
ಗುಜರಾತ್(ಜೂ.28): ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಬಿಜೆಪಿ ಪಕ್ಷ ಸೇರುವುದು ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದ ಗುಜರಾತಿನ ಎನ್ಸಿ ಗಾಂಧಿ ಬಿವಿ ಗಾಂಧಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಿನ್ಸಿಪಾಲ್ ರಂಜನ್ ಗೊಹಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೂನ್ 24 ರಂದು ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ರಂಜನ್ ಗೊಹಿಲ್ ಹೊರಡಿಸಿದ ಸುತ್ತೋಲೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಬಿಜೆಪಿ ಪಕ್ಷದ ಸದಸ್ಯತ್ವ ಪಡೆಯಬೇಕು. ಇನ್ನು ಭವನಗರ ಮುನ್ಸಿಪಲ್ ಕಾರ್ಪೋರೇಶನ್ ವಲಯದೊಳಗಿರುವ ಎಲ್ಲರೂ ಬಿಜೆಪಿ ಚುನಾವಣಾ ಸಮಿತಿಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಬೇಕು. ಇನ್ನು ಬಿಜೆಪಿ ಪಕ್ಷ ಸೇರಿಕೊಳ್ಳಲು, ಎಲ್ಲರೂ ಮೊಬೈಲ್ ತನ್ನಿ ಎಂದು ಸುತ್ತೋಲೆ ಹೊರಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಸರ್ಕಾರಿ ಕಾಲೇಜಿನಲ್ಲಿ ಮೆಡಿಕಲ್ ಕಾಲೇಜು ವಿಂಗ್ , ಚಿತ್ರದುರ್ಗ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು
ಇದರ ವಿರುದ್ಧ ವಿದ್ಯಾರ್ಥಿಗಳು ಪೋಷಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು. ಈ ಕುರಿತು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಎಂ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕಾಲೇಜು ಪ್ರಿನ್ಸಿಪಾಲ್ ಶಿಕ್ಷಣ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದಾರೆ. ಶಿಕ್ಷಣವನ್ನು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಗುಜರಾತ್ನ ಹಲವು ಕಾಲೇಜಿನಲ್ಲಿ ತಮ್ಮ ಕಾರ್ಯಕರ್ತರನ್ನೇ ಶಿಕ್ಷಕರು, ಪ್ರಿನ್ಸಿಪಾಲ್ ಮಾಡಿಕೊಂಡಿದೆ. ಇದಕ್ಕೆ ಈ ಅವಾಂತರ ಎಂದು ಅರ್ಜುನ್ ಎಂ ಆರೋಪಿಸಿದ್ದರು.
ವಿವಾದ ಜೋರಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಪ್ರಿನ್ಸಿಪಾಲ್ ಕರೆಸೆ ಕ್ಲಾಸ್ ತೆಗೆದುಕೊಂಡಿದೆ. ಇದೀಗ ಪ್ರಿನ್ಸಿಪಾಲ್ ರಾಜೀನಾಮೆ ನೀಡಿದ್ದಾರೆ. ಕಾಲೇಜು ಯಾವುದೇ ರಾಜಕೀಯ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಕಾಲೇಜು ಟ್ರಸ್ಟ್ ಹೇಳಿದೆ. ಮಹಿಳಾ ಕಾಲೇಜು ಉತ್ತಮ ಶಿಕ್ಷಣದತ್ತ ಗಮನ ನೀಡಿದೆ. ವಿದ್ಯಾರ್ಥಿನಿಯರನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡಿ ಅವರ ಭವಿಷ್ಯವನ್ನು ಉತ್ತಮಪಡಿಸುವು ಕುರಿತು ಮಾತ್ರ ಯೋಚಿಸುತ್ತಿದೆ. ಇಲ್ಲಿ ಯಾವುದೇ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇತ್ತ ಗುಜರಾತ್ ಬಿಜೆಪಿ ಕೂಡ ಘಟನೆಗೆ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ಕಾಲೇಜು ಪ್ರಿನ್ಸಿಪಾಲ್ ಮೂಲಕ ಯಾರನ್ನೂ ಬಿಜೆಪಿ ಸೇರಿಕೊಳ್ಳಲು ನಿರ್ದೇಶನ ನೀಡಿಲ್ಲ. ಇದು ಕಾಲೇಜಿನ ಪ್ರಿನ್ಸಿಪಾಲ್ ವೈಯುಕ್ತಿಕವಾಗಿ ನೀಡಿದ ಸುತ್ತೋಲೆಯಾಗಿದೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಕಾಲೇಜಿನಲ್ಲಿ ಅಥವಾ ಸಮಾಜದಲ್ಲಿ ಬಿಜೆಪಿ ಯಾರನ್ನೂ ಒತ್ತಾಯಪೂರ್ವಕವಾಗಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಇಷ್ಟೇ ಅಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಲೇಜು ಪ್ರಿನ್ಸಿಪಾಲ್ ಕೆನ್ನೆಗೆ ಬಾರಿಸಿದ ಜೆಡಿಎಸ್ ಶಾಸಕ ಶ್ರೀನಿವಾಸ್
ಬಿಜೆಪಿ ಉತ್ತರಕ್ಕೆ ತೃಪ್ತಿಪಡದ ವಿಪಕ್ಷಗಳು ಮತ್ತೆ ಆರೋಪಗಳ ಸುರಿಮಳೆಗೈದಿದೆ. ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ಕೇಸರಿಮಯ ಮಾಡುತ್ತಿರುವುದು ಇದೇ ಮೊದಲ ಘಟನೆಯಲ್ಲ. ಹಲವು ರೂಪದಲ್ಲಿ ಬಿಜೆಪಿ ಕೇಸರಿಮಯ ಮಾಡುತ್ತಿದೆ. ಇದೀಗ ನೇರವಾಗಿ ವಿದ್ಯಾರ್ಥಿಗಳನ್ನು ಪಕ್ಷ ಸೇರಿಕೊಳ್ಳಲು ಸೂಚಿಸುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಈಗಿನಿಂದಲೇ ಮಾಡುತ್ತಿದೆ ಎಂದು ಆಮ್ ಆದ್ಮಿ ಗುಜರಾತ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ