ನರಭಕ್ಷಕ ತೋಳಗಳ ಭೀತಿ: 8 ಮಕ್ಕಳನ್ನು ಬಲಿ ಪಡೆದ ಕ್ರೂರ ಪ್ರಾಣಿಗಳು!

By Sathish Kumar KHFirst Published Aug 29, 2024, 4:30 PM IST
Highlights

ಉತ್ತರ ಪ್ರದೇಶದ ಬಹ್ಮಚ್ ಜಿಲ್ಲೆಯಲ್ಲಿ ನರಭಕ್ಷಕ ತೋಳಗಳ ಹಿಂಡು 8 ಮಕ್ಕಳನ್ನು ಕೊಂದು ತಿಂದಿರುವ ಭೀಕರ ಘಟನೆ ನಡೆದಿದೆ. ತೋಳಗಳು ಮಕ್ಕಳು ಮತ್ತು ಬಾಣಂತಿಯರು ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.

ಉತ್ತರ ಪ್ರದೇಶ (ಆ.29): ಹಗಲು ರಾತ್ರಿ ಎನ್ನದೇ ಗ್ರಾಮದೊಳಗೆ ನುಗ್ಗುವ ನರಭಕ್ಷಕ ತೋಳಗಳ ಹಿಂಡು ಮಕ್ಕಳು ಹಾಗೂ ಬಾಣಂತಿಯರು ಇರುವ ಮನೆಗಳಿಗೆ ನುಗ್ಗಿ ಬರೋಬ್ಬರಿ 8 ಮಕ್ಕಳನ್ನು ಕಚ್ಚಿಕೊಂಡು ಕಾಡಿನತ್ತ ಹೊತ್ತೊಯ್ದು ತಿಂದು ಹಾಕಿವೆ. ಜೊತೆಗೆ, ಒಬ್ಬ ಮಹಿಳೆಯ ಕತ್ತು ಸೀಳಿ ರಕ್ತ ಹೀರಿರುವ ಘಟನೆ ನಡೆದಿದೆ. 

ಭಾರತ-ನೇಪಾಳ ಗಡಿಭಾಗ ಉತ್ತರ ಪ್ರದೇಶ ರಾಜ್ಯದ ಮಹಾಸಿ ಉಪ ವಲಯದ ವ್ಯಾಪ್ತಿಯ ಬಹ್ಮಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ನರಭಕ್ಷಕ ತೋಳಗಳ ಹಿಂಡಿನ ದಾಳಿಯಿಂದಾಗಿ ಜನರು  ಮನೆಗಳನ್ನು ಭದ್ರತೆಯಿಂದ ಮುಚಚಿಕೊಂಡರೂ ನಿದ್ರೆಯಿಲ್ಲದೇ ಭಯದಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ. ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುವ ತೋಳಗಳ ಹಿಂಡು ಮನೆಗಳಲ್ಲಿ ಮಲಗಿದ್ದ ಮಕ್ಕಳನ್ನು ಹಿಡಿದು, ಕಾಡಿಗೆ ಎಳೆದೊಯ್ಯುತ್ತಿವೆ. ಈವರೆಗೆ ಒಟ್ಟು 8 ಮಕ್ಕಳ ಮೇಲೆ ತೋಳಗಳು ದಾಳಿ ನಡೆಸಿ ತಿಂದು ತೇಗಿವೆ. 

Latest Videos

ಭಾರತದ ಶ್ರೀಮಂತರ ಪಟ್ಟಿ; ಅಂಬಾನಿಗೆ ಕೈತಪ್ಪಿದ ಪಟ್ಟ, ಟಾಪ್ 10 ಲಿಸ್ಟ್‌ನಲ್ಲಿ 21 ವರ್ಷದ ಉದ್ಯಮಿ!

ಬಹ್ಮಚ್ ಜಿಲ್ಲೆಯ ಸುಮಾರು ಇಪ್ಪತ್ತಕ್ಕೂ ಅಧಿಕ ಗ್ರಾಮಗಳಿಗೆ ನರಭಕ್ಷಕ ತೋಳಗಳ ಹಿಂಡಿನ ಭೀತಿ ಎದುರಾಗಿದೆ. ಕಳೆದ 45 ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ 8 ಮಕ್ಕಳು ಮತ್ತು ಓರ್ವ ಮಹಿಳೆ ಒಟ್ಟು 9 ಜನರು ತೋಳಗಳ ದಾಳಿಗೆ ಬಲಿಯಾಗಿದ್ದಾರೆ. ಜೊತೆಗೆ, ಹಗಲು ರಾತ್ರಿ ಎನ್ನದೇ ದಾಳಿ ಮಾಡುತ್ತಿರುವ ತೋಳಗಳ ಹಿಂಡಿನಿಂದ 26 ಮಂದಿ ಗಾಯಗೊಂಡಿದ್ದಾರೆ. ಇನ್ನು ಇಲ್ಲಿನ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಸೇರಿದಂತೆ ಅರಣ್ಯ ಸಿಬ್ಬಂದಿ ಈ ಭಾಗದಲ್ಲಿ ಹಗಲು ರಾತ್ರಿ ಪಾಳಿಯಲ್ಲಿ ಎಲ್ಲ ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಆದರೆ, ಈವರೆಗೆ ಕೇವಲ 2 ತೋಳಗಳನ್ನು ಮಾತ್ರ ಸೆರೆ ಹಿಡಿಯಲಾಗಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಅವರು, ಬಹ್ಮಚ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಳೆದ 40 ದಿನಗಳಲ್ಲಿ 30ಕ್ಕೂ ಅಧಿಕ ತೋಳದ ಹಿಂಡಿನ ದಾಳಿ ನಡೆದಿದೆ. ಈ ತೋಳಗಳು ಮಕ್ಕಳಿರುವ ಮನೆಗಳು ಹಾಗೂ ಬಾಣಂತಿಯರು ವಾಸವಾಗಿರುವ ಮನೆಗಳ ವಾಸನೆಯನ್ನು ಪತ್ತೆಹಚ್ಚಿ ಅಂತಹ ಮನೆಳಿಗೆ ನುಗ್ಗುತ್ತಿವೆ. ಮನೆಯಲ್ಲಿ ಪಾಲಕರೊಂದಿಗೆ ಮಲಗಿದ್ದ ಮಕ್ಕಳ ಮೇಲೆ ದಾಳಿ ಮಾಡಿ ಅವರನ್ನು ಕಾಡಿನತ್ತ ಜನನಿಬಿಡ ಪ್ರದೇಶಗಳಿಗೆ ಎಳೆದುಕೊಂಡು ಹೋಗಿ ತಿನ್ನುತ್ತಿವೆ. ಹೀಗಾಗಿ, ಜನರು ಮತ್ತು ಮಕ್ಕಳು ಒಂಟಿಯಾಗಿ ರಾತ್ರಿ ವೇಳೆ ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಜೊತೆಗೆ, ತೋಳಗಳ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಆದರೆ, ಜನರ ಗಸ್ತು ಹೆಚ್ಚಾಗುತ್ತಿದ್ದಂತೆ ತೋಳಗಳು ತಮ್ಮ ದಾಳಿಯ ಮಾದರಿಯನ್ನೇ ಬದಲಿಸಿವೆ ಎಂದು ಹೇಳಿದ್ದಾರೆ.

ಪೆರೋಲ್ ಮೇಲೆ ಅಸಾರಾಂ ಬಾಪು ರಿಲೀಸ್: ಜೊತೆಗೆ ಬಂದ ಪೊಲೀಸರ ಮೇಲೆ ಗರಂ ಆದ ಬಾಬಾ

ಬಹ್ಮಚ್ ಜಿಲ್ಲೆಯಲ್ಲಿ ಜುಲೈ 17 ರಂದು ಮೊದಲ ದಾಳಿ ನಡೆದಿದ್ದು, ಈವರೆಗೂ ನಿರಂತರವಾಗಿ ಸುಮಾರು 30 ಹಳ್ಳಿಗಳಲ್ಲಿ ದಾಳಿಯನ್ನು ನಡೆಸುತ್ತಿವೆ. ಜನರು ಪ್ರತಿನಿತ್ಯ ಭಯದಲ್ಲಿಯೇ ಜೀವನ ಕಳೆಯುತ್ತುದ್ದಾರೆ. ಸಂಜೆ ಹೊತ್ತಾದರೆ ಸಾಕು ಮನೆಯಿಂದ ಹೊರಗೆ ಬರಲು ಜನರು ಹೆದರುತ್ತಿದ್ದಾರೆ. ಗ್ರಾಮದಲ್ಲಿ ಸುತ್ತಾಡುವಾಗ, ಎಲ್ಲಿಗೇ ಹೋದರೂ ಗುಂಪು ಗುಂಪಾಗಿ ಕೈಗಳಲ್ಲಿ ದೊಣ್ಣೆಗಳು ಹಾಗೂ ಹರಿತವಾದ ಆಯುಧಗಳನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಜೊತೆಗೆ, ತೋಳಗಳ ಭಯದಿಂದ ಜನರು ಯಾರೊಬ್ಬರೂ ಏಕಾಂಗಿಯಾಗಿ ವಾಸ ಮಾಡದೇ ಗುಂಪು ಗುಂಪಾಗಿ, ಭದ್ರತೆ ಇರುವ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ಬಾಣಂತಿಯರು ಹಾಗೂ ಚಿಕ್ಕ ಮಕ್ಕಳಿರುವ ಮನೆಗಳಿಗೆ ರಾತ್ರಿ ವೇಳೆ ಕಾವಲು ಕಾಯುತ್ತಿದ್ದಾರೆ.

click me!