
ಕೊಚ್ಚಿ: ವಿದೇಶಿ ದೇಣಿಗೆ(ನಿಯಂತ್ರಣ)ಗೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಎಫ್ಸಿಆರ್ಎ (ತಿದ್ದುಪಡಿ) ವಿಧೇಯಕಕ್ಕೆ ಕೇರಳದ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್ನ ಫಾದರ್ ಪೌಲ್ ಥಲೈಕಾಡ್ ತೀವ್ರ ಕಿಡಿಕಾರಿದ್ದಾರೆ. ನಾವು ಚರ್ಚ್ ಹಣವನ್ನು ಸಮಾಜ ಸೇವೆಗೆ ಬಳಸುತ್ತೇವೆಯೇ ಹೊರತು ಕೂಡಿಡುವುದಿಲ್ಲ. ದೇವಸ್ಥಾನ ಗಳಲ್ಲಿರುವ ಚಿನ್ನವನ್ನು ಲಾಕರ್ನಲ್ಲಿಡುವ ಬದಲು ಜನ ಸೇವೆಗಾಗಿ ಬಳಸಬೇಕು ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಫಾದರ್ ಪೌಲ್ ಅವರ ಈ ಹೇಳಿಕೆ ಇದೀಗ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಫಾದರ್ ಹೇಳಿದ್ದೇನು?: ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚರ್ಚ್ಗಳಿಗೆ ಹರಿದು ಬರುವ ಹಣವನ್ನು ನಾವು ಕೂಡಿಡುವುದಿಲ್ಲ, ಬದಲಾಗಿ ಜನ ಸೇವೆಗಾಗಿ ಬಳಸುತ್ತೇವೆ. ಸಾಯಿಬಾಬಾ ಮತ್ತು ಮಾತಾ ಅಮೃತಾನಂದಮಯಿಯಂಥ ಧಾರ್ಮಿಕ ಚಳವಳಿಗಳು ಕೂಡ ಇದೇ ರೀತಿಯ ಸಾರ್ವಜನಿಕ ಸೇವೆಯ ಧ್ಯೇಯ ಹೊಂದಿವೆ. ಅದೇ ರೀತಿ ದೇವಸ್ಥಾನಗಳಲ್ಲಿರುವ ಚಿನ್ನ ಜನ ಕಲ್ಯಾಣಕ್ಕಾಗಿ ಬಳಕೆಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಂಪುಕೋಟೆ, ಸಂಸತ್ ಟಾರ್ಗೆಟ್: ಆಟಿಕೆ ಕಾರಿಗೆ ಐಇಡಿ ಜೋಡಿಸುತ್ತಿದ್ದಾಗಲೇ ಶಂಕಿತರು ಅಂದರ್
ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಕೆಲ ದೇವಸ್ಥಾನಗಳಲ್ಲಿ ಸಂಪತ್ತಿನ ಸಂಗ್ರಹ ಹಾಗೂ ಹಲವು ಕ್ರಿಶ್ಚಿಯನ್ ಸಂಸ್ಥೆಗಳ ಸೇವಾ ಕಾರ್ಯಗಳ ನಡುವೆ ತುಲನೆ ಮಾಡಿ ನಾನು ಈ ಹೇಳಿಕೆ ನೀಡಿದ್ದೇನಷ್ಟೆ. ಹಿಂದಿನಿಂದಲೂ ಚರ್ಚ್ಗಳು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಇದು ಸರ್ವ ಧರ್ಮೀಯರು, ಭಾರತೀಯರಿಗಾಗಿ ಮಾಡುವ ಸೇವೆ. ಮಾನವಕುಲದ ಕಲ್ಯಾಣವೇ ಕೆಲಸ ದೇವರ ಕೆಲಸ ಎಂಬುದು ಎಲ್ಲಾ ಧರ್ಮಗಳ ಸಾರ್ವಕಾಲಿಕ ಆಧ್ಯಾತ್ಮಿಕ ತತ್ವವಾಗಿದೆ. ದೇವಸ್ಥಾನಗಳಾಗಲಿ, ಚಚ್ ೯ಗಳಾಗಲಿ ಸಂಪತ್ತು ಹೊಂದಿವೆಯೇ, ಇಲ್ಲವೇ ಎಂಬುದಕ್ಕಿಂತ ಆ ಸಂಪತ್ತನ್ನು ಯಾವ ರೀತಿ ಸಮಾಜದ ಒಳಿತಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂಬುದು ಮುಖ್ಯ. ನಮ್ಮದು ಜನಸೇವೆಯೇ ಜನಾರ್ದನ ಸೇವೆ ಎಂಬುದು ಧ್ಯೇಯ ಎಂದಿದ್ದಾರೆ.
ಫಾದರ್ ಅವರ ಈ ಹೇಳಿಕೆಗೆ ಹಿಂದೂ ಐಕ್ಯ ವೇದಿಕೆ ಸೇರಿ ಹಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇವಸ್ಥಾನದ ಆಸ್ತಿ ಭಕ್ತರು ನೀಡಿದ್ದೇ ಹೊರತು ಬಡವರ ಫೋಟೋ ತೋರಿಸಿ ವಿದೇಶದಿಂದ ಸ್ಮಗ್ಲಿಂಗ್ ಮಾಡಿದ್ದಲ್ಲ ಎಂದು ಆರೋಪಿಸಿದೆ. ಕೆಲ ಹಿಂದೂ ಸಂಘಟನೆಗಳು ಕ್ರಿಶ್ಚಿಯನ್ ತೀವ್ರಗಾಮಿಗಳು ಮತ್ತು ಜಿಹಾದಿಗಳು ದೇವಸ್ಥಾನದ ಆಸ್ತಿ ಮೇಲೆ ಕಣ್ಣುಹಾಕುತ್ತಿದ್ದಾರೆ ಎಂದೂ ಆರೋಪಿಸಿವೆ.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ