಹೋರಾಡಿದ ನಿಜವಾದ ಯೋಧ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ