
ಪಣಜಿ(ನ.01): ‘ಕರ್ನಾಟಕ ಜತೆಗಿನ ಮಹದಾಯಿ ವಿಚಾರದಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಘಟಕವು ಯಾವ ನಿರ್ಣಯ ಕೈಗೊಳ್ಳುತ್ತದೋ ಆ ನಿರ್ಣಯವನ್ನು ತಾವು ಬೆಂಬಲಿಸುವುದಾಗಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ’ ಎಂದು ಗೋವಾ ವಿಧಾನಸಭೆ ವಿಪಕ್ಷ ನಾಯಕ ಹಾಗೂ ದಿಗಂಬರ ಕಾಮತ್ ಶನಿವಾರ ಹೇಳಿದ್ದಾರೆ. ಸ್ಥಳೀಯ ಪ್ರುಡೆಂಟ್ ಮೀಡಿಯಾ ಎಂಬ ಸುದ್ದಿವಾಹಿನಿ, ಕಾಮತ್ ಅವರ ಈ ಹೇಳಿಕೆಯನ್ನು ಪ್ರಕಟಿಸಿದೆ.
"
ಮಹದಾಯಿ ಬಗ್ಗೆ ಗೋವಾದ ವಿರುದ್ಧ ಕರ್ನಾಟಕ ಕಾನೂನು ಹೋರಾಟದಲ್ಲಿ ನಿರತವಾಗಿದೆ. ಇಂಥ ಸಂದರ್ಭದಲ್ಲಿ ದಿನೇಶ್ ಅವರು ಈ ರೀತಿ ಹೇಳಿದ್ದಾರೆ ಎಂಬ ಕಾಮತ್ ಹೇಳಿಕೆ ಮಹತ್ವ ಪಡೆದಿದೆ. ಪಕ್ಷದ ಉಸ್ತುವಾರಿಯ ಹೊಣೆಗಿಂತ ರಾಜ್ಯದ ಪರ ಹೆಚ್ಚು ನಿಲುವು ವ್ಯಕ್ತಪಡಿಸಬೇಕಾಗಿದ್ದ, ದಿನೇಶ್ ಗುಂಡೂರಾವ್ ಅವರ ಈ ಅಭಿಪ್ರಾಯ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ಮಹದಾಯಿ ವಿಷಯದಲ್ಲಿ ದಿನೇಶ್ ಗುಂಡೂರಾವ್ ಅವರು ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರಾ ಎಂಬ ಪ್ರಶ್ನೆಗಳೂ ಎದ್ದಿವೆ.
ದಿನೇಶ್ ಗುಂಡೂರಾವ್ ಅವರನ್ನು ಕೆಲ ದಿನಗಳ ಹಿಂದಷ್ಟೇ ಗೋವಾ ಕಾಂಗ್ರೆಸ್ ಪ್ರಭಾರಿಯನ್ನಾಗಿ ನೇಮಿಸಲಾಗಿತ್ತು. ಈ ನಡುವೆ ಅಕ್ಟೋಬರ್ 24ರಂದು ಗೋವಾಗೆ ಆಗಮಿಸಿದ ವೇಳೆ ದಿನೇಶ್ ಅವರು ‘ಮಹದಾಯಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನವೇ ಅಂತಿಮ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕಿತ್ತು’ ಎಂದಿದ್ದರು. ಬಳಿಕ ಗೋವಾದಲ್ಲಿ, ‘ದಿನೇಶ್ ಗೋವಾ ಕಾಂಗ್ರೆಸ್ ಪ್ರಭಾರಿಯಾಗಿ ಗೋವಾವನ್ನು ಬೆಂಬಲಿಸಲಿಲ್ಲ’ ಎಂದು ಪ್ರತಿಭಟನೆಗಳು ಆರಂಭವಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ