
ಮುಂಬೈ(ಡಿ.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಲು ಜನ ಹೆದರುತ್ತಾರೆ ಎಂಬ ಪ್ರಖ್ಯಾತ ಉದ್ಯಮಿ ಹಾಗೂ ಬಜಾಜ್ ಗ್ರೂಪ್ ಮಾಲೀಕ ರಾಹುಲ್ ಬಜಾಜ್ ಹೇಳಿಕೆ ತೀವ್ರ ವಿರೋಧ ಸೃಷ್ಟಿಸಿದೆ.
ಮೋದಿ ಸರ್ಕಾರವನ್ನು ಟೀಕಿಸಲು ಜನ ಭಯ ಪಡುತ್ತಿದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ರಾಹುಲ್ ಬಜಾಜ್ ಟೀಕಿಸಿದ್ದಾರೆ.
ಮುಂಬೈನಲ್ಲಿ ಎಕನಾಮಿನ್ ಟೈಮ್ಸ್ ಆಯೋಜಿಸಿದ್ದ ‘ಇಟಿ ಅವಾರ್ಡ್ಸ್‘ ಕಾರ್ಯಕ್ರಮದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆಯೇ ರಾಹುಲ್ ಬಜಾಜ್ ಈ ರೀತಿ ಹೇಳಿಕೆ ನೀಡಿದ್ದು ವಿಶೇಷ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೀಕೆ ಮಾಡಲು ಭಯವಾಗುತ್ತಿದೆ ಎಂದು ಬಜಾಜ್ ಹೇಳಿದರು.
ಪ್ರಧಾನಿ ಮೋದಿ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ಕೆಲವು ಆತಂಕಕಾರಿ ಘಟನೆಗಳೂ ನಡೆಯುತ್ತಿವೆ. ಆದರೆ ಈ ಕುರಿತು ಧ್ವನಿ ಎತ್ತಲು ಉದ್ಯಮ ರಂಗದ ಯಾರೊಬ್ಬರು ಮುಂದಾಗುತ್ತಿಲ್ಲ ಎಂದು ರಾಹುಲ್ ಬಜಾಜ್ ಹೇಳಿದರು. ಗುಂಪು ಹತ್ಯೆಗಳ ಕುರಿತು ರಾಹುಲ್ ಬಜಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಶಾ ಎದುರೇ ಉದ್ಯಮಿ ಖಡಕ್ ಮಾತು : ಹೆದರಬೇಡಿ ಎಂದ ವಿಡಿಯೋ ವೈರಲ್
ಇನ್ನು ಬಜಾಜ್ ಆರೋಪಗಳಿಗೆ ಉತ್ತರಿಸಿದ ಅಮಿತ್ ಶಾ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ಸುಳ್ಳು ಎಂದು ಹೇಳಿದರು. ಅದಾಗ್ಯೂ ಬಜಾಜ್ ಪ್ರಸ್ತಾಪಿಸಿದ ಅಂಶಗಳ ಕುರಿತು ಗಮನಹರಿಸಲಾಗುವುದು ಎಂದು ಶಾ ಭರವಸೆ ನೀಡಿದರು.
ಇನ್ನು ಮೋದಿ ಸರ್ಕಾರವನ್ನು ಟೀಕಸಿದ ರಾಹುಲ್ ಬಜಾಜ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತೊವಾಗಿದ್ದು, ಯುಪಿಎ ಅವಧಿಯಲ್ಲಿ ಲಾಭ ಮಾಡಿಕೊಂಡ ಬಜಾಜ್ ಸೋನಿಯಾ ಗಾಂಧಿ ಅವರನ್ನು ಹೊಗಳುವುದು ಅನಿವಾರ್ಯ ಎಂದು ನೆಟ್ಟಿಗರು ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟನೆ:
ಇನ್ನು ಉದ್ಯಮಿ ರಾಹುಲ್ ಬಜಾಜ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ, ದೇಶದಲ್ಲಿ ಭಯದ ವಾತಾವರಣ ಇದೆ ಎಂಬುದು ನಿಜವಾದರೆ ಗೃಹ ಸಚಿವರ ಮುಂದೆ ಬಜಾಜ್ ಇಷ್ಟು ಧೈರ್ಯವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ