ತುಕ್ಕು ಹಿಡಿದ ಸೇತುವೆಗೆ ಬಣ್ಣ ಬಳಿದು ನಾಟಕ: Bridge Collapse ದೇವರಿಚ್ಛೆ ಎಂದ ಕಂಪನಿ ಮ್ಯಾನೇಜರ್

By Kannadaprabha NewsFirst Published Nov 3, 2022, 9:11 AM IST
Highlights

ಅರ್ಹತೆ ಇಲ್ಲದ ಕಂಪನಿಗೆ ಸೇತುವೆ ನವೀಕರಣ ಗುತ್ತಿಗೆ ನೀಡಲಾಗಿತ್ತು. ಅವರು ತುಕ್ಕು ಹಿಡಿದರೂ ಸೇತುವೆ ಕೇಬಲ್‌ ಬದಲಿಸಿರಲಿಲ್ಲ, ಕೇವಲ ಫ್ಲೋರ್‌ ಮಾತ್ರ ಬದಲಿಸಲಾಗಿತ್ತು. ಹೀಗಾಗಿ ಭಾರ ತಾಳದೇ ಸೇತುವೆ ಎರಡು ತುಂಡಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ಫೊರೆನ್ಸಿಕ್‌ ವರದಿಯಲ್ಲಿ ಸ್ಫೋಟಕ ಮಾಹಿತಿ ಬಂದಿದೆ. 

ಮೋರ್ಬಿ (ಗುಜರಾತ್‌): 135 ಜನರ ಬಲಿಪಡೆದ ಮೋರ್ಬಿ (Morbi) ಸೇತುವೆ ದುರಂತಕ್ಕೆ (Bridge Collapse) ಸಂಬಂಧಿಸಿದಂತೆ ಕೆಲವು ಆಘಾತಕಾರಿ ವಿಷಯಗಳನ್ನು ವಿಧಿವಿಜ್ಞಾನ ಪರಿಶೀಲನಾ ವರದಿ (Report) ಬಿಚ್ಚಿಟ್ಟಿದೆ. ‘ಸೇತುವೆಯನ್ನು ನವೀಕರಣ ಮಾಡಿದ್ದರೂ ಕೇವಲ ಸೇತುವೆಯ ಫ್ಲೋರ್‌ ಮಾತ್ರ ಬದಲಿಸಲಾಗಿತ್ತು. ಸೇತುವೆಗೆ ಆಧಾರ ನೀಡುವ ಕೇಬಲ್‌ ಅನ್ನೇ ಬದಲಿಸಿರಲಿಲ್ಲ’ ಎಂದು ಅದು ಹೇಳಿದೆ. ಇದೇ ವೇಳೆ, ‘ನವೀಕರಣ ಮಾಡಿದ ಗುತ್ತಿಗೆದಾರರು ಈ ಕೆಲಸ ಮಾಡಲು ಅರ್ಹರೇ ಆಗಿರಲಿಲ್ಲ’ ಎಂದು ಕೋರ್ಟ್‌ಗೆ ಪ್ರಾಸಿಕ್ಯೂಶನ್‌ ಮಾಹಿತಿ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಸೇತುವೆ ನಿರ್ವಹಣೆಯ ಹೊಣೆ ಹೊತ್ತಿದ್ದ ಅಜಂತಾ ಒರೇವಾ ಕಂಪನಿಯ (Ajanta Oreva Company) ನಾಲ್ವರು ಹಾಗೂ ಇತರ ಐವರನ್ನು ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಎಂ.ಜೆ. ಖಾನ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಒರೇವಾದ ಇಬ್ಬರು ಮ್ಯಾನೇಜರ್‌ ಹಾಗೂ ಇಬ್ಬರು ಸೇತುವೆ ರಿಪೇರಿ ಗುತ್ತಿಗೆದಾರರನ್ನು ಕೋರ್ಟ್‌ ಶನಿವಾರದವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿತು. ಸೇತುವೆಯ ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಬುಕಿಂಗ್‌ ಕ್ಲರ್ಕ್‌ಗಳು ಸೇರಿ ಐವರನ್ನು ಪೊಲೀಸರು ತಮ್ಮ ವಶಕ್ಕೆ ಕೇಳದ ಕಾರಣ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿತು.

ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ವಿಧಿವಿಜ್ಞಾನ ವರದಿ ಸಲ್ಲಿಸಿದ ಸರ್ಕಾರಿ ವಕೀಲ (ಪ್ರಾಸಿಕ್ಯೂಟರ್‌) ಎಚ್‌.ಎಚ್‌. ಪಾಂಚಾಲ್‌, ‘ಸೇತುವೆಯ ಫ್ಲೋರ್‌ ಮಾತ್ರ ಹೊಸದಾಗಿ ಹಾಕಲಾಗಿತ್ತು. ಕೇಬಲ್‌ ತುಕ್ಕು ಹಿಡಿದರೂ ಅದನ್ನು ಬದಲಿಸಿರಲಿಲ್ಲ. ಹೀಗಾಗಿ ಜನರು ಹಾಗೂ 4 ಪದರಗಳ ಹೊಸ ಅಲ್ಯುಮಿನಿಯಂ ಶೀಟ್‌ಗಳ ಫ್ಲೋರ್‌ನ ಭಾರ ತಾಳದೇ ಸೇತುವೆ ತುಂಡಾಗಿದೆ ಎಂದು ಫೊರೆನ್ಸಿಕ್‌ ವರದಿಯಲ್ಲಿದೆ’ ಎಂದು ಹೇಳಿದರು.

ಇದನ್ನು ಓದಿ: Gujarat ತೂಗು ಸೇತುವೆ ಕುಸಿತ: 132 ಜನರ ಬಲಿ; ಮುಂದುವರಿದ ರಕ್ಷಣಾ ಕಾರ್ಯ

ಇದೇ ವೇಳೆ, ‘ಸೇತುವೆ ರಿಪೇರಿಗೂ ಮುನ್ನ ಆಡಿಟ್‌ ನಡೆದಿರಲಿಲ್ಲ. 2007 ಹಾಗೂ 2022ರಲ್ಲಿ ಬಂಧಿತ ಇಬ್ಬರು ಗುತ್ತಿಗೆದಾರರಾದ ಪ್ರಕಾಶ್‌ ಪರ್ಮಾರ್‌ ಹಾಗೂ ದೇವಾಂಗ್‌ ಪರ್ಮಾರ್‌ ಅವರಿಗೆ ಸೇತುವೆ ನವೀಕರಣ ಗುತ್ತಿಗೆ ನೀಡಲಾಗಿತ್ತು. ಇವರಿಗೆ ಸೇತುವೆ ರಿಪೇರಿಯ ಯಾವುದೇ ಅನುಭವ ಇಲ್ಲದಿದ್ದರೂ ಗುತ್ತಿಗೆ ನೀಡಿದ್ದು ಹೇಗೆ ಎಂಬುದೇ ಪ್ರಶ್ನೆ. ಇದರ ಹಿಂದಿನ ರಹಸ್ಯ ತಿಳಿಯಲು ಇವರ ವಿಚಾರಣೆ ಅಗತ್ಯವಾಗಿದೆ’ ಎಂದು ಹೇಳಿದರು.

ಸೇತುವೆ ಕುಸಿತ ದೇವರಿಚ್ಛೆ: ಆರೋಪಿ ಮ್ಯಾನೇಜರ್‌
ಮೋರ್ಬಿ: 135 ಜನರ ಬಲಿಪಡೆದ ಮೋರ್ಬಿ ಸೇತುವೆ ದುರಂತವನ್ನು ‘ದೇವರಿಚ್ಛೆ’ ಎಂದು ಬಂಧಿತ ಅಜಂತಾ ಒರೇವಾ ಕಂಪನಿ ಮ್ಯಾನೇಜರ್‌ ದೀಪಕ್‌ ಪಾರೇಖ್‌, ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದಾನೆ. ಬುಧವಾರ ಕೋರ್ಟಿಗೆ ಹಾಜರಾಗಿದ್ದ ಆತ, ‘ಇದು ಭಗವಂತನ ಇಚ್ಛೆ ಆಗಿತ್ತು. ಅದಕ್ಕೆಂದೇ ದುರೃಷ್ಟಕರ ಘಟನೆ ನಡೆಯಿತು’ ಎಂದು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಇದನ್ನೂ ಓದಿ: Gujaratನಲ್ಲಿ ಕುಸಿದ ತೂಗು ಸೇತುವೆ: 60ಕ್ಕೂ ಹೆಚ್ಚು ಮೃತದೇಹಗಳು ಹೊರಕ್ಕೆ; ಇನ್ನೂ ಹಲವರು ಅಪಾಯದಲ್ಲಿ ಸಿಲುಕಿರುವ ಶಂಕೆ..!

click me!