
ತಿರುಚಿರಾಪಳ್ಳಿ: ಸಾಮಾನ್ಯವಾಗಿ ಎರಡು ಚಕ್ರದ ಸೈಕಲ್ನಲ್ಲಿ ನೂರಾರು ಕಿಲೋಮೀಟರ್ ತುಳಿಯುವುದೇ ಕಷ್ಟದ ಕೆಲಸ. ಅಂಥದ್ದರಲ್ಲಿ ಕೇರಳದ ವ್ಯಕ್ತಿಯೊಬ್ಬರು ಮುಂಭಾಗದ ಚಕ್ರವೇ ಇಲ್ಲದ ಸೈಕಲ್ನಲ್ಲಿ (One-wheeled cycle) ಬರೋಬ್ಬರಿ 11,000 ಕಿಲೋಮೀಟರ್ ಪ್ರಯಾಣ ಬೆಳೆಸುತ್ತಿದ್ದಾರೆ! ಇದು ಕೇವಲ ಸಾಹಸಕ್ಕಾಗಿ ಅಲ್ಲ ಬದಲಾಗಿ ದೇಶದ ಯುವಜನತೆಗೆ ಒಂದು ಮಹತ್ವದ ಸಂದೇಶ ನೀಡಲು.
ಕೇರಳ ಮೂಲದ ಸನೀದ್ ಒಬ್ಬ ವೃತ್ತಿಪರ ಬೈಕ್ ಸ್ಟಂಟ್ ಕಲಾವಿದ. ಸಿವಿಲ್ ಇಂಜಿನಿಯರಿಂಗ್ ಮತ್ತು ಇಂಟೀರಿಯರ್ ಡಿಸೈನಿಂಗ್ ಓದಿರುವ ಇವರು, ಕಳೆದ 12 ವರ್ಷಗಳಿಂದ ಸ್ಟಂಟ್ ರಂಗದಲ್ಲಿದ್ದಾರೆ. ವಿಶೇಷವೆಂದರೆ ಇವರು ಭಾರತೀಯ ಸೇನೆಯ ಯೋಧರಿಗೂ ಪೆರೇಡ್ ಸ್ಟಂಟ್ಗಳ ಕುರಿತು ತರಬೇತಿ ನೀಡಿದ್ದಾರೆ. ಸನೀದ್ ಅವರು ಕೇರಳದಿಂದ ನೇಪಾಳದ 'ಎವರೆಸ್ಟ್ ಬೇಸ್ ಕ್ಯಾಂಪ್' ತಲುಪುವ ಗುರಿ ಹೊಂದಿದ್ದಾರೆ. ಈ ಸುದೀರ್ಘ ಪ್ರಯಾಣದ ಉದ್ದಕ್ಕೂ ಅವರು ನೀಡುತ್ತಿರುವ ಏಕೈಕ ಸಂದೇಶ "ಡ್ರಗ್ಸ್ಗೆ ಹೇಳಿ ವಿದಾಯ" (Say No to Drugs).
ಇಂದಿನ ಯುವಜನತೆ ಮಾದಕ ವ್ಯಸನದಂತಹ ದುರಭ್ಯಾಸಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರು ಮಾದಕ ವ್ಯಸನದ ಬದಲು ತಮ್ಮ ಇಷ್ಟದ ಸೃಜನಶೀಲ ಕೆಲಸಗಳಲ್ಲಿ ಅಥವಾ ಸಾಹಸಗಳಲ್ಲಿ ತೊಡಗಿಸಿಕೊಂಡರೆ ಅರ್ಥಪೂರ್ಣ ಜೀವನ ನಡೆಸಬಹುದು ಎಂಬುದನ್ನು ತೋರಿಸಿಕೊಡುವುದು ಸನೀದ್ ಅವರ ಉದ್ದೇಶ. ತಮ್ಮ ಸೈಕಲ್ನ ಮುಂಭಾಗದ ಚಕ್ರವನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಸನೀದ್ ಕೇವಲ ಹಿಂದಿನ ಚಕ್ರದ ಮೇಲೆ ಸಮತೋಲನ ಕಾಯ್ದುಕೊಳ್ಳುತ್ತಾ ಪೆಡಲ್ ತುಳಿಯುತ್ತಾರೆ. ಈಗಾಗಲೇ ಕೇರಳದಿಂದ ಕಾಶ್ಮೀರದವರೆಗೆ ಇಂತಹದ್ದೇ ಸೈಕಲ್ನಲ್ಲಿ ಪ್ರಯಾಣಿಸಿರುವ ಇವರು ಈ ಬಾರಿ ನೇಪಾಳದತ್ತ ಮುಖ ಮಾಡಿದ್ದಾರೆ.
ಸದ್ಯ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸಾಗುತ್ತಿರುವ ಸನೀದ್ ದಿನಕ್ಕೆ ಸರಾಸರಿ 50 ರಿಂದ 60 ಕಿ.ಮೀ ಕ್ರಮಿಸುತ್ತಾರೆ. ಒಂದೇ ಚಕ್ರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ವಿಶೇಷವಾಗಿ ಗಾಳಿ ಜೋರಾಗಿ ಬೀಸಿದಾಗ ಸೈಕಲ್ ನಿಯಂತ್ರಿಸುವುದು ದೊಡ್ಡ ಸವಾಲು ಎನ್ನುತ್ತಾರೆ ಸನೀದ್. ಇವರು ಅತಿ ಹೆಚ್ಚು ಎಂದರೆ ದಿನವೊಂದಕ್ಕೆ 150 ಕಿ.ಮೀ ವರೆಗೂ ಪ್ರಯಾಣಿಸಿದ್ದಾರೆ. ನನ್ನ ಈ ಪ್ರಯಾಣವನ್ನು ಕಂಡು ಕನಿಷ್ಠ ಒಬ್ಬ ಯುವಕನಾದರೂ ಮಾದಕ ವ್ಯಸನದಿಂದ ಹೊರಬಂದು ತನ್ನ ಜೀವನ ಬದಲಿಸಿಕೊಂಡರೆ ಅದೇ ನಾನು ಮಾಡುವ ನಿಜವಾದ ವಿಶ್ವದಾಖಲೆ ಎಂಬುದು ಸನೀದ್ ಅವರ ಹೃದಯಸ್ಪರ್ಶಿ ಮಾತು. ತಮ್ಮ ಸೈಕಲ್ ಮೇಲೆ 'ಕೇರಳ ಟು ನೇಪಾಳ' ಎಂಬ ಬೋರ್ಡ್ ಹಾಕಿಕೊಂಡು ಬೆನ್ನ ಮೇಲೆ ಬ್ಯಾಗ್ ಹೊತ್ತು ಸಾಗುತ್ತಿರುವ ಸನೀದ್ ಅವರ ಈ ಅದ್ಭುತ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
#WATCH | Tiruchirappalli: Kerala cyclist, Saneed, rides 11,000 km from Kerala to Nepal on a bicycle without a front wheel to spread the message - ‘Say No to Drugs’.
He says, “I completed a ride from Kerala to Kashmir without a front wheel, and now I am going from Kerala to… pic.twitter.com/95agDos8d3— ANI (@ANI) August 19, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ