ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

Published : Nov 01, 2022, 04:16 PM IST
ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

ಸಾರಾಂಶ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಸೃಷ್ಟಿಸಿದ ತಳಮಳ ಒಂದೆರೆಡಲ್ಲ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಹ್ಲೋಟ್‌ನಿಂದ ರಾಜಸ್ಥಾನ ರಾಜಕೀಯ ಜೊತೆಗೆ ಪಕ್ಷದ ಹೈಕಮಾಂಡ್ ಕೂಡ ಆತಂಕಕ್ಕೆ ಸಿಲುಕಿದ್ದರು. ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೈಪುರ(ನ.01): ಕಾಂಗ್ರೆಸ್ ಆಪ್ತರಾಗಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಬಿಸಿ ತುಪ್ಪವಾಗಿದ್ದಾರೆ. ತಮ್ಮ ನಂಬಿಕಸ್ಥ, ಹೈಕಮಾಂಡ್ ಗೆರೆ ದಾಟದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಗಾಂಧಿ ಕುಟುಂಬ ಕೆಲ ಪ್ರಯತ್ನ ನಡೆಸಿತ್ತು. ಆದರೆ ಇದು ಹಾವಿನ ಹುತ್ತಕ್ಕೆ ಕೈಹಾಕಿದಂತಾಗಿತ್ತು. ಅತ್ತ ಅಧ್ಯಕ್ಷ ಪಟ್ಟವೂ ಸಂಕಷ್ಟಕ್ಕೆ ಸಿಲುಕಿತು, ಇತ್ತ ರಾಜಸ್ಥಾನ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು. ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಹೊತ್ತಲ್ಲಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಇದೀಗ ಇದೇ ಅಶೋಕ್ ಗೆಹ್ಲೋಟ್‌ರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ರಾಜಸ್ಥಾನದ ಮಂಗರ್ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿನ ಅತ್ಯಂತ ಹಿರಿಯ ಹಾಗೂ ಅನುಭವಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಂದಿದ್ದಾರೆ.

ಮಂಗರ್ ಧಾಮಾ ಕಿ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ರಾಜಸ್ಥಾನ ಮುಖ್ಯಮಂತ್ರಿ ಕುರಿತು ಮಚ್ಚುಗೆ ಮಾತುಗಳನ್ನಾಡಿದ್ದಾರೆ. ನಾನು ಸಿಎಂ ಆಗಿದ್ದ ದಿನದಲ್ಲಿ ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಸಿಎಂ ಆಗಿದ್ದರು. ನಾವು ಹಲವು ಯೋಜನೆಗಳನ್ನು ಜಂಟಿಯಾಗಿ ಮಾಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡಿದ್ದೇವೆ. ಸದ್ಯ ಗೆಹ್ಲೋಟ್ ಅತ್ಯಂತ ಹಿರಿಯ ರಾಜಕಾರಣಿ ಮಾತ್ರವಲ್ಲ, ದೇಶದ ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಹಿರಿಯ ಹಾಗೂ ಅನುಭವಿ ಸಿಎಂ ಆಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಮಂಗರ್‌ ಧಾಮ್ ದೃಢತೆ, ತಪಸ್ಸು ಮತ್ತು ದೇಶಭಕ್ತಿಯ ಪ್ರತಿಬಿಂಬ: ಪ್ರಧಾನಿ ನರೇಂದ್ರ ಮೋದಿ!

ಅಶೋಕ್ ಗೆಹ್ಲೋಟ್ ಅನುಭವ ಯುವ ರಾಜಕೀಯ ಮುಖಂಡರಿಗೆ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕನ ಹೊಗಳಿದ ಮೋದಿ ಇದೀಗ ರಾಜಕೀಯ ಸಂಚಲನಕ್ಕೂ ಕಾರಣವಾಗಿದ್ದಾರೆ. ರಾಜಸ್ಥಾನದ ರಾಜಕೀಯ ಸದ್ಯ ತಣ್ಣಗಾಗಿದೆ. ಆದರೆ ಗೆಹ್ಲೋಟ್ ಬಣದ ವಿರುದ್ಧ ಸಚಿನ್ ಪೈಲೆಟ್ ಬಣ ಕತ್ತಿ ಮಸೆಯುತ್ತಲೇ ಇದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಈ ಬಣಗಳ ನಡುವಿನ ಅಂತರ ಹೆಚ್ಚಾಗಿದೆ. ಸಣ್ಣ ಅವಕಾಶವನ್ನೂ ಎರಡೂ ಬಣಗಳು ಉಪಯೋಗಿಸಿಕೊಳ್ಳುತ್ತಿದೆ. ಹೈಕಮಾಂಡ್‌ಗೆ ದೂರು ನೀಡುತ್ತಲೇ ಬಂದಿದೆ. ಹೀಗಾಗಿ ಮೋದಿ ಹೊಗಳಿಕೆ ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

ಇತ್ತೀಚೆಗೆ ಅಶೋಕ್ ಗೆಹ್ಲೋಟ್ ಕೂಡ ಬಿಜೆಪಿ ನಾಯಕರನ್ನು ಹೊಗಳಿದ್ದರು. ಇದೇ ವೇಳೆ ಗೆಹ್ಲೋಟ್ ಮುಂಬರುವ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು.

 

ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ: 20 ಕಿ.ಮೀ. ದೂರದಿಂದಲೇ ಕಾಣುವ ಮೂರ್ತಿ

ಇತ್ತೀಚೆಗೆ ಪ್ರಹ್ಲಾದ್ ಜೋಶಿ ಹೊಗಳಿದ್ದ ಗೆಹ್ಲೋಟ್
ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಆಶೋಕ್‌ ಗೆಹ್ಲೋಟ್‌ ಅವರ ಸಮ್ಮುಖದಲ್ಲಿ ಕೋಲ್‌ ಇಂಡಿಯಾ ಲಿಮಿಟೆಡ್‌ (ಸಿಐಎಲ್‌) ರಾಜಸ್ಥಾನದ ಬಿಕಾನೇರ್‌ನಲ್ಲಿ 1,190 ಮೆಗಾ ವ್ಯಾಟ್‌ ಸ್ಥಾವರವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಈ ನಿಟ್ಟಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಅವರು ಕೇಂದ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿಯವರನ್ನು ಶ್ಲಾಘಿಸಿದ್ದಾರೆ.

ರಾಜಸ್ಥಾನ ವಿದ್ಯುತ್‌ ಉತ್ಪಾದನ ನಿಗಮ ಲಿಮಿಟೆಡ್‌ (ಆರ್‌ಯುವಿಎನ್‌ಎಲ್‌) ಜತೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಬಿಕಾನೇರಿನ ಪೂಂಗಲ್‌ನಲ್ಲಿ 2000- ಮೆಗಾವ್ಯಾಟ್‌ ಸೋಲಾರ್‌ ಪಾರ್ಕ್ ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು. ಸೋಲಾರ್‌ ಪಾರ್ಕ್ ನಿರ್ಮಾಣಕ್ಕಾಗಿಯೇ ರಾಜ್ಯ ಸರ್ಕಾರ 4,846 ಹೆಕ್ಟೇರ್‌ ಭೂಮಿಯನ್ನು ಮಂಜೂರು ಮಾಡಿದೆ. ಈ ಜಾಗದಲ್ಲಿ ಆರ್‌ಯುವಿಎನ್‌ಎಲ್‌ 810 ಮೆಗಾವ್ಯಾಟ್‌ ಸಾಮರ್ಥ್ಯ ಸೌರಶಕ್ತಿ ಯೋಜನೆ ಹಾಗೂ ಸಿಐಎಲ್‌ 1190 ಸೌರವಿದ್ಯುತ್‌ ಸ್ಥಾವರ ನಿರ್ಮಾಣ ಮಾಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Cobra snake in CM House: ನೂತನ ಮುಖ್ಯಮಂತ್ರಿ ಮನೆಗೆ ಬಂದ ನಾಗರಹಾವು; ಉರಗ ತಜ್ಞರಿಂದ ರಕ್ಷಣೆ!
India Tour: ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕಸೋಲ್‌ನಲ್ಲಿ ಪ್ರವಾಸಿಗರ ಮೈ ಜುಮ್ಮೆನಿಸುವ ಹುಚ್ಚಾಟ!