
ಮುಂಬೈ(ಜು.2): ಬಹುನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಭಾನುವಾರ ಹಾಗೂ ಸೋಮವಾರ ನಡೆಯಲಿದ್ದು, ಭಾನುವಾರ ಸ್ಪೀಕರ್ ಚುನಾವಣೆ ಹಾಗೂ ಸೋಮವಾರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದ ನೂತನ ಸರ್ಕಾರದ ವಿಶ್ವಾಸಮತ ಯಾಚನೆ ನೆರವೇರಲಿದೆ. ತಮ್ಮ ಬಣ ಹಾಗೂ ಬಿಜೆಪಿ ಸೇರಿದಂತೆ 155 ಶಾಸಕರ ಬೆಂಬಲ ಶಿಂಧೆಗೆ ಇದ್ದು ವಿಶ್ವಾಸಮತ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಜಯಿಸುವ ಸಾಧ್ಯತೆ ಇದೆ.
ಈ ಮೊದಲಿನ ಘೋಷಣೆ ಅನ್ವಯ ಶನಿವಾರದಿಂದಲೇ ಅಧಿವೇಶನ ನಡೆಯಬೇಕಿತ್ತು. ಆದರೆ 1 ದಿನದ ಮಟ್ಟಿಗೆ ಮುಂದೂಡಲಾಗಿದೆ.
ಭಾನುವಾರ ಸ್ಪೀಕರ್ ಚುನಾವಣೆ ನಡೆಯಲಿದ್ದು, ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ಅಂದು ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಅವರು ಅವಿರೋಧ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್ನ ನಾನಾ ಪಟೋಲೆ ರಾಜೀನಾಮೆಯಿಂದ ಸ್ಪೀಕರ್ ಹುದ್ದೆ ಬಹಳ ತಿಂಗಳುಗಳಿಂದ ಖಾಲಿ ಇದೆ.
ಶಿಂಧೆಗೆ 155 ಶಾಸಕರ ಬಲ:
ಇನ್ನು ಏಕನಾಥ ಶಿಂಧೆ ನೇತೃತ್ವದ ನೂತನ ಸರ್ಕಾರಕ್ಕೆ ನಿಜವಾದ ಅಗ್ನಿಪರೀಕ್ಷೆ ಸೋಮವಾರ ಎದುರಾಗಲಿದ್ದು, ಅಂದು ವಿಶ್ವಾಸಮತ ಯಾಚನೆ ನಡೆಯಲಿದೆ. 288 ಶಾಸಕ ಬಲ ಹೊಂದಿರುವ ವಿಧಾನಸಭೆಯಲ್ಲಿ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 145ರ ಬದಲು 144 ಶಾಸಕರ ಬೆಂಬಲ ಸಾಕು. 39 ಶಿವಸೇನೆ ಶಾಸಕರು ಹಾಗೂ 10 ಸಣ್ಣಪುಟ್ಟಪಕ್ಷ ಅಥವಾ ಪಕ್ಷೇತರರ ಬೆಂಬಲ ಶಿಂಧೆಗೆ ಇದೆ. ಈ ನಡುವೆ, ಬಿಜೆಪಿ 106 ಬಲ ಹೊಂದಿದೆ. ಹೀಗಾಗಿ ಬಹುಮತಕ್ಕೆ ಬೇಕಾದ 144 ಸ್ಥಾನಗಳ ಬದಲು 155 ಸ್ಥಾನಗಳನ್ನು ಈಗಾಗಲೇ ಶಿಂಧೆ-ಬಿಜೆಪಿ ಮೈತ್ರಿ ಸರ್ಕಾರ ಹೊಂದಿದ್ದು, ಬಹುಮತದ ಗೆರೆಯನ್ನು ಸುಲಭವಾಗಿ ದಾಟಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ವಿಪಕ್ಷಗಳಾದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 16, ಎನ್ಸಿಪಿ 53 ಹಾಗೂ ಕಾಂಗ್ರೆಸ್ 43 ಶಾಸಕರನ್ನು ಹೊಂದಿವೆ. ಸಣ್ಣ ಪುಟ್ಟಪಕ್ಷಗಳು ಹಾಗೂ ಪಕ್ಷೇತರರು ಸೇರಿ ಇನ್ನಿತರ ಶಾಸಕರ ಸಂಖ್ಯಾ ಬಲ 20 ಆಗಿದೆ.
ಮಹಾರಾಷ್ಟ್ರ ವಿಧಾನಸಭೆ
ಒಟ್ಟು ಸ್ಥಾನ 288
ಖಾಲಿ ಸ್ಥಾನ 1
ಬಹುಮತಕ್ಕೆ 144
ಶಿಂಧೆ ಬಣ+ಬಿಜೆಪಿ 155
ಮಹಾ ವಿಕಾಸ ಅಘಾಡಿ ಕೂಟ 112
ಇತರರು 20
ಮಹಾರಾಷ್ಟ್ರ ವಿಧಾನಸಭೆ
ಒಟ್ಟು ಸ್ಥಾನ 288
ಖಾಲಿ ಸ್ಥಾನ 1
ಬಹುಮತಕ್ಕೆ 144
ಏಕನಾಥ ಶಿಂಧೆ ಬಣ 49
ಬಿಜೆಪಿ 106
ಎನ್ಸಿಪಿ 53
ಕಾಂಗ್ರೆಸ್ 43
ಶಿವಸೇನೆ 16
ಇತರರು 20
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ