
ಆಗಸ್ಟ್ 13ರ ಮಧ್ಯರಾತ್ರಿ, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಟಿಕ್ಕಾ ಪೋಸ್ಟ್ ಸಮೀಪ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಪ್ರಮುಖ ಒಳನುಸುಳುವಿಕೆ ಹಾಗೂ ಗಡಿ ಕ್ರಿಯಾ ತಂಡ (ಬಿಎಟಿ) ದಾಳಿಯನ್ನು ಭಾರತೀಯ ಸೇನಾ ಪಡೆಗಳು ತಡೆಯುವಲ್ಲಿ ಯಶಸ್ವಿಯಾದವು. ಈ ದುರ್ಘಟನೆ 16 ಸಿಖ್ ಲಿ (09 ಬಿಹಾರ ಅಡ್ವಾನ್ಸ್ ಪಾರ್ಟಿ) ಯ ಜವಾಬ್ದಾರಿಯ ಪ್ರದೇಶ (AOR) ಮತ್ತು ಉರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ದಾಳಿಯ ವೇಳೆ ಇಬ್ಬರು ಭಾರತೀಯ ಸೇನಾ ಯೋಧರು ಹೋರಾಡಿ ಹುತಾತ್ಮರಾಗಿದ್ದಾರೆ.
ಮಾಹಿತಿಯ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕರು ಬಿಎಟಿ ದಾಳಿ ನಡೆಸಲು ಯತ್ನಿಸಿದರು. ಆದರೆ ಈ ವೇಳೆ ಸೈನಿಕರು ತಕ್ಷಣ ಪ್ರತಿದಾಳಿ ನಡೆಸಿ, ಅವರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದರು. ತದನಂತರ, ಕತ್ತಲೆಯಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಹವಾಲ್ದಾರ್ ಅಂಕಿತ್ ಮತ್ತು ಸಿಪಾಯಿ ಬಾನೋತ್ ಅನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದರು.
ಘಟನೆಯ ಬಗ್ಗೆ ಸೇನೆಯು X ನಲ್ಲಿ ಪೋಸ್ಟ್ ಮಾಡಿದ್ದು, ಬಾರಾಮುಲ್ಲಾದಲ್ಲಿ ಕರ್ತವ್ಯದ ವೇಳೆ ಸಿಪಾಯಿ ಬಾನೋತ್ ಅನಿಲ್ ಕುಮಾರ್ ಅವರ ಶೌರ್ಯವನ್ನು ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಸ್ಮರಿಸಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಸಿಪಾಯಿ ಬಾನೋತ್ ಅನಿಲ್ ಕುಮಾರ್ ಅವರ ಅತ್ಯುನ್ನತ ತ್ಯಾಗಕ್ಕೆ ಸಿಒಎಎಸ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಭಾರತೀಯ ಸೇನೆಯ ಎಲ್ಲಾ ಶ್ರೇಣಿಗಳು ಗೌರವ ಸಲ್ಲಿಸುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ಸೇನೆ ಆಳವಾದ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.
ಈ ಘಟನೆ, ಆಗಸ್ಟ್ 1 ರಂದು ಪ್ರಾರಂಭವಾದ ಆಪರೇಷನ್ ಅಖಾಲ್ ಕಾರ್ಯಾಚರಣೆಯ ನಡುವೆಯೇ ನಡೆದಿದೆ. ದಕ್ಷಿಣ ಕಾಶ್ಮೀರದ ಅಖಾಲ್ ಪ್ರದೇಶದ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದವು. ಕಾರ್ಯಾಚರಣೆ ಒಂಬತ್ತನೇ ದಿನಕ್ಕೆ ಕಾಲಿಟ್ಟಾಗ, ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಹುತಾತ್ಮರಾದರು.
ಆಪರೇಷನ್ ಅಖಾಲ್ ವೇಳೆ, ಐದಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದವು. ಈ ಕಾರ್ಯಾಚರಣೆ, ಶ್ರೀನಗರದ ದಚಿಗಮ್ ಬಳಿ ನಡೆದ ಆಪರೇಷನ್ ಮಹಾದೇವ್ ಸಮಯದಲ್ಲಿ ಹತ್ಯಾಕಾಂಡಕ್ಕೆ ಕಾರಣರಾದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ತಟಸ್ಥಗೊಳಿಸಿದ ನಂತರ ಆರಂಭಿಸಲಾಯಿತು. ಆ ಬಳಿಕ ಜುಲೈ 29 ರಂದು ನಡೆದ ಆಪರೇಷನ್ ಶಿವಶಕ್ತಿಯಲ್ಲಿ ಸೇನೆ ಮತ್ತಿಬ್ಬರು ಉಗ್ರರನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ