ರಾಹುಲ್‌ ನಡೆಗೆ ಬೇಸತ್ತು ರಾಜೀನಾಮೆಗೆ ಯೋಚಿಸಿದ್ದ ಮನಮೋಹನ್ ಸಿಂಗ್‌!

By Kannadaprabha NewsFirst Published Feb 17, 2020, 7:57 AM IST
Highlights

ರಾಹುಲ್‌ ನಡೆಗೆ ಬೇಸತ್ತು ರಾಜೀನಾಮೆಗೆ ಯೋಚಿಸಿದ್ದ ಸಿಂಗ್‌| ಅಹ್ಲುವಾಲಿಯಾರಿಂದ ಸ್ಫೋಟಕ ವಿಚಾರ ಬಹಿರಂಗ| ರಾಹುಲ್‌ ಸುಗ್ರೀವಾಜ್ಞೆ ಹರಿದಿದ್ದು ಸಿಂಗ್‌ಗೆ ಬೇಸರ ಮೂಡಿಸಿತ್ತು| ರಾಜೀನಾಮೆ ಕೊಡಲೇ ಎಂದು ಮಾಂಟೆಕ್‌ಗೆ ಕೇಳಿದ್ದ ಸಿಂಗ್‌| ಬೇಡ ಎಂದಿದ್ದ ಮಾಂಟೆಕ್‌

ನವದೆಹಲಿ[ಫೆ.17]: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಮ್ಮ ವರ್ತನೆಯಿಂದ ಹಲವು ಬಾರಿ ಪಕ್ಷದ ನಾಯಕರಿಗೆ ಮುಜುಗರ ತಂದಿದ್ದಾರೆ. ಅಚ್ಚರಿಯೆಂದರೆ ಅವರ ಇಂಥದ್ದೇ ವರ್ತನೆಯೊಂದು, ಅಂದಿನ ಪ್ರಧಾನಿ ಮನಮೋಹನ್‌ಸಿಂಗ್‌ ಅವರಲ್ಲಿ ರಾಜೀನಾಮೆಯತ್ತ ಹೆಜ್ಜೆ ಹಾಕುವಂತೆ ಮಾಡಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

2013ರಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದಾಗ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯೊಂದನ್ನು ರಾಹುಲ್‌ ಗಾಂಧಿ ದಿಢೀರನೆ ಕರೆದ ಹರಿದು ಹಾಕಿದ್ದರು. ಇದು ಅಂದಿನ ಪ್ರಧಾನಿ ಡಾ| ಮನಮೋಹನ ಸಿಂಗ್‌ ಅವರಿಗೆ ಭಾರೀ ಮುಜುಗರ ತಂದಿತ್ತು. ರಾಹುಲ್‌ ಗಾಂಧಿ ಅವರು ಸುಗ್ರೀವಾಜ್ಞೆ ಹರಿದುಹಾಕಿದ ನಂತರ ಡಾ| ಸಿಂಗ್‌ ಅವರು ‘ನಾನು ರಾಜೀನಾಮೆ ನೀಡಬೇಕಾ?’ ಎಂದು ಅಂದು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಅವರಿಗೆ ಕೇಳಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ.

CAB ಬೆಂಬಲಿಸಿದ್ದ ಡಾ. ಸಿಂಗ್ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

ಖುದ್ದು ಅಹ್ಲುವಾಲಿಯಾ ಅವರು ಈ ವಿಷಯವನ್ನು ಈಗ ತಾವು ಬರೆದ ‘ಬ್ಯಾಕ್‌ಸ್ಟೇಜ್‌: ದ ಸ್ಟೋರಿ ಬಿಹೈಂಡ್‌ ಇಂಡಿಯಾ’ಸ್‌ ಹೈ ಗ್ರೋಥ್‌ ಇಯರ್ಸ್‌’ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ‘ರಾಜೀನಾಮೆ ಅಗತ್ಯವಿಲ್ಲ’ ಎಂದು ತಾವು ಅಭಿಪ್ರಾಯ ತಿಳಿಸಿದ್ದಾಗಿಯೂ ಅವರು ಹೇಳಿದ್ದಾರೆ.

ಮಾಂಟೆಕ್‌ ಹೇಳಿದ್ದೇನು?:

‘ಮನಮೋಹನ ಸಿಂಗ್‌ ಹಾಗೂ ನಾನು ನ್ಯೂಯಾರ್ಕ್ ಪ್ರವಾಸದಿಂದ ವಾಪಸಾಗುತ್ತಿದ್ದೆವು. ಆಗ ನಿವೃತ್ತ ಐಎಎಸ್‌ ಅಧಿಕಾರಿ, ನನ್ನ ಸೋದರ ಸಂಜೀವ್‌ ನನಗೆ ಫೋನ್‌ ಮಾಡಿ ಮನಮೋಹನ ಸಿಂಗ್‌ ಅವರನ್ನು ಟೀಕಿಸಿ ಒಂದು ಪತ್ರಿಕಾ ಲೇಖನ ಬರೆದಿದ್ದೇನೆ. ಓದು. ಇಮೇಲ್‌ ಮಾಡಿದ್ದೇನೆ’ ಎಂದ. ಅದು ರಾಹುಲ್‌ ಗಾಂಧಿ ಅವರು ಸುಗ್ರೀವಾಜ್ಞೆ ಹರಿದ ಕುರಿತಾಗಿತ್ತು.’

‘ಆಗ ಆ ಲೇಖನವನ್ನು ನಾನು ವಿಮಾನದಲ್ಲಿಯೇ ಪ್ರಧಾನಿಗೆ ತೋರಿಸಿದೆ. ಲೇಖನವನ್ನು ಅವರು ಶಾಂತವಾಗಿಯೇ ಓದಿ ಕೆಲಕಾಲ ಮೌನಕ್ಕೆ ಜಾರಿದರು. ಬಳಿಕ ಏಕಾಏಕಿ ಅವರು, ‘ನಾನು ರಾಜೀನಾಮೆ ನೀಡಬೇಕು ಎಂದು ನಿಮಗೆ ಅನ್ನಿಸಿದೆಯೇ?’ ಎಂದು ಕೇಳಿದರು.’

ಗಾಂಧಿ ಕುಟಂಬದ ವಿಶೇಷ ಭದ್ರತೆ ವಾಪಸ್: ಇದೀಗ ಉಳಿದಿದ್ದು ಕೇವಲ z ಪ್ಲಸ್!

‘ನಾನೂ ಕೂಡ ಕೆಲಕ್ಷಣ ಯೋಚಿಸಿ, ‘ಈ ವಿಚಾರದಲ್ಲಿ ರಾಜೀನಾಮೆ ತರವಲ್ಲ’ ಎಂದು ಸಲಹೆ ನೀಡಿದೆ’ ಎಂದು ಮಾಂಟೆಕ್‌ ಹೇಳಿದ್ದಾರೆ.

ರಾಹುಲ್‌ ಸುಗ್ರೀವಾಜ್ಞೆ ಹರಿದಿದ್ದೇಕೆ?:

ಕ್ರಿಮಿನಲ್‌ ಪ್ರಕರಣದಲ್ಲಿ ದೋಷಿಗಳಾರ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸಕೂಡದು ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ಮನಮೋಹನ ಸಿಂಗ್‌ 2013ರಲ್ಲಿ ಹೊರಡಿಸಿದ್ದರು. ಈ ಸುಗ್ರೀವಾಜ್ಞೆಗೆ ವ್ಯಾಪಕ ಟೀಕೆ ಕೇಳಿಬಂದ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಆ ಸುಗ್ರೀವಾಜ್ಞೆ ಪ್ರತಿ ಹರಿದುಹಾಕಿದ್ದರು

ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!

click me!