ಹೊಸ ವರ್ಷಾಚರಣೆ ವೇಳೆ ಕೊರೋನಾ ನಿಯಮಗಳ ಕಡೆಗಣಿಸಬೇಡಿ: ಕೇಂದ್ರದಿಂದ ರಾಜ್ಯಗಳಿಗೆ ಪತ್ರ

By Suvarna NewsFirst Published Dec 30, 2020, 3:25 PM IST
Highlights

ಹೊಸ ವರ್ಷಾಚರಣೆ ವೇಳೆ ಕಟ್ಟುನಿಟ್ಟಿನ ಕ್ರಮ| ಕೇಂದ್ರದಿಂದ ರಾಜ್ಯಗಳಿಗೆ ಪತ್ರ| ಕೊರೋನಾ ನಿಯಮಗಳ ಕಡೆಗಣಿಸಬೇಡಿ ಎಂದ ಕೇಂದ್ರ

ನವದೆಹಲಿ(ಡಿ.30): ಹೊಸ ವರ್ಷಾಚರಣೆ ವೇಳೆ ಮಾಸ್ಕ್ ತಪ್ಪದೇ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮೊದಲಾದ ನಿಯಮಗಳನ್ನು ತಪ್ಪದೇ ಪಾಲಿಸಿ. ಇಲ್ಲವಾದಲ್ಲಿ ನೀವು ಕಾನೂನಾತ್ಮಕ ವಿಚಾರಣೆ ಎದುರಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತಾಗಿ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಹೊಸ ವರ್ಷ ಸ್ವಾಗತಿಸುವ ಸಂದರ್ಭದಲ್ಲಿ ಸೂಪರ್‌ ಸ್ಪ್ರೆಡರ್ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆಯಾದ ಬೆನ್ನಲ್ಲೇ ವಿಶ್ವಾದ್ಯಂತ ಆತಂಕ ಮನೆ ಮಾಡಿದೆ. ಹೊಸ ವರ್ಷ ಆಚರಣೆ ವೇಳೆ ಇದಕ್ಕೆ ತಡೆಯೊಡ್ಡಲು ನಿರ್ಬಂಧ ಹೇರಲಾಗುತ್ತಿದೆ. ಭಾರತ ಸೇರಿ ಅನೇಕ ರಾಷ್ಟ್ರಗಳು ಬ್ರಿಟನ್‌ಗೆ ತೆರಳುವ ವಿಮಾನಗಳನ್ನು ಹಾಗೂ ಹಡಗುಗಳನ್ನು ರದ್ದುಗೊಳಿಸಿವೆ.

ದೇಶದ ಮೂಲೆ ಮೂಲೆಡಗಳಲ್ಲೂ ಹೊ ಸವರ್ಷಾಚರಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಡಿಸೆಂಬರ್ 22 ರಿಂದ ಜನವರಿ 5ರವರೆಗೆ ಏಳು ತಾಸಿನ ನೈಟ್ ಕರ್ಫ್ಯೂ ಹೇರಿದೆ. ಅಲ್ಲದೇ ಮಹಾರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ.

ಇತ್ತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಅಂದು ನೈಟ್ ಕರ್ಫ್ಯೂ ಕೂಡಾ ಹೇರುವುದರೊಂದಿಗೆ, ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.   

click me!