ಬರೀ ಸೆಕ್ಸ್‌ ಅಲ್ಲ, ಸಂತಾನಾಭಿವೃದ್ಧಿ ಮದುವೆಯ ಮೂಲ ಉದ್ದೇಶ: ಮದ್ರಾಸ್‌ ಹೈಕೋರ್ಟ್‌!

By Santosh NaikFirst Published Sep 19, 2022, 7:46 PM IST
Highlights

ಮದುವೆ ಕೇವಲ ಲೈಂಗಿಕ ಸಂತೋಷಕ್ಕಾಗಿ ಅಲ್ಲ, ಅದರ ಮುಖ್ಯ ಉದ್ದೇಶ ಸಂತಾನಾಭಿವೃದ್ಧಿ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.  ಒಂಬತ್ತು ಮತ್ತು ಆರು ವರ್ಷದ ತನ್ನ ಇಬ್ಬರು ಗಂಡುಮಕ್ಕಳನ್ನು ಮಧ್ಯಂತರ ಕಸ್ಟಡಿಗೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
 

ಚೆನ್ನೈ (ಸೆ.19): ಮದುವೆಯಾಗುವ ಸತಿಪತಿಗಳು ಒಂದು ಉದ್ದೇಶವನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ದೈಹಿಕ ಸಂತೋಷಕ್ಕಾಗಿ ಎರಡು ದೇಹಗಳು ಒಂದಾಗಬೇಕು ಎನ್ನುವ ಕಾರಣಕ್ಕಾಗಿ ಮದುವೆ ನಡೆಯುವುದಿಲ್ಲ. ಮದುವೆಯ ಮುಖ್ಯ ಉದ್ದೇಶ ಸಂತಾನಾಭಿವೃದ್ಧಿ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣನ್‌ ರಾಮಸಾಮಿ ಕಳೆದ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳ ಕಸ್ಟಡಿಗಾಗಿ ದಂಪತಿಗಳಿಬ್ಬರು ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದ ಪ್ರಕರಣದ ವಿಚಾರಣೆಯ ವೇಳೆ ಮಾತನಾಡಿದ ಅವರು, ಇಂಥ ಪ್ರಕರಣಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಮ್ಮ ಸಂತೋಷಕ್ಕಾಗಿ ಇಬ್ಬರು ವ್ಯಕ್ತಿಗಳ ಕೃತ್ಯದ ಮೂಲಕ ಈ ಕೆಟ್ಟ ಜಗತ್ತಿಗೆ ಕಾಲಿಟ್ಟಿದ್ದೇವೆ ಎನ್ನುವ ವಿಷಾದ ಅವರಲ್ಲಿ  ಮೂಡುತ್ತದೆ ಎಂದು ಹೇಳಿದ್ದಾರೆ. "ವಿವಾಹದ ಪರಿಕಲ್ಪನೆಯು ಕೇವಲ ದೈಹಿಕ ಸಂತೋಷಕ್ಕಾಗಿ ಅಲ್ಲ, ಆದರೆ ಇದು ಮುಖ್ಯವಾಗಿ ಸಂತಾನವೃದ್ಧಿ ಉದ್ದೇಶಕ್ಕಾಗಿ ಇರುವ ಸಂಪ್ರದಾಯ. ಇದರಿಂದಾಗಿ ಕುಟುಂಬ ವಿಸ್ತಾರವಾಗುತ್ತದೆ. ಇಬ್ಬರ ಸಂಬಂಧದಿಂದ ಹುಟ್ಟಿದ ಮಗು, ಎರಡು ವ್ಯಕ್ತಿಗಳ ನಡುವಿನ ಕೊಂಡಿಯಾಗಿರುತ್ತದೆ. ಈ ಇಬ್ಬರು ವ್ಯಕ್ತಿಗಳು ಪವಿತ್ರ ಪ್ರಮಾಣವನ್ನು ತೆಗೆದುಕೊಂಡು ಈ ಸಂಬಂಧ ಮಾಡಿರುತ್ತಾರೆ ಎಂದು ಕೋರ್ಟ್‌ ಹೇಳಿದೆ.

ಒಂಬತ್ತು ಮತ್ತು ಆರು ವರ್ಷದ ತನ್ನ ಇಬ್ಬರು ಪುತ್ರರನ್ನು ಮಧ್ಯಂತರ ಕಸ್ಟಡಿಗೆ ನೀಡುವಂತೆ ಕೋರಿ ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾಹಿತಿಯ ಪ್ರಕಾರ ದಂಪತಿಗಳು 2009 ರಲ್ಲಿ ವಿವಾಹವಾಗಿದ್ದರು. ಆದರೆ ಏಪ್ರಿಲ್ 2021 ರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭ ಮಾಡಿದ್ದಾರೆ. ತನ್ನ ಪತಿಯ ಮನೆಯ ಎದುರಿನಲ್ಲಿಯೇ ಇರುವ ಫ್ಲಾಟ್‌ಗೆ ಮಹಿಳೆ ಸ್ಥಳಾಂತರವಾಗಿದ್ದರೆ, ಇಬ್ಬರು ಮಕ್ಕಳು ಗಂಡನ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಈಗ ಇಬ್ಬರು ಮಕ್ಕಳ ಕಸ್ಟಡಿಗಾಗಿ ಅವರು ಕೋರ್ಟ್‌ನಲ್ಲಿ ಕೇಸ್‌ ಹೂಡಿದ್ದಾರೆ.

ಮಹಿಳೆಯ ಪಾಲಕರು (Womens parents) ಕೂಡ ಇದೇ ಬಿಲ್ಡಿಂಗ್‌ನ ಇನ್ನೊಂದು ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾರೆ. ತನ್ನ ಮಗಳ ಗಂಡ ಕೆಲಸಕ್ಕೆ ಹೋದಾಗ ಅವರು ಮಕ್ಕಳನ್ನು ಪಾಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಹೈಕೋರ್ಟ್ (High Court) ತಾಯಿಗೆ ಭೇಟಿ ನೀಡುವ ಹಕ್ಕು ನೀಡಿದ್ದರೂ, ಪತಿ ಆದೇಶ ಪಾಲಿಸುತ್ತಿಲ್ಲ, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಮಕ್ಕಳ ಮನಸ್ಸಿನಿಂದ ದೂರವಿಡುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ನ್ಯಾಯಮೂರ್ತಿ ರಾಮಸಾಮಿ (Justice Krishnan Ramasamy) ಅವರು ಗಂಡನ ಇಂತಹ ನಡವಳಿಕೆಗೂ (Matrimonial Disputes) ಆಕ್ಷೇಪ ವ್ಯಕ್ತಪಪಡಿಸಿದ್ದಾರೆ. ಮಗುವನ್ನು ಅವರ ತಾಯಿ ಹಾಗೂ ಅವರ ಪೋಷಕರಿಂದ ದೂರವಿಡುವ ಪ್ರಕ್ರಿಯೆಯು ಕ್ರೌರ್ಯ ಹಾಗೂ ಮಕ್ಕಳ ನಿಂದನೆ ಎಂದು ಅನಿಸಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು. "ಮಗುವನ್ನು ಪೋಷಕರ ವಿರುದ್ಧ ಎತ್ತಿಕಟ್ಟುವುದು ಮಗುವನ್ನು ತನ್ನ ವಿರುದ್ಧ ಎತ್ತಿಕಟ್ಟಿದ ರೀತಿಯಲ್ಲಿಯೇ. ಪೋಷಕರಿಂದ ದೂರವಾಗುವುದು ಅಮಾನವೀಯ ಮತ್ತು ಮಗುವಿಗೆ ಅಪಾಯವಾಗಿದೆ. ವಾಸ್ತವವಾಗಿ, ದ್ವೇಷವು ಮಗುವಿಗೆ ಅವನ / ಅವಳ ತಾಯಿ / ತಂದೆಯ ವಿರುದ್ಧ ಸ್ವಾಭಾವಿಕವಾಗಿ ಬರುವ ಭಾವನೆಯಲ್ಲ. ಮಕ್ಕಳು ನಂಬುವ ವ್ಯಕ್ತಿಯಿಂದ ಅದನ್ನು ತುಂಬುವ ಕೆಲಸ' ಎಂದು ಪೀಠ (Madras High Court) ಅಭಿಪ್ರಾಯಪಟ್ಟಿದೆ.

ಸಂಭಾವನೆ ಕಿರಿಕ್, ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ನಟ ಶಿವಕಾರ್ತಿಕೇಯನ್!

ವಿಚ್ಛೇದಿತ ಗಂಡನ ನಡವಳಿಕೆಯನ್ನು ನೋಡಿದರೆ, ಮಕ್ಕಳು ಇನ್ನು ಮುಂದೆ ಸುರಕ್ಷಿತ ಕಸ್ಟಡಿಯಲ್ಲಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿದೆ. ಆದ್ದರಿಂದ, ಮೂಲ ಅರ್ಜಿಯನ್ನು ಅಂತಿಮವಾಗಿ ತೀರ್ಮಾನಿಸುವವರೆಗೆ ಎರಡೂ ಮಕ್ಕಳ ಮಧ್ಯಂತರ ಕಸ್ಟಡಿಯನ್ನು ಅವರ ತಾಯಿಗೆ ಹಸ್ತಾಂತರಿಸುವಂತೆ ಕೋರ್ಟ್ ಸೂಚಿಸಿದೆ. ಮಕ್ಕಳು ತಮ್ಮ ತಾಯಿಯ ಅಜ್ಜಿಯರ ಆರೈಕೆಯಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರು ಆರಾಮದಾಯಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಶಾಲೆ ಮತ್ತು ಇತರ ದಿನಚರಿಯನ್ನು ಮುಂದುವರಿಸುವಂತೆ ಅದು ಮಹಿಳೆಗೆ ನಿರ್ದೇಶಿಸಿದೆ.

ಬಡ್ತಿಯನ್ನು ನೌಕರರು ಹಕ್ಕು ಎಂದು ಹೇಳಲು ಸಾಧ್ಯವಿಲ್ಲ: ಮದ್ರಾಸ್ ಹೈಕೋರ್ಟ್‌

ಪಾಲನೆ ವಿವಾದಗಳಲ್ಲಿ ಮಕ್ಕಳಿಗೆ ಉತ್ತಮವಾದದ್ದನ್ನು ಕಾನೂನು ಬಯಸಿದರೂ, ಪೋಷಕರಲ್ಲಿ ಒಬ್ಬರಿಗೆ ಮಾತ್ರ ಅವರ ಪಾಲನೆಯನ್ನು ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯವು ಹೇಳಿದ್ದು, ಇದು ವಿಷಾದದ ಸಂಗತಿ ಎಂದಿದೆ. ಆದ್ದರಿಂದ, ಪೋಷಕರು ವೈವಾಹಿಕ ವಿವಾದಗಳು ಮತ್ತು ಜಗಳಗಳ ಬಗ್ಗೆ "ಹೆಚ್ಚು ಹತಾಶರಾಗಬಾರದು" ಮತ್ತು ಬದಲಿಗೆ ತಮ್ಮ ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸಲು ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂದು ಅದು ಹೇಳಿದೆ.

click me!