ಗುಜರಾತ್‌: ಮತ್ತೆ 5000 ಕೋಟಿ ರು. ಮೌಲ್ಯದ ಕೊಕೇನ್‌ ವಶ

By Kannadaprabha NewsFirst Published Oct 14, 2024, 10:24 AM IST
Highlights

 ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. 

ನವದೆಹಲಿ: ಭಾನುವಾರ ನಡೆಸಿದ ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಪೊಲೀಸರು ಮತ್ತು ಗುಜರಾತ್ ಪೊಲೀಸರ ಜಂಟಿ ತಂಡ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಆವರಣದ ಮೇಲೆ ದಾಳಿ ನಡೆಸಿದ್ದು, ಈ ವೇಳೆ 518 ಕೆಜಿ ಡ್ರಗ್ಸ್ ಪತ್ತೆಯಾಗಿದೆ.

ದೆಹಲಿ ಪೊಲೀಸ್ ವಿಶೇಷ ಘಟಕವು ಇತ್ತೀಚೆಗೆ ದೆಹಲಿಯಲ್ಲಿ ನಡೆಸಿದ 2 ಕಾರ್ಯಾಚರಣೆಗಳಲ್ಲಿ 700 ಕೆಜಿಗೂ ಹೆಚ್ಚು ಕೊಕೇನ್ ಅನ್ನು ವಶಪಡಿಸಿಕೊಂಡಿತ್ತು. ಆ ಪೈಕಿ ಅ. 2 ರಂದು ದಕ್ಷಿಣ ದೆಹಲಿಯಲ್ಲಿ 500 ಕೆಜಿ ಕೊಕೇನ್ ವಶಪಡಿಸಿಕೊಂಡರೆ, ರಮೇಶ್ ನಗರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 200 ಕೆಜಿ ಕೊಕೇನ್ ಪತ್ತೆಯಾಗಿತ್ತು. ಇವುಗಳ ಮೌಲ್ಯ 5600 ಕೋಟಿ ರು. ಆಗಿತ್ತು. ಮಧ್ಯಪ್ರದೇಶದಲ್ಲೂ ಬಳಿಕ 2000 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಭಾನುವಾರದ ದಾಳಿಯೂ ಸೇರಿದಂತೆ ಈ ತಿಂಗಳು ಒಟ್ಟು 1,289 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ 13,000 ಕೋಟಿ ರು. ಆಗಿದೆ.

Latest Videos

ಕೊಡಗು: ಥೈಲ್ಯಾಂಡ್‌ನಿಂದ ಭಾರತದ ಮೂಲಕ ದುಬೈಗೆ ಗಾಂಜಾ ಸಾಗಾಟ, 7 ಅಂತಾರಾಷ್ಟ್ರೀಯ ಪೆಡ್ಲರ್ಸ್‌ ಅರೆಸ್ಟ್‌

ವಿಮಾನ ತಯಾರಕ ಬೋಯಿಂಗ್‌ನಲ್ಲಿ 17,000 ಸಿಬ್ಬಂದಿ ಕಡಿತ

ಸಿಯಾಟಲ್‌: ವಿಮಾನ ತಯಾರಕ ಕಂಪನಿ ಬೋಯಿಂಗ್‌ ಜಗತ್ತಿನಾದ್ಯಂತ 17,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ. ಇದು ತನ್ನ ನೌಕರರ ಒಟ್ಟು ಪ್ರಮಾಣದಲ್ಲಿ ಶೇ.10ರಷ್ಟಾಗಿದೆ. ಹಣಕಾಸು ಪುನರ್‌ಯೋಜನೆಯ ಭಾಗವಾಗಿ ಬೋಯಿಂಗ್‌ ಈ ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಪ್ರಸ್ತುತ ಬೋಯಿಂಗ್‌ ವಿರುದ್ಧ ನೌಕರರು ನಡೆಸುತ್ತಿರುವ ಮುಷ್ಕರದ ಪ್ರತಿಯಾಗಿಯೂ ಈ ಕ್ರಮವನ್ನು ಕಂಪನಿ ತೆಗೆದುಕೊಂಡಿದೆ.

ಇದರ ಪರಿಣಾಮ, ಬೋಯಿಂಗ್‌ನ ಬಹುನಿರೀಕ್ಷಿತ ವಿಮಾನ 777X ಇನ್ನು ಒಂದು ವರ್ಷ ತಡವಾಗಿ ಗ್ರಾಹಕರಿಗೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಬೋಯಿಂಗ್‌ 737 ಮ್ಯಾಕ್ಸ್‌, 777 ಮತ್ತು 767 ವಿಮಾನಗಳ ಡೆಲಿವರಿಯಲ್ಲಿಯೂ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರೈಲಿನಲ್ಲಿ ಟಿಫಿನ್ ಹಂಚಿ ತಿನ್ನುತ್ತಿದ್ದ 'ಮರ್ಯಾದಸ್ಥ ಕುಟುಂಬದ' ಬಂಧನ: ಆಗಿದ್ದೇನು?

ಪಿಎಂ ಗತಿಶಕ್ತಿಗೆ 3 ವರ್ಷ: ಮೋದಿ ಹರ್ಷ

ನವದೆಹಲಿ: ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಯೋಜನೆಯು ಭಾರತದ ಮೂಲ ಸೌಕರ್ಯವನ್ನು ಕ್ರಾಂತಿಗೊಳಿಸುವ ಗುರಿ ಹೊಂದಿದೆ. ವಿವಿಧ ವಲಯಗಳಲ್ಲಿ ಪರಿಣಾಮಕಾರಿ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಕ್ಟೋಬರ್‌ 13, 2021ರಂದು ಪ್ರಾರಂಭವಾದ ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್ ಯೋಜನೆ ಕೇಂದ್ರ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ ವೇಗ ನೀಡುವ ಉದ್ದೇಶ ಹೊಂದಿದೆ. 

ಇದಕ್ಕೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪ್ರಧಾನಿ, ಪ್ರಧಾನಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್ ಭಾರತದ ಮೂಲ ಸೌಕರ್ಯವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿರುವ ಪರಿವರ್ತಕ ಉಪಕ್ರಮವಾಗಿದೆ. ಇದು ಬಹು ಮಾದರಿ ಸಂಪರ್ಕವನ್ನು ಗಮನಾರ್ಹವಾಗಿ ವೃದ್ಧಿಸಿದೆ. ವಲಯಗಳಾದ್ಯಂತ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಮಧ್ಯಸ್ಥಗಾರರ ತಡೆರಹಿತ ಏಕೀಕರಣವು ಲಾಜಿಸ್ಟಿಕ್‌ ಅನ್ನು ಹೆಚ್ಚಿಸಲು, ವಿಳಂಬವನ್ನು ಕಡಿಮೆ ಮಾಡಲು ನೆರವಾಗಿದೆ. ಇದರಿಂದ ಹಲವಾರು ಜನರಿಗೆ ಹೊಸ ಅವಕಾಶಗಳ ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ.

click me!