
ನವದೆಹಲಿ(ಜು.10): ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಒಟ್ಟಾರೆ ಶೇ.10ರಷ್ಟಿದ್ದ ಮುಂಗಾರು ಮಳೆಯ ಕೊರತೆ ಕೇವಲ 8 ದಿನಗಳಲ್ಲೇ ನೀಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಋುತುವಿನಲ್ಲಿ ಮಳೆಯ ಪ್ರಮಾಣ 24.3 ಸೆಂ.ಮೀ.ಗೆ ತಲುಪಿದ್ದು, ಸಾಮಾನ್ಯ ಮಳೆ ಪ್ರಮಾಣಕ್ಕಿಂತ ಶೇ.2ರಷ್ಟುಹೆಚ್ಚಿದೆ.
ಆದರೂ ಪ್ರಾದೇಶಿಕವಾಗಿ ಮಳೆಯ ಪ್ರಮಾಣ ಭಾರಿ ವ್ಯತ್ಯಾಸವನ್ನು ಹೊಂದಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.17ರಷ್ಟು ಮಳೆಯ ಕೊರತೆ ಉಂಟಾಗಿದೆ. ಸಾಮಾನ್ಯವಾಗಿ ಬೀಳಬೇಕಿದ್ದ 45 ಸೆಂ.ಮೀ. ಮಳೆಯ ಬದಲು 37 ಸೆಂ.ಮೀ. ಮಳೆಯಾಗಿದೆ. ಆದರೆ ಉತ್ತರ ಭಾರತದಲ್ಲಿ ಶೇ.59ರಷ್ಟು ಅಧಿಕ ಮಳೆಯಾಗಿದೆ. ಸಾಮಾನ್ಯವಾಗಿ ಬೀಳುತ್ತಿದ್ದ 12 ಸೆಂ.ಮೀ. ಮಳೆಯ ಬದಲಿಗೆ 19 ಸೆಂ.ಮೀ. ಮಳೆಯಾಗಿದೆ. ಬಹುತೇಕ ರೈತರು ಮುಂಗಾರು ಮಳೆಯನ್ನೇ ನಂಬಿಕೊಂಡಿರುವ ಮಧ್ಯ ಭಾರತದಲ್ಲಿ ಶೇ.4ರಷ್ಟು ಹೆಚ್ಚು ಮಳೆಯಾಗಿದ್ದು, ನಿಗದಿತ 25 ಸೆಂ.ಮೀ. ಬದಲಿಗೆ 26 ಸೆಂ.ಮೀ. ಮಳೆಯಾಗಿದೆ.
ಭಾರಿ ಮಳೆಗೆ ಕೊಚ್ಚಿ ಹೋದ ಎಸ್ಬಿಐ ಎಟಿಎಂ, ಹಿಮಾಚಲ ಪ್ರದೇಶದಲ್ಲಿ ವಾಹನ, ಕಟ್ಟದ ಜಲಸಮಾಧಿ!
ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ದಕ್ಷಿಣ ಭಾರತದಲ್ಲಿ ಉಂಟಾಗಿದ್ದ ಮಳೆಯ ಕೊರತೆಯೂ ಶೇ.45ರಿಂದ ಶೇ.23ಕ್ಕೆ ಕುಸಿತ ಕಂಡಿದೆ. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿತ್ತು. ಇದೀಗ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ