ಕರ್ನಾಟಕ ಬಳಿಕ ಈಗ ಯುಪಿಯಲ್ಲಿ ಹಿಜಾಬ್‌ ಗಲಾಟೆ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ..!

By BK AshwinFirst Published Jan 19, 2023, 12:34 PM IST
Highlights

ಕಾಲೇಜು ಪ್ರಾಧ್ಯಾಪಕ ಡಾ. ಎ.ಪಿ.ಸಿಂಗ್ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಾಗಿದೆ ಮತ್ತು ಅದನ್ನು ಅನುಸರಿಸಲು ನಿರಾಕರಿಸುವ ಎಲ್ಲರಿಗೂ ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು.

ಮೊರಾದಾಬಾದ್ (ಜನವರಿ 19, 2023): ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಹಿಂದೂ ಕಾಲೇಜಿನ ಕೆಲವು ವಿದ್ಯಾರ್ನಿಯರಗೆ ಬುರ್ಖಾ ಧರಿಸಿದ್ದಕ್ಕಾಗಿ ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿದೆ. ನಿಗದಿತ ಸಮವಸ್ತ್ರ ಕೋಡ್ ಇದ್ದರೂ ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸಲು ಬಿಡುತ್ತಿಲ್ಲ ಮತ್ತು ಪ್ರವೇಶ ದ್ವಾರದಲ್ಲಿ ಹಿಜಾಬ್‌, ಬುರ್ಖಾ ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇನ್ನು, ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳು, ಸಮಾಜವಾದಿ ಛಾತ್ರ ಸಭಾ ಕಾರ್ಯಕರ್ತರು ಮತ್ತು ಕಾಲೇಜು ಪ್ರಾಧ್ಯಾಪಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‌ನಲ್ಲಿರುವ (Moradabad) ಹಿಂದೂ ಕಾಲೇಜಿನ (Hindu College) ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ (Viral Video). ಈ ಮಧ್ಯೆ, ಕಾಲೇಜು ಪ್ರಾಧ್ಯಾಪಕ ಡಾ. ಎ.ಪಿ.ಸಿಂಗ್ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ (Dress Code) ಅನ್ನು ಜಾರಿಗೆ ತರಲಾಗಿದೆ ಮತ್ತು ಅದನ್ನು ಅನುಸರಿಸಲು ನಿರಾಕರಿಸುವ ಎಲ್ಲರಿಗೂ ಕಾಲೇಜು ಕ್ಯಾಂಪಸ್‌ಗೆ (College Campus) ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು. ಈ ಹಿನ್ನೆಲೆ ಕಾಲೇಜಿಗೆ ಡ್ರೆಸ್ ಕೋಡ್‌ನಲ್ಲಿ ಬುರ್ಖಾವನ್ನು ಸೇರಿಸಲು ಮತ್ತು ವಿದ್ಯಾರ್ಥಿನಿಯರು ತಮ್ಮ ತರಗತಿಗಳಿಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಸಮಾಜವಾದಿ ಛಾತ್ರ ಸಭಾದ ಸದಸ್ಯರು ಮನವಿ ಸಲ್ಲಿಸಿದರು.

ಇದನ್ನು ಓದಿ: Vijayapura: ಹಿಜಾಬ್ ಧರಿಸಿಯೇ ಯೋಗ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು

ಈ ಹಿಂದೆ ಜನವರಿ 2022 ರಲ್ಲಿ, ಬೃಹತ್ ಹಿಜಾಬ್ ಪ್ರತಿಭಟನೆಗಳು ಭುಗಿಲೆದ್ದಾಗ ಕರ್ನಾಟಕದಲ್ಲಿ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ರಾಜ್ಯದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದರು.  ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸಿರುವುದಾಗಿ ಪ್ರತಿಭಟನೆಯ ಸಂದರ್ಭದಲ್ಲಿ, ಕೆಲವು ವಿದ್ಯಾರ್ನಿಯರು ಹೇಳಿದ್ದರು.

ಈ ಘಟನೆಯ ನಂತರ, ಹಿಜಾಬ್‌ ವಿರೋದಿಸಿ ವಿಜಯಪುರದ ಶಾಂತೇಶ್ವರ ಶಿಕ್ಷಣ ಟ್ರಸ್ಟ್‌ಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ವಸ್ತ್ರ ಧರಿಸಿ ಆಗಮಿಸಿದ್ದರು. ಉಡುಪಿ ಜಿಲ್ಲೆಯ ಹಲವು ಕಾಲೇಜುಗಳಲ್ಲೂ ಇದೇ ಸ್ಥಿತಿ ಇತ್ತು. ಬಳಿಕ, ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರವೇ ವಿದ್ಯಾರ್ಥಿಗಳು ಧರಿಸಬಹುದಾಗಿದ್ದು, ಇತರೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಪಿಯು ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು. ನಂತರ ಈ ವಿಚಾರ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವುದನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ವಜಾಗೊಳಿಸಿತು ಮತ್ತು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್‌ ಹೇಳಿತ್ತು. 

ಇದನ್ನೂ ಓದಿ: ಇನ್ಮುಂದೆ ಬ್ರಿಟಿಷ್‌ ಏರ್‌ವೇಸ್‌ ಗಗನಸಖಿಯರಿಗೆ ಸಮವಸ್ತ್ರವಾಗಿ ಹಿಜಾಬ್‌ ಬಳಕೆ..!

ಆದರೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋದಾಗ ಅಕ್ಟೋಬರ್ 13, 2022 ರಂದು ಸುಪ್ರೀಂಕೋರ್ಟ್‌ ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ವಿಭಜಿತ ತೀರ್ಪು ಪ್ರಕಟಿಸಿತ್ತು. ಇದರಿಂದ ಕರ್ನಾಟಕ ಸರ್ಕಾರದ ಹಿಜಾಬ್‌ ನಿಷೇಧ ಜಾರಿಯಲ್ಲಿದೆ. ಈ ಪ್ರಕರಣದಲ್ಲಿ 10 ದಿನಗಳ ಕಾಲ ವಾದಗಳು ನಡೆದಿದ್ದು, ಅರ್ಜಿದಾರರ ಪರ 21 ವಕೀಲರು ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಪ್ರತಿವಾದಿಗಳ ಪರ ವಾದ ಮಂಡಿಸಿದ್ದರು.

ಇದನ್ನು ಓದಿ: ಮಂಗಳೂರಲ್ಲಿ ಬುರ್ಖಾ ಧರಿಸಿ ಅಸಭ್ಯ ನೃತ್ಯ: 4 ವಿದ್ಯಾರ್ಥಿಗಳ ಸಸ್ಪೆಂಡ್‌

click me!