ತಿರುಪತಿ(ನ.02): ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಿರುಪತಿ ಬೆಟ್ಟದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ. ಬುಧವಾರ ಬೆಳಗ್ಗೆ ಬಸ್ಸೊಂದು ಬೆಟ್ಟಏರುತ್ತಿದ್ದ ವೇಳೆ, ಏಕಾಏಕಿ ಬಂಡೆಯೊಂದು ಬೆಟ್ಟದಿಂದ ಕೆಳಗೆ ಉರುಳಿದೆ. ಇದನ್ನು ಚಾಲಕ ತಕ್ಷಣವೇ ಗಮನಿಸಿ ಬಸ್ಸನ್ನು ನಿಲ್ಲಿಸಿದ ಕಾರಣ, ಬಸ್ಸಿನಲ್ಲಿದ್ದ 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ತಿರುಪತಿ ಬೆಟ್ಟದ 2ನೇ ಘಾಟ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಸುಮಾರು ಅಡಿ ಎತ್ತರದಿಂದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಹಲವು ಕಾರುಗಳು ಸೇರಿ ರಸ್ತೆಗಳು ಹಾನಿಗೊಳಗಾಗಿವೆ. ಐಐಟಿ ದೆಹಲಿಯ ತಜ್ಞರು ಅವಗಢ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಕೂಡಾ ಭಾರೀ ಮಳೆ ಸುರಿದ ಪರಿಣಾಮ ತಿರುಪತಿಯಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವಿಜಿಲೆನ್ಸ್, ಎಂಜಿನಿಯರಿಂಗ್ ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯಿಂದ ಬಂಡೆಗಳನ್ನು ತೆಗೆಯುವ ಮೇಲ್ವಿಚಾರಣೆ ನಡೆಸಿದರು.
ಮಳೆಯಿಂದ ತಪ್ಪಿದ್ದ ತಿಮ್ಮಪ್ಪನ ದರ್ಶನಕ್ಕೆ ಶೀಘ್ರ ಹೊಸ ದಿನಾಂಕ
ಅಲಿಪಿರಿ ಸಮೀಪದ ಎರಡನೇ ಘಾಟ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಹಲವು ವಾಹನಗಳು ಜಖಂಗೊಂಡಿವೆ. ವರದಿಗಳ ಪ್ರಕಾರ, ವಾಹನಗಳನ್ನು ಅಂತಿಮವಾಗಿ ಲಿಂಕ್ ರಸ್ತೆಯ ಉದ್ದಕ್ಕೂ ಪರ್ಯಾಯ ಮಾರ್ಗಗಳ ಮೂಲಕ ನಿಧಾನವಾಗಿ ತಿರುಗಿಸಲಾಯಿತು. ಬೆಟ್ಟಗಳಿಂದ ಘಾಟ್ ರಸ್ತೆಗೆ ಬಂಡೆಗಳು ಬಿದ್ದಿದ್ದು, ರಸ್ತೆ ಹಲವು ಕಡೆ ಹಾಳಾಗಿದೆ.
ತಿರುಮಲ ಇತ್ತೀಚೆಗೆ ನವೆಂಬರ್ 18 ರಂದು ಅಭೂತಪೂರ್ವ ಭಾರೀ ಮಳೆಗೆ ಸಾಕ್ಷಿಯಾಯಿತು. ಇದರ ಪರಿಣಾಮವಾಗಿ ಘಾಟ್ ರಸ್ತೆಗಳಲ್ಲಿ ಅನೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಮಳೆಯ ಮುನ್ಸೂಚನೆಯಿಂದಾಗಿ ಎರಡು ದಿನಗಳ ಕಾಲ ಘಾಟ್ ರಸ್ತೆಗಳನ್ನು ಮುಚ್ಚುವುದಾಗಿ ಟಿಟಿಡಿ ಈಗಾಗಲೇ ಘೋಷಿಸಿತ್ತು. ದುರಸ್ತಿ ಕಾರ್ಯದ ನಂತರ ಕೆಲವು ದಿನಗಳ ನಂತರ ಘಾಟ್ ರಸ್ತೆಗಳನ್ನು ವಾಹನ ಸಂಚಾರಕ್ಕೆ ತೆರೆಯಲಾಯಿತು. ಮೊದಲ ಘಾಟ್ ರಸ್ತೆಯಲ್ಲಿ ಅಕ್ಕಗರ್ಲ ದೇವಸ್ಥಾನದ ಬಳಿ ತಡೆಗೋಡೆಗೆ ಹಾನಿಯಾಗಿದ್ದು, ನಾಲ್ಕು ಕಡೆ ಬಂಡೆಗಳು ರಸ್ತೆಗೆ ಬಿದ್ದಿವೆ ಎಂದು ಟಿಟಿಡಿ ತಿಳಿಸಿದೆ.
25 ವರ್ಷಗಳಲ್ಲೇ ಅತ್ಯಧಿಕ ಮಳೆ : ಬಂಗಾಳ ಕೊಲ್ಲಿಯಲ್ಲಿ (Bangala Kolli) ಉಂಟಾಗಿರುವ ವಾಯುಭಾರ ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ (Tirupathi) ಸಂಕಷ್ಟ ತಂದಿಟ್ಟಿದೆ. ವಾಯುಭಾರ ಕುಸಿತದ ಪರಿಣಾಮ ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು (Chittur) ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿತ್ತು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ದೇಗುಲ (Temple) ನಗರದಲ್ಲಿ ಇಂಥ ಮಳೆ (Rain) ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ (flood) ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ.
ತಿರುಪತಿಯ ಹಲವು ತಗ್ಗು ಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಿರುಮಲ (Tirumala) ಬೆಟ್ಟಕ್ಕೆ ಹೊಂದಿಕೊಂಡಿರುವ ಎಲ್ಲಾ ನಾಲ್ಕು ಪವಿತ್ರ ಮಾಡಾ ಬೀದಿಗಳು ಮತ್ತು ವೈಕುಂಠ ಕ್ಯೂ ಕಾಂಪ್ಲೆಕ್ಸ್ ಕೂಡಾ ಪೂರ್ಣ ಜಲಾವೃತವಾಗಿತ್ತು. ತಿರುಮಲದ ಜಪಾಲಿ ಆಂಜನೇಯ ದೇಗುಲ (Japali anjaneya temple) ಕೂಡಾ ನೀರಿನಲ್ಲಿ ಮುಳುಗಿದೆ. ಭಾರೀ ಮಳೆಯ ಪರಿಣಾಮ ತಿಮ್ಮಪ್ಪನ ದರ್ಶನವನ್ನು ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ದೇವರ ದರ್ಶನಕ್ಕೆ ಆಗಮಿಸಿದ್ದ ಸಾಕಷ್ಟು ಜನ ಬೆಟ್ಟದ ಮೇಲೇ ಸಿಕ್ಕಿಬಿದ್ದಿದ್ದರು.