ಎಚ್‌ಎಎಲ್‌ ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಿದ ರಾಜನಾಥ್‌ ಸಿಂಗ್

By Kannadaprabha NewsFirst Published Feb 3, 2021, 7:47 AM IST
Highlights

 ರಕ್ಷಣಾ ವಿಷಯದಲ್ಲಿ ಇತರೆ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಚ್‌ಎಎಲ್‌ಗೆ ಇನ್ನಷ್ಟು ಅವಕಾಶಗಳು ಲಭ್ಯವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಬೆಂಗಳೂರು (ಫೆ.03):  ಮುಂದಿನ ಮೂರ್ನಾಲು ವರ್ಷದಲ್ಲಿ ಭಾರತ ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ ಗುರಿಯನ್ನು ತಲುಪುವ ಸಾಧ್ಯತೆ ಇದ್ದು, ರಕ್ಷಣಾ ವಿಷಯದಲ್ಲಿ ಇತರೆ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಸರಿಯಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ತೇಜಸ್‌ ಲಘು ಯುದ್ಧ ವಿಮಾನದ (ಎಲ್‌ಸಿಎ) ಎರಡನೇ ಘಟಕಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‌ ಸಮಯದಲ್ಲೂ ಎಚ್‌ಎಎಲ್‌ ಸಿಬ್ಬಂದಿ ಅವಿರತವಾಗಿ ಶ್ರಮಿಸಿ ಅತ್ಯಾಧುನಿಕ ಮೂಲ ಸೌಕರ್ಯ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟುಅವಕಾಶಗಳು   ಬರಲಿವೆ. ರಕ್ಷಣಾ ವಿಷಯದಲ್ಲಿ ಇತರ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಸರಿಯಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಎಚ್‌ಎಎಲ್‌ ಅನ್ನು ಮತ್ತಷ್ಟುಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ತೇಜಸ್‌ ವಿಮಾನ ಖರೀದಿಗೆ ಹಲವು ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸುತ್ತಿವೆ. ತೇಜಸ್‌ ದೇಶೀಯವಾಗಿ ಅಭಿವೃದ್ಧಿ ಆಗಿರುವುದು ಮಾತ್ರವೇ ಅಲ್ಲ, ಅದಕ್ಕೆ ಸಮನಾದ ವಿದೇಶದ ಹಲವು ಯುದ್ಧ ವಿಮಾನಗಳಿಗಿಂತಲೂ ಉತ್ತಮ ಸಾಮರ್ಥ್ಯ ಹೊಂದಿದೆ. ಎಂಜಿನ್‌ ಸಾಮರ್ಥ್ಯ, ರಾಡಾರ್‌ ವ್ಯವಸ್ಥೆ, ಆಗಸದಲ್ಲಿಯೇ ಇಂಧನ ಭರ್ತಿ ವ್ಯವಸ್ಥೆ ಮತ್ತು ನಿರ್ವಹಣೆ ಉತ್ತಮವಾಗಿದೆ. ಬೇರೆ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ ಎಂದರು.

ಏರ್ ಶೋ ಕಣ್ತುಂಬಿಕೊಳ್ಳಲು ಹೆಚ್ಚುವರಿ ಬಸ್: ಡೋಂಟ್ ಮಿಸ್

ಲಘು ಯುದ್ಧ ವಿಮಾನಗಳ ಉತ್ಪಾದನೆ ಹೆಚ್ಚಿಸಲು ಬೇಕಿರುವ ಮೂಲ ಸೌಕರ್ಯವನ್ನು ಎಚ್‌ಎಎಲ್‌ ವಿಸ್ತರಿಸಿದೆ. ಇದು ಆತ್ಮ ನಿರ್ಭರ ಭಾರತಕ್ಕೆ ಉತ್ತಮ ಉದಾಹರಣೆ. ಈ ಕಾರಣದಿಂದಾಗಿಯೇ ಭಾರತೀಯ ವಾಯುಪಡೆಗಾಗಿ (ಐಎಎಫ್‌) ಸ್ವದೇಶಿ ನಿರ್ಮಿತ 83 ತೇಜಸ್‌ ಎಂಕೆ 1ಎ ವಿಮಾನಗಳನ್ನು ತಯಾರಿಸುವ ಗುತ್ತಿಗೆ ಎಚ್‌ಎಎಲ್‌ಗೆ ಲಭಿಸಿದೆ. ತೇಜಸ್‌ ವಿಮಾನವು ಭಾರತದ ಹೆಮ್ಮೆ. ನಾವು ನಮ್ಮ ನೆಲದಲ್ಲಿ ಉತ್ಕ ೃಷ್ಟಗುಣಮಟ್ಟದ ಯುದ್ಧ ವಿಮಾನಗಳನ್ನು ತಯಾರಿಸುತ್ತೇವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಎಚ್‌ಎಎಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಆರ್‌. ಮಾಧವನ್‌ ಮಾತನಾಡಿ, ವಾಯುಪಡೆಯ ಹೊಸ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಎಚ್‌ಎಎಲ್‌ನ ಬೆಂಗಳೂರು ಘಟಕದ ವಾರ್ಷಿಕ ವಿಮಾನ ತಯಾರಿಕಾ ಸಾಮರ್ಥ್ಯವನ್ನು 8 ರಿಂದ 16ಕ್ಕೆ ಏರಿಸಲಾಗಿದೆ. ಮೂರು ವರ್ಷಗಳ ನಂತರ ವಿಮಾನಗಳ ಪೂರೈಕೆ ಆರಂಭವಾಗಲಿದೆ ಎಂದು ತಿಳಿಸಿದರು.

click me!