ಗೂಳಿಗೆ ಗುದ್ದಿ ಮತ್ತೆ ನುಜ್ಜುಗುಜ್ಜಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು..!

By BK AshwinFirst Published Oct 29, 2022, 4:28 PM IST
Highlights

ವಂದೇ ಭಾರತ್ ಎಕ್ಸ್‌ಪ್ರೆಸ್‌ ಒಂದೇ ತಿಂಗಳಲ್ಲಿ 3 ಬಾರಿ ಜಾನುವಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಗುಜರಾತ್‌ನಲ್ಲೇ ನಡೆದಿದೆ. ಗೂಳಿಗೆ (Bull) ಗುದ್ದಿ ರೈಲಿನ ಮುಂಭಾಗ ನುಜ್ಜುಗುಜ್ಜಾಗಿರುವ ಘಟನೆ ಶನಿವಾರ ಬೆಳಗ್ಗೆ ವರದಿಯಾಗಿದೆ.

ಗುಜರಾತ್‌ನಲ್ಲಿ (Gujarat) ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು (Vande Bharat Express Train) ಗೂಳಿಗೆ (Bull) ಗುದ್ದಿ ರೈಲಿನ ಮುಂಭಾಗ ನುಜ್ಜುಗುಜ್ಜಾಗಿದೆ. ಅಲ್ಲಿನ ರಾಜಧಾನಿ ಗಾಂಧಿ ನಗರಕ್ಕೆ ಹೊರಟಿದ್ದ ರೈಲು ಅತುಲ್‌ ರೈಲ್ವೆ ಠಾಣೆಯ ಬಳಿ ಶನಿವಾರ ಬೆಳಗ್ಗೆ ಅಪಘಾತಕೀಡಾಗಿದ್ದು, ಅಕ್ಟೋಬರ್‌ ತಿಂಗಳಲ್ಲೇ ಈ ರೀತಿಯ 3ನೇ ಘಟನೆ ವರದಿಯಾಗಿದೆ. ಈ ಘಟನೆ ನಂತರ ರೈಲನ್ನು ಸುಮಾರು 15 ನಿಮಿಷಗಳ ಕಾಲ ತಡೆ ಹಿಡಿಯಲಾಗಿತ್ತು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಇನ್ನು, ಈ ಘಟನೆಯಲ್ಲಿ ರೈಲಿನ ಮುಂಭಾಗ ಡ್ಯಾಮೇಜ್‌ ಆಗಿದೆ. ಆದರೂ, ರೈಲಿನ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
 
ಮಹಾರಾಷ್ಟ್ರದ ಮುಂಬೈ ಸೆಂಟ್ರಲ್‌ನಿಂದ (Mumbai Central) ಗುಜರಾತ್‌ನ ಗಾಂಧಿನಗರಕ್ಕೆ (Gandhinagar) ಸೆಮಿ ಹೈಸ್ಪೀಡ್‌ ರೈಲು (Semi High Speed Train) ಶನಿವಾರ ಬೆಳಗ್ಗೆ ಸುಮಾರು 8: 17 ರಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದೆ. ರೈಲಿನ ಮುಂಭಾಗದ ಕೋಚ್‌ ಅಂದರೆ ಲೋಕೋಪೈಲಟ್‌ ಅಥವಾ ಡ್ರೈವರ್‌ ಕೋಚ್‌ನ ನೋಸ್‌ ಕೋನ್‌ ಕವರ್‌ ಹೊರತುಪಡಿಸಿ ರೈಲಿಗೆ ಯಾವುದೇ ಹಾನಿಯಾಗಿಲ್ಲ. ರೈಲು ಎಂದಿನಂತೆ ಪ್ರಯಾಣ ಮಾಡುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ. 

ಇದನ್ನು ಓದಿ: ಹಸುವಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ವಂದೇಭಾರತ್‌ ಎಕ್ಸ್‌ಪ್ರೆಸ್‌!
 

A cattle runover incident occurred with passing Vande Bharat train today near Atul in Mumbai Central division at 8.17 am. The train was on its journey from Mumbai Central to Gandhinagar. Following the incident, the train was detained for about 15 minutes: Indian Railways pic.twitter.com/b6UoP3XrVe

— ANI (@ANI)

ರೈಲಿನ ಯಾವುದೇ ಕಾರ್ಯಾಚರಣೆಗೆ ಹಾನಿಯಾಗಿಲ್ಲ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಸಹ ತಿಳಿಸಿದ್ದಾರೆ. "ಇದು (ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು) 20 ನಿಮಿಷಗಳಲ್ಲಿ ಮುಂದಿನ ಪ್ರಯಾಣವನ್ನು ಪುನಾರಾರಂಭಿಸಿತು. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ" ಎಂದೂ ಅವರು ಹೇಳಿದ್ದಾರೆ. ಇದೇ ತಿಂಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ನಡೆದ 3ನೇ ಘಟನೆ ಇದಾಗಿದೆ. 

ಈ ಹಿಂದೆ ಅಕ್ಟೋಬರ್‌ 6 ರಂದು ಎಮ್ಮೆಗಳ ಗುಂಪಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿತ್ತು. ಮುಂಬೈ - ಗಾಂಧಿನಗರ ಎಕ್ಸ್‌ಪ್ರೆಸ್‌ ರೈಲು ಅಹಮದಾಬಾದ್‌ ನಗರದ ಹೊರವಲಯದ ವಟ್ವಾ ರೈಲ್ವೆ ಸ್ಟೇಷನ್‌ ಬಳಿಯ ಪುನೀತ್‌ನಗರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿತ್ತು. ಈ ವೇಳೆ 4 ಎಮ್ಮೆಗಳು ಮೃತಪಟ್ಟಿದ್ದವು. ಹಾಗೂ, ರೈಲಿನ ಮುಂಭಾಗ ಡ್ಯಾಮೇಜ್‌ ಆಗಿತ್ತು. ಈ ಘಟನೆಯ ನಂತರ, ಗುಜರಾತ್‌ನ ರೈಲ್ವೆ ರಕ್ಷಣಾ ಪಡೆ ಎಮ್ಮೆಗಳ ಮಾಲೀಕರ ಮೇಲೆ ಕೇಸ್‌ ದಾಖಲಿಸಿದ್ದರು. 

ಇದನ್ನೂ ಓದಿ: ಒಂದೇ ದಿನದಲ್ಲಿ ವಂದೇ ಭಾರತ್‌ ರಿಪೇರಿ, ಎಮ್ಮೆಗಳ ಮಾಲೀಕರ ಮೇಲೆ ಎಫ್‌ಐಆರ್‌!
 
ಮರುದಿನವೇ, ಅಂದರೆ ಅಕ್ಟೋಬರ್‌ 7 ರಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಗುಜರಾತ್‌ನ ಖೇಡಾ ಜಿಲ್ಲೆಯ ಕಂಜಾರಿ ಬೋರಿಯಾವಿ ಸ್ಟೇಷನ್‌ನಲ್ಲಿ ಹಸುವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಶುಕ್ರವಾರ ನಡೆದಿದ್ದ ಈ ಘಟನೆಯಲ್ಲಿ ರೈಲಿಗೆ ಡಿಕ್ಕಿ ಹೊಡೆದ ಹಸು ಮೃತಪಟ್ಟಿದೆ, ಆದರೆ ರೈಲಿನಲ್ಲಿದ್ದವರಿಗೆ ಯಾರಿಗೂ ಹಾನಿಗಳಾಗಿಲ್ಲ, ಯಾರೂ ಮೃತಪಟ್ಟಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Vande Bharat Express: ನ.10ರಂದು ರಾಜ್ಯಕ್ಕೆ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌!

click me!