ಗೆದ್ದ ಮಾನವೀಯತೆ: ಕಾಶ್ಮೀರಿ ಪಂಡಿತ್ ಮಹಿಳೆಯ ಅಂತ್ಯಕ್ರಿಯೆಗೆ ಸಹಾಯ ಮಾಡಿದ ಮುಸ್ಲಿಂ ವ್ಯಕ್ತಿ!

By Suvarna NewsFirst Published Apr 27, 2022, 1:10 PM IST
Highlights

* ದೇಶದಲ್ಲಿ ಚರ್ಚೆಯಾಗುತ್ತಿರುವ ಹಿಂದೂ ಮುಸ್ಲಿಂ ಕೋಮುಗಲಭೆ

* ಕೋಮು ಗಲಭೆಯ ಮಧ್ಯೆ ವರದಿಯಾಯ್ತು ಸೌಹಾರ್ದತೆಯ ಸುದ್ದಿ

* ಕಾಶ್ಮೀರಿ ಪಂಡಿತ್ ಮಹಿಳೆಯ ಅಂತ್ಯಕ್ರಿಯೆಗೆ ಸಹಾಯ ಮಾಡಿದ ಮುಸ್ಲಿಂ ವ್ಯಕ್ತಿ

ಶ್ರೀನಗರ(ಏ.27): ಇತ್ತೀಚೆಗೆ ದೇಶದಲ್ಲಿ ಧರ್ಮಾಧರಿತ ವಿಚಾರಗಳು  ಭಾರೀ ಸದ್ದು ಮಾಡುತ್ತಿವೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಘರ್ಷಣೆಗಳು ಮತ್ತು ಚರ್ಚೆಗಳು ಮಾಡುತ್ತಿರುವ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯ ಸುಂದರ ಚಿತ್ರಣವು ಮುನ್ನೆಲೆಗೆ ಬಂದಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಲೋಲಾಬ್ ಕಣಿವೆಯಲ್ಲಿ ಸೋಮವಾರ 70 ವರ್ಷದ ಪಂಡಿತ್ ಮಹಿಳೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಲು ಕೆಲವು ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ.

ಗಡಿ ಪಟ್ಟಣವಾದ ಲೋಲಾಬ್‌ನ ಲಾಲ್‌ಪುರಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾಶ್ಮೀರಿ ಪಂಡಿತ್ ಮಹಿಳೆ ರೀಟಾ ಕುಮಾರಿ ಕೆಲವು ವಯೋಸಹಜ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಆಕೆಯ ಸಾವಿನ ಸುದ್ದಿ ಹರಡುತ್ತಿದ್ದಂತೆ, ಆ ಪ್ರದೇಶದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ ಜನರು ಆಕೆಯ ಮೃತದೇಹ ಇದ್ದ ಸ್ಥಳಕ್ಕೆ ತಲುಪಿದ್ದಾರೆ ಮತ್ತು ಪಂಡಿತ್ ಕುಟುಂಬದೊಂದಿಗೆ ಸೇರಿ ಅವರ ಅಂತಿಮ ವಿಧಿಗಳನ್ನು ನಡೆಸಿದರು.

ಹೆಚ್ಚಿನ ಸಂಖ್ಯೆಯ ಸ್ಥಳೀಯ ಮುಸ್ಲಿಮರು ಆ ಮಹಿಳೆಯ ಚಿತಾಭಸ್ಮವನ್ನು ಸ್ಮಶಾನಕ್ಕೆ ಕೊಂಡೊಯ್ದರು ಮತ್ತು ಹಿಂದೂ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಯಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಿದರು. ರೀಟಾ ಅವರ ಕುಟುಂಬವು ಈ ಪ್ರದೇಶದಲ್ಲಿ ವಾಸಿಸುವ ಏಕೈಕ ಹಿಂದೂ ಕುಟುಂಬವಾಗಿದೆ. ಅವರು 1990 ರಿಂದ ಲಾಲ್ಪುರಾ ಪ್ರದೇಶದಲ್ಲಿ ನೆಲೆಸಿದ್ದರು. 1990 ರಲ್ಲಿ ಉಗ್ರಗಾಮಿತ್ವದ ಪ್ರಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಕಾಶ್ಮೀರಿ ಪಂಡಿತರು ಕಣಿವೆಯಿಂದ ಓಡಿಹೋದಾಗ, ಅವರು ವಲಸೆ ಹೋಗದಿರಲು ನಿರ್ಧರಿಸಿದರು ಮತ್ತು ಬದಲಿಗೆ ಅಲ್ಲಿ ಮುಸ್ಲಿಂ ಸಮುದಾಯದೊಂದಿಗೆ ವಾಸಿಸಲು ಆದ್ಯತೆ ನೀಡಿದರು.

“ನಾವು ಕಾಶ್ಮೀರಿ ಹಿಂದೂಗಳ ಪ್ರತಿಯೊಂದು ದುಃಖದಲ್ಲಿ ಭಾಗಿಯಾಗಿದ್ದ ದಿನಗಳನ್ನು ನಾವು ಮರೆತಿಲ್ಲ. ಕಾಶ್ಮೀರ ಪಂಡಿತರು ಆಚರಿಸುವ ಎಲ್ಲಾ ಹಬ್ಬಗಳಲ್ಲಿ ಮುಸ್ಲಿಮರು ಯಾವಾಗಲೂ ಭಾಗವಹಿಸಲು ಉತ್ಸುಕರಾಗಿದ್ದರು. ಕಾಶ್ಮೀರಿ ಪಂಡಿತರು ಸಹ ಇಲ್ಲಿ ಮುಸ್ಲಿಮರ ಹಬ್ಬ ಮತ್ತು ಪ್ರಮುಖ ದಿನಗಳಲ್ಲಿ ಭಾಗವಹಿಸಿದ್ದರು. ಹಿಂದೂ-ಮುಸ್ಲಿಮರ ಭಾತೃತ್ವ ಎಲ್ಲ ಕಾಲದಲ್ಲೂ ಕಾಣುತ್ತಿತ್ತು. ಇಲ್ಲಿನ ಮುಸ್ಲಿಮರು ಕಾಶ್ಮೀರಿ ಪಂಡಿತರ ವಾಪಸಾತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

click me!