ಭಾರತದ ಮೊದಲ 'ಕೋವಿಡ್ ವಾರಿಯರ್‌ ' ಕೇರಳದ ಉದಯನ್ ವಿ ಕೆ ಸೇವೆಯಿಂದ ನಿವೃತ್ತಿ

By Suvarna NewsFirst Published Jun 1, 2022, 4:19 PM IST
Highlights

First COVID Warrior Retires: ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ತ್ರಿಶೂರ್‌ನ ಜನರಲ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವಾಗ, ಉದಯನ್ ಇಂತಹ ಹಲವು ಅಪಾಯಕಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. 

ಕೇರಳ (ಜೂ. 01): ಕೋವಿಡ್‌ ಮಹಾಮಾರಿ (Covid 19) ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಯುದ್ಧ ಕಾಲಕ್ಕಿಂತಲೂ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಅನೇಕ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದವು. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ  ಕೋವಿಡ್‌ ವಾರಿಯರ್ಸ್‌  ತಮ್ಮ ಪ್ರಾನವನ್ನೇ ಪಣಕ್ಕಿಟ್ಟು ಜನರ ಸೇವೆ ಮಾಡಿದ್ದರು. ದೇಶದ ಮೊದಲ ಕೋವಿಡ್‌ ರೋಗಿಯನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಿದ್ದ ಕೋವಿಡ್‌ ವಾರಿಯರ್‌ ಈಗ ನಿವೃತ್ತಿಯಾಗಿದ್ದಾರೆ. 

ಜನವರಿ 30, 2020 ರಂದು ಭಾರತದ ಮೊದಲ ಕೋವಿಡ್-19 ರೋಗಿಯಾದ ವುಹಾನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿಯನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ಸಾಗಿಸುವಂತೆ ತ್ರಿಶೂರ್ ಜನರಲ್ ಆಸ್ಪತ್ರೆಯ ಆರ್‌ಎಂಒ (ನಿವಾಸಿ ವೈದ್ಯಕೀಯ ಅಧಿಕಾರಿ) ಉದಯನ್ ವಿ.ಕೆ. (Udhayan V K) ಅವರನ್ನು ಕೇಳಿಕೊಂಡಿದ್ದರು. ಈ ವೇಳೆ ಕೊರೋನಾ ತಗಲುವ ಆತಂಕವಿದ್ದರೂ ಯಾವುದೇ ಹಿಂಜರಿಕೆಯಿಲ್ಲದೇ  ಉದಯನ್ ವಿ.ಕೆ ತಮ್ಮ ಕರ್ತವ್ಯ ನಿರ್ವಹಿಸಿದ್ದರು. 

ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ತ್ರಿಶೂರ್‌ನ ಜನರಲ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವಾಗ, ಉದಯನ್ ಇಂತಹ ಹಲವು ಅಪಾಯಕಾರಿ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. 

ಇದನ್ನೂ ಓದಿ: ಕೊರೋನಾ ನಂತರ ಮೋದಿ ವಿಶ್ವಾಸಾರ್ಹತೆ ಭಾರಿ ಹೆಚ್ಚಳ: ಸಮೀಕ್ಷೆಯಲ್ಲಿ ಬಹಿರಂಗ!

“ಪರಿಸ್ಥಿತಿಯ ಗಂಭೀರತೆ ಮತ್ತು ಸೋಂಕಿನ ಅಪಾಯ ನನಗೆ ತಿಳಿದಿತ್ತು. ಆದರೆ ಅಂತಹ ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಚಾಲಕ ಎರಡು ಬಾರಿ ಯೋಚಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ಹೀಗಾಗಿ, ಕೋವಿಡ್ ಪಾಸಿಟಿವ್ ಹುಡುಗಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡವನ್ನು ಹೊರತುಪಡಿಸಿ ಉದಯನ್ ದೇಶದ ಮೊದಲ ಮುಂಚೂಣಿಯ ಕೋವಿಡ್ ವಾರಿಯರ್ ಎನಿಸಿಕೊಂಡರು. 

ಅಂದಿನಿಂದ, ಕಳೆದ ಎರಡು ವರ್ಷಗಳಲ್ಲಿ, ಉದಯನ್  ವಲಸಿಗರು, ವಲಸೆ ಕಾರ್ಮಿಕರು ಮತ್ತು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಸೇರಿದಂತೆ ಸಾವಿರಾರು ಕೋವಿಡ್‌ 19 ರೋಗಿಗಳನ್ನು ಸಾಗಿಸಿದ್ದಾರೆ. "ಆರಂಭದಲ್ಲಿ  ರೋಗಲಕ್ಷಣ ಹೊಂದಿದ್ದ 99% ಮಂದಿ ಕೋವಿಡ್ ಪಾಸಿಟಿವ್ ಆಗುತ್ತಿದ್ದರು" ಎಂದು ಅವರು ನೆನಪಿಸಿಕೊಂಡಿದ್ದಾರೆ. 

ಹಲವಾರು ಕೋವಿಡ್ ರೋಗಿಗಳನ್ನು ಸಾಗಿಸಿದ ನಂತರವೂ, ಉದಯನ್‌ ರವರಿಗೆ ಈವರೆಗೂ ಕೋವಿಡ್‌ ಪಾಸಿಟಿವ್‌ ಬಂದಿಲ್ಲ. “ನಾನು ಯಾವಾಗಲೂ ಹೆಚ್ಚಿನ ಕಾಳಜಿ ವಹಿಸಿದ್ದೇನೆ. ಪ್ರತಿ ಟ್ರಿಪ್ ನಂತರ, ನಾನು ನನ್ನ ಮತ್ತು ವಾಹನವನ್ನು ಸ್ವಚ್ಛಗೊಳಿಸುತ್ತಿದೆ. ನಾನು ಚಾಲಕುಡಿಯ ಮೇಲೂರು ಬಳಿಯ ಕೂವಕಟ್ಟುಕುನ್ನು ಎಂಬ ದೂರದ ಹಳ್ಳಿಯಲ್ಲಿ ತಂಗುತ್ತೇನೆ.  ಹಳ್ಳಿಗರು ಯಾವುದೇ ಕಾಳಜಿ ವಹಿಸದೇ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನು ಅವರನ್ನು ಅಪಾಯಕ್ಕೆ ತಳ್ಳಲು ಬಯಸುವುದಿಲ್ಲ. ” ಎಂದು ಅವರು ಹೇಳಿದ್ದಾರೆ. ಅಲ್ಲದೇ ಹೆಚ್ಚಿನ ಸುರಕ್ಷತೆಗಾಗಿ ಅವರು ತಮ್ಮ ಮನೆಗೆ ಸಂದರ್ಶಕರನ್ನು ಸಹ ಅನುಮತಿಸಿರಲಿಲ್ಲ ಎಂಬುದು ಉಲ್ಲೇಖನಿಯ. 

ಇದನ್ನೂ ಓದಿ: ಭಾರತದಲ್ಲಿ 4ನೇ ಕೋವಿಡ್ ಅಲೆ ಭೀತಿ, ಮತ್ತೆ ಮುಂಬೈನಿಂದಲೇ ಆರಂಭ?

17 ವರ್ಷಗಳ ಸೇವೆಯ ನಂತರ 56 ನೇ ವಯಸ್ಸಿನಲ್ಲಿ ಅವರು ಮಂಗಳವಾರ (ಮೇ 31) ನಿವೃತ್ತರಾಗುತ್ತಿದ್ದಂತೆ, ಅತ್ಯಂತ ಕಷ್ಟದ ಅವಧಿಯಲ್ಲಿ ಹೋರಾಡಿದ ಆರೋಗ್ಯ ತಂಡದ ಭಾಗವಾಗಿರುವುದಕ್ಕೆ ಉದಯನ್ ಹೆಮ್ಮೆಪಡುತ್ತಿದ್ದಾರೆ. "ಜನರು ನನ್ನ ಸೇವೆಯನ್ನು ಗುರುತಿಸಿದಾಗ ನನಗೆ ಸಂತೋಷವಾಗುತ್ತದೆ" ಎಂದು ಅವರು ಹೇಳುತ್ತಾರೆ. ಸ್ನಾತಕೋತ್ತರ ಪದವೀಧರರಾದ ಉದಯನ್ ನಿವೃತ್ತಿಯ ನಂತರ ಸ್ವಯಂಸೇವಕ ಸೇವೆಗಳಲ್ಲಿ ಸಕ್ರಿಯರಾಗಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

click me!