
ರಕ್ಷಾಬಂಧನದಂದು ಸೋದರನಿಗೆ ರಕ್ಷೆ ಕಟ್ಟುವುದಕ್ಕಾಗಿ ತವರು ಮನೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದಂತಹ ಅಪರೂಪದ ಘಟನೆ ನಡೆದಿದೆ. ಹೆರಿಗೆ ನೋವಿನಿಂದ ಸಂಕಟ ಪಡುತ್ತಿದ್ದ ಮಹಿಳೆಗೆ ಬಸ್ನಲ್ಲಿದ್ದ ಲೇಡಿ ಕಂಡಕ್ಟರ್ವೊಬ್ಬರು ಬಸ್ನಲ್ಲೇ ಇದ್ದ ನರ್ಸ್ವೋರ್ವರ ಸಹಾಯದಿಂದ ಬಸ್ನಲ್ಲೇ ಸಹಜ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆರಿಗೆ ನೋವಿನಿಂದ ಒದ್ದಾಡಲು ಶುರು ಮಾಡುತ್ತಿದ್ದಂತೆ ಬಸ್ ಚಾಲಕ ಬಸ್ ಅನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಮಹಿಳೆಯ ಹೆರಿಗೆ ನೋವು ಹೆಚ್ಚಾಗುತ್ತಲೇ ಹೋಗಿದ್ದು, ಹೀಗಾಗಿ ಮಹಿಳಾ ನಿರ್ವಾಹಕಿ ಹಾಗೂ ಬಸ್ನಲ್ಲಿದ್ದ ನರ್ಸ್ ಇಬ್ಬರು ಸೇರಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲೇ ಮಗುವಿಗೆ ಹೆರಿಗೆ ಮಾಡಲು ನಿರ್ಧರಿಸಿದರು.
ಅದರಂತೆ ತಕ್ಷಣ ಬಸ್ ನಿಲ್ಲಿಸಲಾಯಿತು. ಹಾಗೂ ಬಸ್ನಲ್ಲಿದ್ದ ಜನರನ್ನೆಲ್ಲಾ ಕೆಳಗೆ ಇಳಿಸಿ ಬಸ್ಸನ್ನು ಖಾಲಿ ಮಾಡಲಾಯ್ತು. ಬಳಿಕ ಮಹಿಳಾ ನಿರ್ವಾಹಕಿ ಹಾಗೂ ನರ್ಸ್ ಇಬ್ಬರು ಸೇರಿ ಗರ್ಭಿಣಿಗೆ ಹೆರಿಗೆಗೆ ಸಹಾಯ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಗು ಅಳಲು ಆರಂಭಿಸಿದೆ. ಈ ವೇಳೆ ಬಸ್ ಹೊರಗಿದ್ದವರೆಲ್ಲಾ ಮಗುವಿನ ಜನನಕ್ಕೆ ಸಂಭ್ರಮಪಟ್ಟಿದ್ದಾರೆ.
ಈ ವಿಚಾರವನ್ನು ತೆಲಂಗಾಣ ಟಿಜಿಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಸಿ. ಸಜ್ಜನರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನವಜಾತ ಶಿಶು ಹಾಗೂ ತಾಯಿಯ ಫೋಟೋವನ್ನು ಅವರು ಹಂಚಿಕೊಂಡಿದ್ದು, ಈ ಘಟನೆಯ ಸಂಪೂರ್ಣ ವಿವರವನ್ನು ಜನರಿಗೆ ನೀಡಿದ್ದಾರೆ. ಜೊತೆಗೆ ಮಹಿಳೆಗೆ ಸಹಾಯ ಮಾಡಿದ ಸಾರಿಗೆ ಇಲಾಖೆಯ ಮಹಿಳಾ ನಿರ್ವಾಹಕಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸುಲಭ ಹೆರಿಗೆಗೆ ಗರ್ಭಿಣಿಯರಿಗೆ ಮ್ಯಾಜಿಕ್ ಯೋಗ ಭಂಗಿಯ ಮಹತ್ವ ತಿಳಿಸಿಕೊಟ್ಟ ದೀಪಿಕಾ ಪಡುಕೋಣೆ
ಮಹಿಳಾ ಕಂಡಕ್ಟರ್ ಹಾಗೂ ನರ್ಸ್ ಕಾರ್ಯಕ್ಕೆ ಶ್ಲಾಘನೆ.
ಟಿಜಿಎಸ್ಆರ್ಟಿಸಿ ಬಸ್ನಲ್ಲಿ ನಡೆದ ಈ ಅಚ್ಚರಿಯ ಘಟನೆಯನ್ನು ತೆಲಂಗಾಣದ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ರಕ್ಷಾ ಬಂಧನದಂದು ತನ್ನ ಸಹೋದರನನ್ನು ಭೇಟಿಯಾಗಿ ರಾಕಿ ಕಟ್ಟುವ ಬಯಕೆಯಿಂದ ಅವರು ಬಸ್ ಏರಿ ತವರು ಮನೆಗೆ ಹೊರಟ ವೇಳೆ ಈ ಘಟನೆ ನಡೆದಿದೆ. ಆದರೆ ಬಸ್ನಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ, ಅವರ ನರಳಾಟ ನೋಡಲಾಗದೇಮಹಿಳಾ ನಿರ್ವಾಹಕಿ ಮತ್ತು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ನರ್ಸ್ ಒಬ್ಬರು ಬಸ್ನಲ್ಲಿಯೇ ಹೆರಿಗೆ ಮಾಡಲು ನಿರ್ಧರಿಸಿದರು, ಅಂತಿಮವಾಗಿ ಇಬ್ಬರು ಮಹಿಳೆಯರು ಯಶಸ್ವಿಯಾಗಿ ಮಗುವಿನ ಜನನಕ್ಕೆ ಸಹಾಯ ಮಾಡಿದರು. ಇವರ ಕಾರ್ಯಕ್ಕೆ ಈಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ:ಪ್ರೆಗ್ನೆಸಿಯಲ್ಲಿ ಇಷ್ಟೆಲ್ಲಾ ವರ್ಕೌಟ್ ಮಾಡ್ತಾರೆ ಮಿಲನಾ ನಾಗರಾಜ್; ವಿಡಿಯೋ ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ