
ತೆಲಂಗಾಣ(ಅ.15): ತೆಲಂಗಾಣ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರು ಚಾಮರಾಜನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ, ಬೌದ್ಧ ಭಿಕ್ಕುವಾಗಿ ದೀಕ್ಷೆ ಪಡೆದಿದ್ದಾರೆ.
ತೆಲಂಗಾಣದ ಹೈದರಾಬಾದ್ ಮೂಲದ ಶಹನವಾಜ್ ಅಲಿ(40) ಬೌದ್ಧ ಬಿಕ್ಕುವಾಗಿ ದೀಕ್ಷೆ ಪಡೆದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ದಿನ ಅಂದರೆ ಅಕ್ಟೋಬರ್ 14ರಂದು ಶಹನವಾಜ್ರಿಗೆ ಪ್ರಸ್ತಾವಿತ ನಳಂದಾ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ ಸನ್ಯಾಸ ದೀಕ್ಷೆ ಬೋಧಿಸಿದ್ದಾರೆ. ಅಲ್ಲದೇ ಶಹನಾವಾಜ್ರನ್ನು ಬಂತೇ ಧಮ್ಮ ಕ್ರಾಂತಿ ಎಂದು ನಾಮಕರಣ ಮಾಡಲಾಗಿದೆ.
ಹೈದರಾಬಾದ್ನಲ್ಲಿ ಮೆಕ್ಯಾನಿಕ್ ಆಗಿದ್ದ ಶಹನವಾಜ್ ಗೌತಮ ಬುದ್ಧ ಹಾಗೂ ಡಾ. ಅಂಬೇಡ್ಕರ್ರವರ ತತ್ವ ಆದರ್ಶಗಳಿಂದ ಪ್ರಭಾವಿತರಾಗಿದ್ದರು, ಹೀಗಾಗಿ ಅವರಂತೆ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ದೀಕ್ಷೆ ಪಡೆದ ಬಳಿಕ ಮಾತನಾಡಿದ ಅವರು, ಕಳೆದ 10 ವರ್ಷದಿಂದ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದೆ. 5 ವರ್ಷದ ಹಿಂದೆ ನಾಗಪುರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ಸ್ಥಳಕ್ಕೆ ಭೇಟಿ ನೀಡಿದ್ದೆ, ಗೌತಮ ಬುದ್ಧ ಅವರ ಸಂದೇಶ ನನ್ನಲ್ಲಿ ಮನಃಪರಿವರ್ತನೆ ಮಾಡಿತು. 2015ರಿಂದ ನನ್ನಲ್ಲಿ ಏನೋ ಬದಲಾವಣೆಯಾಯಿತು. ನಾನು ಗಡ್ಡವನ್ನು ತೆಗೆದೆ. ಅಂದಿನಿಂದಲೇ ಧ್ಯಾನವನ್ನು ಅಭ್ಯಸಿಸುತ್ತಿದ್ದೇನೆ. ಪಂಚಶೀಲ ತತ್ವ ಹಾಗೂ ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದು ಬೌದ್ಧ ಧರ್ಮ ಸೇರಿದ್ದೇನೆ. ಎಲ್ಲ ಧರ್ಮಗಳ ಬಗ್ಗೆ ನನಗೆ ಗೌರವವಿದೆ. ಆದರೆ, ಬೌದ್ಧ ಧರ್ಮವನ್ನು ನಂಬುತ್ತೇನೆ. ನನ್ನ ನಿರ್ಧಾರವನ್ನು ಜನರು ವಿರೋಧ ಮಾಡಬಹುದು. ಆದರೆ ನಾನು ನನ್ನ ನಿರ್ಧಾರದಲ್ಲಿ ಅಚಲವಾಗಿದ್ದೇನೆ. ಸಂವಿಧಾನಕ್ಕಾಗಿ, ಸಮಾಜಕ್ಕಾಗಿ ಜೀವನದಲ್ಲಿ ಶಾಂತಿ ಬಯಸಿ ಭಿಕ್ಕುವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಪಂಚಶೀಲ ತತ್ವದಲ್ಲಿ ಜಗತ್ತು ನಿಂತಿದೆ ಎಂದಿರುವ ಧಮ್ಮ ಕ್ರಾಂತಿ, ಬೌದ್ಧ ಧರ್ಮ ಪಾಲಿಸುವ ನೆರೆ ಹೊರೆಯ ದೇಶಗಳೆಲ್ಲ ಅಭಿವೃದ್ಧಿ ಹೊಂದಿವೆ. ಆದರೆ, ಭಾರತ ಇನ್ನೂ ಅಭಿವೃದ್ಧಿಯಾಗಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಸಿದ್ಧಾಂತ ಆದರ್ಶಗಳನ್ನು ಪ್ರಚಾರ ಮಾಡಲು ಜೀವನ ಮುಡಿಪಾಗಿಡುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ