
ಮುಂಬೈ (ನ.5): ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ರೈತನೊಬ್ಬ ಬುಧವಾರ ಭಾರೀ ಮಳೆ ಮತ್ತು ನಂತರದ ಪ್ರವಾಹದಿಂದ ಉಂಟಾದ ಬೆಳೆ ನಷ್ಟಕ್ಕೆ ಸರ್ಕಾರದಿಂದ ಕೇವಲ 6 ರೂ. ಪರಿಹಾರವನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ರೈತ ದಿಗಂಬರ್ ಸುಧಾಕರ್ ತಂಗ್ಡೆ, ಪೈಥಾನ್ ತಾಲ್ಲೂಕಿನ ದಾವರ್ವಾಡಿ ಗ್ರಾಮದ ನಿವಾಸಿ. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮರಾಠವಾಡ ಪ್ರದೇಶದ ಪ್ರವಾಸದ ಭಾಗವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಪೈಥಾನ್ನ ನಂದರ್ ಗ್ರಾಮದಲ್ಲಿ ವರದಿಗಾರರೊಂದಿಗೆ ತಂಗ್ಡೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ರೈತರೊಂದಿಗೆ ಸಂವಾದ ನಡೆಸಿದ್ದಾರೆ.
ಇತ್ತೀಚೆಗೆ, ರಾಜ್ಯದ ಅಕೋಲಾ ಜಿಲ್ಲೆಯ ಕೆಲವು ಹಳ್ಳಿಗಳ ರೈತರು, ಭಾರೀ ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಕೇಂದ್ರ ವಿಮಾ ಯೋಜನೆಯಡಿಯಲ್ಲಿ ಕೇವಲ 3 ರೂ. ಮತ್ತು 21 ರೂ. ಪರಿಹಾರವನ್ನು ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಪರಿಹಾರ ಹಣವು ನಮ್ಮ ದುಸ್ಥಿತಿಗೆ ಮಾಡಿದ ಅವಮಾನ ಹಾಗೂ ಅಪಹಾಸ್ಯ ಎಂದು ರೈತರು ಕರೆದಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಸಹಾಯ ಪಡೆದ ರೈತರು ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಚೆಕ್ಗಳ ಮೂಲಕ ಮೊತ್ತವನ್ನು ಹಿಂದಿರುಗಿಸಿದರು. "ನನಗೆ ಕೇವಲ ಎರಡು ಎಕರೆ ಭೂಮಿ ಇದೆ. ನನ್ನ ಬ್ಯಾಂಕ್ ಖಾತೆಗೆ 6 ರೂ. ಜಮಾ ಮಾಡಲಾಗಿದೆ ಎಂಬ ಸಂದೇಶ ನನಗೆ ಬಂದಿದೆ" ಎಂದು ತಂಗ್ಡೆ ಹೇಳಿದ್ದಾರೆ.
"ಇಷ್ಟು ಕಡಿಮೆ ಹಣ ನೀಡಿದ್ದಕ್ಕೆ ಸರ್ಕಾರ ನಾಚಿಕೆ ಆಗಬೇಕು. ಈ ಮೊತ್ತದಲ್ಲಿ ಒಂದು ಕಪ್ ಚಹಾ ಕೂಡ ಕುಡಿಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಸೈತರ ಸ್ಥಿತಿ ನೋಡಿ ಅಪಹಾಸ್ಯ ಮಾಡಿದೆ. ನಮಗೆ ಸಾಲ ಮನ್ನಾ ಬೇಕು ಮತ್ತು ಸರ್ಕಾರ ನನ್ನ ಖಾತೆಗೆ 6 ರೂ. ಜಮಾ ಮಾಡುವ ಮೂಲಕ ರೈತರ ಮೇಲೆ ಇಂತಹ ತಮಾಷೆ ಮಾಡುತ್ತಿದೆ. ನಮಗೆ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಕನಿಷ್ಠ (ಮಾಜಿ ಸಿಎಂ) ಉದ್ಧವ್ ಠಾಕ್ರೆ ತಮ್ಮ ಅಧಿಕಾರಾವಧಿಯಲ್ಲಿ ಸಾಲ ಮನ್ನಾ ಮಾಡಿದ್ದಾರೆ. ಈ ಸರ್ಕಾರ ಕೂಡ ಇದನ್ನು ಮೊದಲೇ ಘೋಷಿಸಿತು, ಆದರೆ ಏನೂ ಮಾಡಲಿಲ್ಲ..' ಎಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಜನರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಈಗ ಅವರು ಇಷ್ಟು ಕಡಿಮೆ ಮೊತ್ತವನ್ನು ಪರಿಹಾರವಾಗಿ ನೀಡುತ್ತಿದ್ದಾರೆ. ಆಗಸ್ಟ್-ಸೆಪ್ಟೆಂಬರ್ನಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಮರಾಠವಾಡ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ರೈತರು ವ್ಯಾಪಕ ಬೆಳೆ ನಷ್ಟವನ್ನು ಅನುಭವಿಸಿದರು. ರಾಜ್ಯ ಸರ್ಕಾರ ಕಳೆದ ತಿಂಗಳು ಸಂತ್ರಸ್ತ ರೈತರಿಗೆ 31,628 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿತು. ಇದರಲ್ಲಿ ಬೆಳೆ ನಷ್ಟ, ಮಣ್ಣಿನ ಸವೆತ, ಗಾಯಗೊಂಡ ವ್ಯಕ್ತಿಗಳ ಆಸ್ಪತ್ರೆಗೆ ದಾಖಲು, ಹತ್ತಿರದ ಸಂಬಂಧಿಕರಿಗೆ ಪರಿಹಾರ, ಮನೆಗಳು, ಅಂಗಡಿಗಳು ಮತ್ತು ದನದ ಕೊಟ್ಟಿಗೆಗಳಿಗೆ ಹಾನಿ ಸೇರಿದಂತೆ ಇತರ ಪರಿಹಾರಗಳು ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ