ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವಿನ ಸಂಭ್ರಮದಲ್ಲಿ ಪುರಸಭೆ ಕಟ್ಟದಲ್ಲಿ ಜೈ ಶ್ರೀರಾಮ್ ಹಾಗೂ ವಂದೇ ಮಾತರಾಂ ಬ್ಯಾನರ್ ಹಾಕಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಪಾಲಕ್ಕಾಡ್(ಡಿ.18): ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದರೂ ರಾಜಕೀಯ ಮೇಲಾಟಗಳು ಮುಗಿದಿಲ್ಲ. ಇದೀಗ ಬ್ಯಾನರ್ ವಿಚಾರದಲ್ಲಿ ಕೇರಳ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ. ಪುರಸಭೆಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಕಾರ್ಯಕರ್ತರು ಪಾಲಕ್ಕಾಡ್ ಪುರಸಭೆ ಕಟ್ಟದ ಮೇಲೆ ವಂದೆ ಮಾತರಾಂ ಹಾಗೂ ಜೈ ಶ್ರೀರಾಮ್ ಬ್ಯಾನರ್ ಹಾಕಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಕೇರಳ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪ್ರಗತಿ; ಜನತೆಗೆ ಧನ್ಯವಾದ ಹೇಳಿದ ಜೆಪಿ ನಡ್ಡಾ!.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆಲವಿನ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು ಪಾಲಕ್ಕಾಡ್ ಪುರಭೆ ಕಟ್ಟಡ ಮೇಲೆ ವಂದೇ ಮಾತರಾಂ ಹಾಗೂ ಜೈ ಶ್ರೀರಾಂ ಬ್ಯಾನರ್ ಹಾಕಿದ್ದಾರೆ. ಇದರ ಮೇಲೆ ಛತ್ರಪತಿ ಶಿವಾಜಿ ಚಿತ್ರದ ಬೃಹತ್ ಬ್ಯಾನರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬ್ಯಾನರ್ ಕೂಡ ಹಾಕಲಾಗಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ಕಟ್ಟದ ಮೇಲೆ ಸಂಭ್ರಮ ಆಚರಿಸಿದ್ದಾರೆ. ಬಿಜೆಪಿ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಬ್ಯಾನರ್ ಹಾಗೂ ವಿಜಯೋತ್ವದ ವಿರುದ್ಧ ಪುರಸಭೆ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕೋಮು ಸೌಹಾರ್ಧ ಹಾಳು ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಹಾಗೂ ಪಾಲಕ್ಕಾಡ್ನಲ್ಲಿ ಅಶಾಂತಿ ತರುವ ಪ್ರಯತ್ನಕ್ಕೆ ಅವಕಾಶ ನೀಡಬಾರದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರಿನ ಆಧರಿಸಿ ಪೊಲೀಸರು ಸಿಕ್ಕ ವಿಡಿಯೋ ಸಾಕ್ಷ್ಯ, ಫೋಟೋ ಸಾಕ್ಷ್ಯಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ. ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ನೀಡುವಂತೆ ಕೇರಳ ಪೊಲೀಸ್ ಉಪ ಮಹಾನಿರ್ದೇಶಕರು ಸೂಚಿಸಿದ್ದಾರೆ. ಇದೀಗ ಕೇರಳದಲ್ಲಿ ಬ್ಯಾನರ್ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ಹಾಗೂ ಆಡಳಿತಾರೂಡ LDF ನಡುವೆ ಸಮರಕ್ಕೆ ನಾಂದಿ ಹಾಡಿದೆ.