
ಜನರಿಂದ ಕೇವಲ 2 ರೂಪಾಯಿ ಪಡೆದು ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡುತ್ತಿದ್ದ ಕೇರಳದ ಖ್ಯಾತ ವೈದ್ಯ ಡಾ. ಎ.ಕೆ. ರೈರು ಗೋಪಾಲ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ರೂಪಾಯಿ ಸುಲಿಗೆ ಮಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿಈ ವೈದ್ಯರು ವೈದ್ಯೋ ನಾರಾಯಣ ಹರಿಃ ಎಂಬ ಮಾತಿನಂತೆ ತಮ್ಮ ಬಳಿ ಚಿಕಿತ್ಸೆಗೆ ಬಂದ ಪ್ರತಿಯೊಬ್ಬರಿಗೂ ಬಡವ ಶ್ರೀಮಂತ ಎಂಬ ಬೇಧವಿಲ್ಲದೇ ಕೇವಲ 2 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದರು. ಇವರ ಈ ಉದಾರತೆಯ ಕಾರಣಕ್ಕೆ ಇವರನ್ನು ಜನರು ಪ್ರೀತಿಯಿಂದ 2 ರೂಪಾಯಿ ಡಾಕ್ಟರ್ ಎಂದೇ ಕರೆಯುತ್ತಿದ್ದರು.
18 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ:
ಉತ್ತರ ಕೇರಳದ ಕಣ್ಣೂರಿನ ಈ ವೈದ್ಯ 50 ವರ್ಷಗಳಿಗೂ ಹೆಚ್ಚು ಕಾಲ ತಾವು ನೀಡುವ ಚಿಕಿತ್ಸೆಗೆ ಕೇವಲ ಹೆಸರಿಗಷ್ಟೇ ದುಡ್ಡು ಪಡೆಯುತ್ತಿದ್ದರು. ಹಲವು ವರ್ಷಗಳ ಕಾಲ 2 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಅವರು 18 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಅವರು ಭಾನುವಾರ ತಮ್ಮ ಮನೆಯಲ್ಲಿ ನಿಧನರಾಗಿದ್ದು, ಅವರ ಸಾವಿಗೆ ಲಕ್ಷಾಂತರ ಜನ ಕಂಬನಿ ಮಿಡಿದಿದ್ದಾರೆ.
ಕೇರಳ ಸಿಎಂ ಸಂತಾಪ
ಡಾ. ಗೋಪಾಲ್ ಅವರಿಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇರಳದ ಅತ್ಯುತ್ತಮ ಕುಟುಂಬ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ಸಾವಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಅವರೊಬ್ಬ ಜನರ ವೈದ್ಯ, ಅರ್ಧ ಶತಮಾನದವರೆಗೆ, ಅವರು ಸಮಾಲೋಚನೆಗಾಗಿ ಕೇವಲ ಎರಡು ರೂಪಾಯಿಗಳನ್ನು ಮಾತ್ರ ವಿಧಿಸುತ್ತಿದ್ದರು, ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಿದರು. ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿ ಅಸಂಖ್ಯಾತ ರೋಗಿಗಳಿಗೆ ದೊಡ್ಡ ಸಾಂತ್ವನವಾಗಿತ್ತು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬೆಳಗ್ಗೆ 3 ಗಂಟೆಯಿಂದಲೇ ಚಿಕಿತ್ಸೆ ಆರಂಭಿಸುತ್ತಿದ್ದ ಡಾ. ಗೋಪಾಲನ್
ತಮ್ಮ ಬಳಿ ಚಿಕಿತ್ಸೆ ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ದಿನಗೂಲಿ ಕಾರ್ಮಿಕರಿಗೂ ಸಮಯ ನೀಡುವುದಕ್ಕಾಗಿ ಅವರು ಬೆಳಗಿನ ಜಾವ 3 ಗಂಟೆಯಿಂದಲೇ ರೋಗಿಗಳನ್ನು ನೋಡಲು ಪ್ರಾರಂಭಿಸಿದ್ದರು.. ಅವರು ಪ್ರತಿದಿನ ನೂರಾರು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಅವರಿಂದ ಚಿಕಿತ್ಸೆ ಪಡೆದ ಅನೇಕರು ಅವರೊಬ್ಬ ವೈದ್ಯನಿಗಿಂತ ಹೆಚ್ಚು ಎಂದು ಪರಿಗಣಿಸುತ್ತಿದ್ದರು. ಕೆಲವೊಂದು ದಿನ ಅವರು 300ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ಇದೆ.
ಸರಳ ಹಾಗೂ ಶಿಸ್ತಿನ ಜೀವನಶೈಲಿ
ಡಾ. ಗೋಪಾಲ್ ಅವರ ದೈನಂದಿನ ದಿನಚರಿ ಬಹಳ ಸರಳತೆ ಮತ್ತು ಶಿಸ್ತಿನಿಂದ ಕೂಡಿತ್ತು. ಅವರು ಬೆಳಗಿನ ಜಾವ 2:15 ಕ್ಕೆ ಎಚ್ಚರಗೊಂಡು, ಮೊದಲು ತಮ್ಮ ಹಸುಗಳನ್ನು ನೋಡಿಕೊಳ್ಳುತ್ತಿದ್ದರು ಹಸುಗಳಿರುವ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ಹಾಲು ಕರೆಯುತ್ತಿದ್ದರು. ಇದಾದ ನಂತರ ಸ್ನಾನ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹಾಲು ವಿತರಿಸಿ ಬರುತ್ತಿದ್ದರು. ನಂತರ ಬೆಳಗ್ಗೆ 6:30 ರ ಹೊತ್ತಿಗೆ ಥಾನ್ ಮಾಣಿಕ್ಕಕಾವು ದೇವಸ್ಥಾನದ ಬಳಿಯಿರುವ ತಮ್ಮ ಮನೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ನೋಡುತ್ತಿದ್ದರು. ಪ್ರತಿದಿನವೂ ಸರತಿ ಸಾಲಿನಲ್ಲಿ ನೂರಾರು ರೋಗಿಗಳಿರುತ್ತಿದ್ದರು.
ಅವರ ಪತ್ನಿ ಡಾ. ಶಕುಂತಲಾ ಮತ್ತು ಸಹಾಯಕರೊಬ್ಬರು ಜನಸಂದಣಿಯನ್ನು ನಿರ್ವಹಿಸುವಲ್ಲಿ ಮತ್ತು ಔಷಧಿಗಳನ್ನು ವಿತರಿಸುವಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು.
ಇತ್ತೀಚೆಗೆ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದಾಗಿನಿಂದ, ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಜನರಿಗೆ ಸೇವೆ ಸಲ್ಲಿಸುವ ಬಗೆಗಿನ ಅವರ ಬದ್ಧತೆ ಎಂದಿಗೂ ಕುಗ್ಗಿರಲಿಲ್ಲ. ಇವರ ತಂದೆ, ಕಣ್ಣೂರಿನಲ್ಲಿ ಗೌರವಾನ್ವಿತ ವೈದ್ಯರಾಗಿದ್ದ ಡಾ. ಎ. ಗೋಪಾಲನ್ ನಂಬಿಯಾರ್ ಅವರು ತೋರಿಸಿಕೊಟ್ಟ ಜೀವನ ಮೌಲ್ಯಗಳನ್ನೇ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಅವರ ತಂದೆ ಹಣ ಸಂಪಾದಿಸುವ ಮನಸ್ಸಿದ್ದರೆ, ವೈದ್ಯಕೀಯ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿ ಎನ್ನುತ್ತಿದ್ದರು. ಹೀಗಾಗಿ ಅವರ ಆ ನಂಬಿಕೆ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಿಸಿತ್ತು.
ಪ್ರಸಿದ್ಧಿ ಪಡೆದ ಇವರನ್ನು ಒಲೈಸುವುದಕ್ಕೆ ಹಲವು ಫಾರ್ಮಾ ಕಂಪನಿಗಳು ಮುಂದಾಗಿದ್ದವು. ಆದರೆ ಅವೆಲ್ಲವನ್ನೂ ತಿರಸ್ಕರಿಸಿ ಗೋಪಾಲನ್ ಅವರು ತಾವು ನಂಬಿದ್ದ ಸಿದ್ದಾಂತಕ್ಕೆ ನಿಷ್ಠರಾಗಿದ್ದರು. ತಮ್ಮ ಸಹೋದರರಾದ ಡಾ. ವೇಣುಗೋಪಾಲ್ ಮತ್ತು ಡಾ. ರಾಜಗೋಪಾಲ್ ಅವರೊಂದಿಗೆ ಅವರು ಲಾಭವಿಲ್ಲದೆ ಕುಟುಂಬದ ವೈದ್ಯಕೀಯ ಸೇವೆಯ ಸಂಪ್ರದಾಯವನ್ನು ಮುಂದುವರೆಸಿದರು. ಇಂತಹ ಮಹಾನ್ ವ್ಯಕ್ತಿತ್ವದ ಡಾ ಗೋಪಾಲನ್ ಅವರ ನಿಧನ ಕಣ್ಣೂರು ಸೇರಿದಂತೆ ಸುತ್ತಮುತ್ತಲಿನ ಜನರಲ್ಲಿ ಬಹಳ ಬೇಸರ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ