
ನವದೆಹಲಿ (ಮಾ.13): ಇಂಟರ್ನೆಟ್ನಲ್ಲಿರುವ ಅಶ್ಲೀಲ ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ಆಮ್ ಆದ್ಮಿ ಪಕ್ಷದ (AAP) ಸಂಸದ ಹರ್ಭಜನ್ ಸಿಂಗ್ ಒತ್ತಾಯಿಸಿದ್ದಾರೆ. ಗುರುವಾರ ರಾಜ್ಯಸಭೆಯಲ್ಲಿ ನಡೆದ ಬಜೆಟ್ ಚರ್ಚೆಯ ವೇಳೆ ಅವರು ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಅಶ್ಲೀಲ ವೆಬ್ಸೈಟ್ಗಳನ್ನು (Porn sites) ಸಂಪೂರ್ಣವಾಗಿ ನಿರ್ಬಂಧಿಸಲು ಮತ್ತು ಆನ್ಲೈನ್ನಲ್ಲಿರುವ ಹಾನಿಕಾರಕ ವಿಷಯಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕಟ್ಟುನಿಟ್ಟಾದ ಕಾನೂನುಗಳನ್ನು ತರಬೇಕು ಎಂದು ಹರ್ಭಜನ್ ಆಗ್ರಹಿಸಿದರು.
16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸಲು ಅನುಮತಿಸಬಾರದು. ಇದಕ್ಕಾಗಿ ಇಂಟರ್ನೆಟ್ ಪ್ಲಾಟ್ಫಾರ್ಮ್ಗಳಲ್ಲಿ ನಿಖರವಾದ ವಯಸ್ಸು ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇನ್ಸ್ಟಾಗ್ರಾಮ್ನಂತಹ ಪ್ಲಾಟ್ಫಾರ್ಮ್ಗಳಿಗೆ ಮಕ್ಕಳು ದಾಸರಾಗುತ್ತಿದ್ದಾರೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ನಮ್ಮ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಇಂದು ಅನೇಕ ಮಕ್ಕಳು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ವ್ಯಸನಿಯಾಗುತ್ತಿದ್ದಾರೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಅಥವಾ ಅರೆ-ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಆತಂಕ ಮತ್ತು ಖಿನ್ನತೆಯನ್ನು ಹೆಚ್ಚಿಸುತ್ತಿದೆ ಮತ್ತು ಅವರ ಮನಸ್ಥಿತಿಯನ್ನು ಅನಾರೋಗ್ಯಕರ ರೀತಿಯಲ್ಲಿ ರೂಪಿಸುತ್ತಿದೆ.
ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ. ಭಾರತ ಸರ್ಕಾರವು ಅಶ್ಲೀಲ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಮತ್ತು ಆನ್ಲೈನ್ನಲ್ಲಿ ಹಾನಿಕಾರಕ ವಿಷಯವನ್ನು ನಿಯಂತ್ರಿಸಲು ಬಲವಾದ ಕಾನೂನುಗಳನ್ನು ಜಾರಿಗೊಳಿಸಬೇಕು. 16 ವರ್ಷಕ್ಕಿಂತ ಮೊದಲು ಮಕ್ಕಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನುಮತಿಸಬಾರದು ಮತ್ತು ಬಲವಾದ ವಯಸ್ಸಿನ ಪರಿಶೀಲನಾ ವ್ಯವಸ್ಥೆಗಳನ್ನು ಜಾರಿಗೆ ತರಬೇಕು. ನಮ್ಮ ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ವಾತಾವರಣವನ್ನು ಒತ್ತಾಯಿಸಲು ಪೋಷಕರು ಮತ್ತು ನಾಗರಿಕರಾಗಿ ಒಟ್ಟಾಗಿ ಬರೋಣ. ಅವರ ಮುಗ್ಧತೆಯನ್ನು ರಕ್ಷಿಸಿ, ಅವರ ಮಾನಸಿಕ ಆರೋಗ್ಯವನ್ನು ರಕ್ಷಿಸಿ ಮತ್ತು ಭಾರತದ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಮಕ್ಕಳ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಯಂತ್ರಿಸಲು ಈಗಾಗಲೇ ಹಲವು ರಾಜ್ಯಗಳು ಚಿಂತನೆ ನಡೆಸಿವೆ. ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸಲಾಗಿದೆ. ಆ ಮೂಲಕ ಈ ನಿಯಮ ರೂಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಂಧ್ರಪ್ರದೇಶದಲ್ಲಿ 13 ವರ್ಷದೊಳಗಿನವರಿಗೆ ನಿಷೇಧ ಹೇರಲು ಮತ್ತು ಅದನ್ನು 16 ವರ್ಷದವರೆಗೆ ವಿಸ್ತರಿಸಲು ಸರ್ಕಾರ ಚಿಂತಿಸುತ್ತಿದೆ. ಪಂಜಾಬ್ನಲ್ಲಿ ಮಕ್ಕಳಿಗಾಗಿ ವಿಶೇಷ ಸೋಶಿಯಲ್ ಮೀಡಿಯಾ ನಿಯಮಗಳನ್ನು ರೂಪಿಸುವ ಕುರಿತು ಕೇಂದ್ರದೊಂದಿಗೆ ಚರ್ಚಿಸಲಾಗುವುದು ಎಂದು ಪಂಜಾಬ್ ಐಟಿ ಸಚಿವ ಅಮನ್ ಅರೋರಾ ತಿಳಿಸಿದ್ದಾರೆ. ಹರ್ಭಜನ್ ಸಿಂಗ್ ಅವರ ಈ ಭಾಷಣ ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ