
ನವದೆಹಲಿ: ವಿಪಕ್ಷಗಳು ನಿಮ್ಮನ್ನು ಪ್ರಚೋದಿಸುತ್ತಿರುತ್ತವೆ. ಆದರೆ ಇದಕ್ಕೆ ಸೊಪ್ಪು ಹಾಕದೇ ತಾಳ್ಮೆಯಿಂದ ಇರಿ. ನಿಮ್ಮ ಭಾಷಣಗಳ ಮೇಲೆ ಹಿಡಿತ ಇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎನ್ಡಿಎ ಸಂಸದರಿಗೆ ಸೂಚನೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಸಿದ್ಧತೆಗಾಗಿ ಹಲವು ವಿಜಯ ಮಂತ್ರಗಳನ್ನು ಪ್ರಧಾನಿ ಸೂಚಿಸಿದ್ದಾರೆ.
ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 45 ಮಂದಿ ಎನ್ಡಿಎ ಸಂಸದರ ಜೊತೆ ಸಭೆ ನಡೆಸಿದ ಮೋದಿ, ಜನರಿಗಾಗಿ ಕೆಲಸ ಮಾಡಿ ಎಂದರು ಮತ್ತು ಉಚಿತ ಕೊಡುಗೆಗಳನ್ನು ಪ್ರಚಾರ ಮಾಡುತ್ತಿರುವ ವಿಪಕ್ಷಗಳ ನಡೆಯನ್ನು ವಿರೋಧಿಸಿದರು ಎಂದು ಮೂಲಗಳು ಹೇಳಿವೆ. ವಿಪಕ್ಷಗಳು ನಿಮ್ಮನ್ನು ಪ್ರಚೋದಿಸುತ್ತಿರುತ್ತವೆ. ಆದರೆ ನೀವು ನಿಮ್ಮ ಭಾಷಣಗಳ ಮೇಲೆ ಹಿಡಿತ ಇಟ್ಟುಕೊಳ್ಳಿ. ಹೀಗಾದಾಗ ಯಾವುದೇ ವಿವಾದಗಳು ಉಂಟಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಲ್ಲದೇ ಹೊಸದಾಗಿ ರಚನೆಯಾಗಿರುವ ವಿಪಕ್ಷದ ಮೈತ್ರಿಕೂಟವನ್ನು ಎದುರಿಸಲು ತಂತ್ರಗಳನ್ನು ರೂಪಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರಿ. ಅಗತ್ಯ ಬಿದ್ದರೆ ಕಾಲ್ ಸೆಂಟರ್ಗಳನ್ನು ತೆರೆಯಿರಿ. ಎಲ್ಲವೂ ಸರಿಯಿದೆ ಎಂದು ಯೋಚಿಸುವ ಮೂಲಕ ಎಲ್ಲವೂ ಸರಿಯಾಗುವುದಿಲ್ಲ. ಸಂಸದರು ಜನರ ಜೊತೆಗೆ ಇದ್ದು ಕೆಲಸ ಮಾಡಬೇಕು. ಅವರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ಮೋದಿ ಹೇಳಿದ್ದಾರೆ ಎಂದು ಅವು ತಿಳಿಸಿವೆ.
ಸಂಸತ್ ಕಲಾಪ ಬಿಕ್ಕಟ್ಟು ಅಂತ್ಯಕ್ಕೆ ವಿಪಕ್ಷ ಸಂಧಾನ ಸೂತ್ರ
ಅಲ್ಲದೆ, ಇನ್ನೂ ಪೂರ್ಣಗೊಳ್ಳದ ಹೊಸ ಯೋಜನೆಗಳ ಬಗ್ಗೆ ಹೆಚ್ಚು ಮಹತ್ವ ನೀಡಬೇಡಿ. ಸರ್ಕಾರ ಮುಗಿಸಿರುವ ಕೆಲಸಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿ. ಆಗ ಸರ್ಕಾರದ ಮೇಲೆ ಜನರ ವಿಶ್ವಾಸ ಹೆಚ್ಚುತ್ತದೆ ಎಂದರು ಎಂದು ಗೊತ್ತಾಗಿದೆ. 430 ಎನ್ಡಿಎ ಸಂಸದರನ್ನು 11 ಗುಂಪುಗಳಾಗಿ ವಿಂಗಡಿಸಿ ಪ್ರಧಾನಿ ಮೋದಿ ಜೊತೆಗೆ ಸಭೆ ನಡೆಸಲಾಗುತ್ತಿದೆ. ಜು.31ರಂದು ಆರಂಭವಾಗಿರುವ ಈ ಸಭೆಗಳು ಆ.10ರಂದು ಮುಕ್ತಾಯವಾಗಲಿದೆ.
ಸಂಸತ್ತಿನೊಳಗೆ ಉಡುಪಿ ಅಡುಗೆ ಘಮ: ಸುಬ್ರಹ್ಮಣ್ಯರ ಕೈರುಚಿಗೆ ಪ್ರಧಾನಿ ಮೋದಿ ಫಿದಾ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ