
ನವದೆಹಲಿ (ಮಾ.24): ದಿಲ್ಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ಆಪ್ ನೇತಾರ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದಲೇ ಶನಿವಾರ ಸಂದೇಶ ಕಳಿಸಿದ್ದಾರೆ. ‘ಬಿಜೆಪಿಗರನ್ನು ದ್ವೇಷಿಸಬೇಡಿ, ಅವರು ನಮ್ಮ ಸೋದರ, ಸೋದರಿಯರು’ ಎಂದು ತಮ್ಮ ಬೆಂಬಲಿಗರಿಗೆ ಅವರು ವಿಶಿಷ್ಟ ಶೈಲಿಯಲ್ಲಿ ಮನವಿ ಮಾಡಿದ್ದಾರೆ. ಕೇಜ್ರಿವಾಲ್ ನೀಡಿರುವ ಸಂದೇಶವನ್ನು ಅವರ ಪತ್ನಿ ಮತ್ತು ಮಾಜಿ ಐಆರ್ಎಸ್ ಅಧಿಕಾರಿ ಸುನಿತಾ ಕೇಜ್ರಿವಾಲ್ ಓದಿದ್ದಾರೆ.
‘ಆಪ್ ಕಾರ್ಯಕರ್ತರು ಸಮಾಜಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಮತ್ತು ಯಾರನ್ನೂ ದ್ವೇಷಿಸಬಾರದು. ಆಡಳಿತಾರೂಢ ಬಿಜೆಪಿಯವರೂ ಸಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೂ ನೀವು (ಬೆಂಬಲಿಗರು) ಸಮಾಜಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಿ. ಬಿಜೆಪಿ ಜನರನ್ನು ದ್ವೇಷಿಸಬೇಡಿ. ಅವರೆಲ್ಲರೂ ನಮ್ಮ ಸಹೋದರರು ಮತ್ತು ಸಹೋದರಿಯರು’ ಎಂದು ಕೇಜ್ರಿವಾಲ್ ಕೋರಿದ್ದಾರೆ.
‘ಭಾರತದ ಒಳಗೆ ಮತ್ತು ಹೊರಗೆ ಹಲವಾರು ಶಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನನ್ನನ್ನು ದೀರ್ಘಕಾಲ ಕಂಬಿಗಳ ಹಿಂದೆ ಇಡಲು ಯಾವುದೇ ಜೈಲು ಇಲ್ಲ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಗಳನ್ನು ಈಡೇರಿಸುತ್ತೇನೆ‘ ಎಂದು ಹೇಳಿದ್ದಾರೆ. ‘ನಾನು ಜನರಿಗೆ ನೀಡಿದ ಭರವಸೆ ಈಡೇರಿಸಿದ್ದೇನೆ. ಶೀಘ್ರ ದಿಲ್ಲಿಯ ಅರ್ಹ ಮಹಿಳಾ ಫಲಾನುಭವಿಗಳಿಗೆ ತಿಂಗಳಿಗೆ ₹ 1,000 ಗೌರವಧನವನ್ನು ಒದಗಿಸುವ ಯೋಜನೆ ಜಾರಿಯಾಗಲಿದೆ. ಮಹಿಳೆಯರು ದೇವಸ್ಥಾನಗಳಿಗೆ ಹೋಗಿ ನನ್ನ ಒಳಿತಿಗೆ ಪ್ರಾರ್ಥಿಸಬೇಕು’ ಎಂದು ಕೋರಿದ್ದಾರೆ.
ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಕಿಂಗ್ಪಿನ್: ಕೋರ್ಟ್ಗೆ ಇ.ಡಿ. ವರದಿ
‘ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನದ ಪ್ರತಿ ಕ್ಷಣವೂ ದೇಶ ಸೇವೆಗೆ ಮುಡಿಪಾಗಿದೆ. ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕಾಗಿ ಸಮರ್ಪಿತವಾಗಿದೆ’ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ