
ನವದೆಹಲಿ: ದೇಶಸೇವೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ಅವರ ಪರಿವಾರಗಳಿಗೆ ಉಚಿತವಾಗಿ ಕಾನೂನು ನೆರವನ್ನು ಕೊಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಲ್ಸಾ)ವು ವೀರ ಪರಿವಾರ ಸಹಾಯತಾ ಯೋಜನೆ 2025 ಅಡಿಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರಿಗೆ ಭೂ ವ್ಯಾಜ್ಯ, ಕೌಟುಂಬಿಕ ಕಲಹ ಮೊದಲಾದ ವಿಷಯಗಳಲ್ಲಿ ಉಚಿತ ಕಾನೂನು ಸೇವೆ ನೀಡಲಿದೆ.
ನ್ಯಾ.ಸೂರ್ಯಕಾಂತ್ ಕನಸು:
ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದ ವೇಳೆ ಭಾರತೀಯ ಸೈನಿಕರು ತೋರಿದ ಶೌರ್ಯ ಸಾಹಸ, ಬಲಿದಾನಗಳಿಂದ ಪ್ರಭಾವಿತರಾದ, ನಾಲ್ಸಾದ ಕಾರ್ಯಾಧ್ಯಕ್ಷರೂ ಆದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ನ್ಯಾ| ಸೂರ್ಯಕಾಂತ್ ಅವರು, ಯೋಧರ ಪರಿವಾರಗಳಿಗೆ ನೆರವಾಗಲು ಈ ಯೋಜನೆಯ ಯೋಚನೆ ಮಾಡಿದ್ದರು. ಈ ಮೂಲಕ, ದೇಶ ಕಾಯುವ ಯೋಧರ ಕೈ ಹಿಡಿಯಲು ನ್ಯಾಯಾಂಗವು ಮುಂದಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಈ ಯೋಜನೆಯನ್ನು 2025ರ ನ.24ರಂದು ನ್ಯಾ। ಕಾಂತ್ ಅವರು ಮುಖ್ಯ ನ್ಯಾಯಮೂರ್ತಿಯ ಹುದ್ದೆಗೆ ಎರುವ ಮುನ್ನ ಜಾರಿಗೆ ತರಲಾಗುವುದು.
ಉಪಯೋಗವೇನು?: ವರ್ಷದಲ್ಲಿ ಹಲವು ತಿಂಗಳು ಮನೆಯಿಂದ ದೂರವಿರುವ ಸೈನಿಕರ, ಭೂಮಿ, ಆಸ್ತಿ, ಕೌಟುಂಬಿಕ ಬಿಕ್ಕಟ್ಟುಗಳಂತಹ ಸಮಸ್ಯೆಗಳು ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಿದ್ದರೆ, ಬೇಕೆಂದಾಗ ಊರಿಗೆ ಮರಳಲಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಯೋಧರ ಕುಟುಂಬಕ್ಕೆ ಸೂಕ್ತ ರೀತಿಯ ಕಾನೂನು ನೆರವು ಸಿಕ್ಕಿರುವುದಿಲ್ಲ. ಹೀಗಿರುವಾಗ, ಅಂಥವರ ಅನುಕೂಲಕ್ಕಾಗಿ ನಾಲ್ಸಾ ಅವರ ನೆರವಿಗೆ ಬಂದು, ಸುಗಮ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಸೌಲಭ್ಯವು ಬಿಎಸ್ಎಫ್, ಸಿಆರ್ ಪಿಎಫ್, ಐಟಿಬಿಪಿ ಸೇರಿದಂತೆ ಅರೆಸೇನಾಪಡೆಗಳಲ್ಲಿರುವವರಿಗೂ ಲಭಿಸುತ್ತದೆ.
ಯೋಧರ ಗೌರವಿಸಲು 3 ಯೋಜನೆ
ದ್ರಾಸ್ (ಕಾರ್ಗಿಲ್):1999ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿ ಭಾರತೀಯ ಯೋಧರು ವಿಜಯಧ್ವಜ ಹಾರಿಸಿದ ವಿಜಯ ದಿವಸದಂದು, ಆ ಸೈನಿಕರಿಗೆ ಗೌರವ ಅರ್ಪಿಸುವ ಸಲುವಾಗಿ 3 ಯೋಜನೆಗಳನ್ನು ಆರಂಭಿಸಲಾಗಿದೆ. ಮೂರೂ ರಕ್ಷಣಾಪಡೆಗಳ ಮುಖ್ಯಸ್ಥ ಜ/ಅನಿಲ್ ಚೌಹಾಣ್ ಅವರು ಶನಿವಾರ ಇವುಗಳಿಗೆ ಚಾಲನೆ ನೀಡಿದ್ದಾರೆ. ತ್ಯಾಗ-ಬಲಿದಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ದೇಶಭಕ್ತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ 3 ಯೋಜನೆ ಶುರು ಮಾಡಲಾಗಿದೆ.
'ಆಪರೇಷನ್ ಸಿಂದೂರ' ಇನ್ನು ಮಕ್ಕಳಿಗೆ ಪಠ್ಯ!
ನವದೆಹಲಿ: ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್ಸಿಇಆರ್ಟಿ) ಇದೀಗ ಆ ಕಾರ್ಯಾಚರಣೆಗೆ ಸಂಬಂಧಿಸಿದಂತೆ 2 ಕಿರುಹೊತ್ತಿಗೆಗಳನ್ನು ಸಿದ್ಧಪಡಿಸುತ್ತಿದೆ. 3ರಿಂದ
8ನೇ ತರಗತಿ ಮತ್ತು 9 ರಿಂದ 12ನೇ ತರಗತಿಯ ಮಕ್ಕಳಿಗೆ 8-10 ಪುಟಗಳ ಪ್ರತ್ಯೇಕ ಪುಸ್ತಕಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಪಾಕ್ ಉಗ್ರರು ಪಹಲ್ಗಾಂನಲ್ಲಿ ಅಮಾಯಕರನ್ನು ಅಮಾನವೀಯವಾಗಿ ಕೊಂದದ್ದಕ್ಕೆ ಪ್ರತೀಕಾರವಾಗಿ ಭಾರತ ಅಪರೇಷನ್ ಸಿಂದೂರದ ಹೆಸರಲ್ಲಿ ನಿಖರ ದಾಳಿ ನಡೆಸಿ, ಜತೆಗೆ ರಾಜತಾಂತ್ರಿಕ ಮಾರ್ಗದ ಮೂಲಕವೂ ಪಾಕ್ಗೆ ಬುದ್ದಿ ಕಲಿಸಿದ ಸಾಹಸವನ್ನು ವಿವರಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ